ಭಾರತ ಟಿ20 ತಂಡಕ್ಕೆ ಹೊಸ ಉಪನಾಯಕನ ನೇಮಕ; ಗಿಲ್​, ಜೈಸ್ವಾಲ್​, ಪಂತ್​ಗೆ ವಿಶ್ರಾಂತಿ

blank

ಮುಂಬೈ: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ಜನವರಿ 22ರಿಂದ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ಸೂರ್ಯಕುಮಾರ್​ ಯಾದವ್​ ಸಾರಥ್ಯದಲ್ಲಿ 15 ಆಟಗಾರ ಭಾರತ ತಂಡವನ್ನು ಬಿಸಿಸಿಐ ಶನಿವಾರ ಪ್ರಕಟಿಸಿದ್ದು, ವೇಗಿ ಮೊಹಮದ್​ ಶಮಿ ಸುಮಾರು 14 ತಿಂಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಕಂಡಿದ್ದಾರೆ. ನಿತೀಶ್​ ಕುಮಾರ್​ ರೆಡ್ಡಿ, ವಾಷಿಂಗ್ಟನ್​ ಸುಂದರ್​ ಸಹಿತ ಬಾರ್ಡರ್​-ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಆಡಿದ್ದ ನಾಲ್ವರು ಆಟಗಾರರಷ್ಟೇ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

blank

2023ರ ನ.19ರಂದು ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಕೊನೆಯದಾಗಿ ಭಾರತ ಪರ ಆಡಿದ್ದ 34 ವರ್ಷದ ಶಮಿ, ಪಾದದ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಮರಳಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಆಡಿ ಫಿಟ್ನೆಸ್​ ಸಾಬೀತುಪಡಿಸಿರುವ ಶಮಿ, ಮುಂಬರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲೂ ಆಡುವ ಸಾಧ್ಯತೆ ಹೆಚ್ಚಳವಾಗಿದೆ. ಅರ್ಷದೀಪ್​ ಸಿಂಗ್​, ಹಾರ್ದಿಕ್​ ಪಾಂಡ್ಯ, ಸಂಜು ಸ್ಯಾಮ್ಸನ್​, ರಿಂಕು ಸಿಂಗ್​ ತಂಡದಲ್ಲಿರುವ ಇತರ ಪ್ರಮುಖ ಆಟಗಾರರಾಗಿದ್ದಾರೆ.

ಅಕ್ಷರ್​ ಪಟೇಲ್​ ಉಪನಾಯಕ
ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ಅಕ್ಷರ್​ ಪಟೇಲ್​ ಟಿ20 ತಂಡಕ್ಕೆ ಹೊಸ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಸಂಜು ಸ್ಯಾಮ್ಸನ್​ ಜತೆಗೆ ಧ್ರುವ ಜುರೆಲ್​ ತಂಡದಲ್ಲಿರುವ 2ನೇ ವಿಕೆಟ್​ ಕೀಪರ್​ ಆಗಿದ್ದಾರೆ. ರಿಷಭ್​ ಪಂತ್​ಗೆ ವಿಶ್ರಾಂತಿ ನೀಡಲಾಗಿದೆ. ಯಶಸ್ವಿ ಜೈಸ್ವಾಲ್​ಗೂ ವಿಶ್ರಾಂತಿ ನೀಡಲಾಗಿದ್ದು, ಅಭಿಷೇಕ್​ ಶರ್ಮ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ. ನಿತೀಶ್​ ರೆಡ್ಡಿ ಯಶಸ್ಸಿನ ಹಿನ್ನೆಲೆಯಲ್ಲಿ ಮತ್ತೋರ್ವ ಆಲ್ರೌಂಡರ್​ ಶಿವಂ ದುಬೆಗೆ ಕೊಕ್​ ನೀಡಲಾಗಿದೆ.

ಟಿ20 ಸರಣಿಯ 5 ಪಂದ್ಯಗಳು ಕ್ರಮವಾಗಿ ಕೋಲ್ಕತ (ಜ.22), ಚೆನ್ನೆ$ (ಜ.25), ರಾಜ್​ಕೋಟ್​ (ಜ.28), ಪುಣೆ (ಜ.31), ಮುಂಬೈನಲ್ಲಿ (ಫೆ.2) ನಡೆಯಲಿವೆ. ಕಳೆದ ವರ್ಷ ಟಿ20 ವಿಶ್ವಕಪ್​ ಬಳಿಕ ಭಾರತ ತಂಡದಲ್ಲಿ ಆಡಿದ್ದ ಹೆಚ್ಚಿನ ಐಪಿಎಲ್​ ತಾರೆಯರು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಭುಜದ ಗಾಯದಿಂದಾಗಿ ರಿಯಾನ್​ ಪರಾಗ್​ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಭಾರತ ಟಿ20 ತಂಡ: ಸೂರ್ಯಕುಮಾರ್​ (ನಾಯಕ), ಅಕ್ಷರ್​ ಪಟೇಲ್​ (ಉಪನಾಯಕ), ಸಂಜು ಸ್ಯಾಮ್ಸನ್​ (ವಿ.ಕೀ), ಅಭಿಷೇಕ್​ ಶರ್ಮ, ತಿಲಕ್​ ವರ್ಮ, ಹಾರ್ದಿಕ್​ ಪಾಂಡ್ಯ, ರಿಂಕು ಸಿಂಗ್​, ನಿತೀಶ್​ ರೆಡ್ಡಿ, ಹರ್ಷಿತ್​ ರಾಣಾ, ಅರ್ಷದೀಪ್​ ಸಿಂಗ್​, ಮೊಹಮದ್​ ಶಮಿ, ವರುಣ್​ ಚಕ್ರವರ್ತಿ, ರವಿ ಬಿಷ್ಣೋಯಿ, ವಾಷಿಂಗ್ಟನ್​ ಸುಂದರ್​, ಧ್ರುವ ಜುರೆಲ್​ (ವಿ.ಕೀ).

ಏಕದಿನ ತಂಡ ಪ್ರಕಟ ವಿಳಂಬ
ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಗೆ ಮಾತ್ರ ಭಾರತ ತಂಡ ಪ್ರಕಟಗೊಂಡಿದ್ದು, ಫೆ. 6ರಿಂದ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ತಂಡ ಆಯ್ಕೆ ವಿಳಂಬಗೊಂಡಿದೆ. ಚಾಂಪಿಯನ್ಸ್​ ಟ್ರೋಫಿಗೆ ಪ್ರಾಥಮಿಕ ತಂಡ ಪ್ರಕಟಿಸಲು ಭಾನುವಾರ ಕೊನೇ ದಿನವಾಗಿದ್ದರೂ, ಹೆಚ್ಚುವರಿ ಸಮಯ ನೀಡುವಂತೆ ಐಸಿಸಿಗೆ ಬಿಸಿಸಿಐ ಮನವಿ ಸಲ್ಲಿಸಿದೆ ಎನ್ನಲಾಗಿದೆ. ವೇಗಿ ಜಸ್​ಪ್ರೀತ್​ ಬುಮ್ರಾ ಫಿಟ್ನೆಸ್​ ಬಗೆಗಿನ ಗೊಂದಲ ಇದಕ್ಕೆ ಪ್ರಮುಖ ಕಾರಣವೆನಿಸಿದೆ.

ಪರಾಮರ್ಶೆ ಸಭೆಯಲ್ಲಿ ರೋಹಿತ್​, ಗಂಭೀರ್​
ಆಸ್ಟ್ರೆಲಿಯಾ ಪ್ರವಾಸದಲ್ಲಿ ಭಾರತ ತಂಡ ತೋರಿದ ನಿರ್ವಹಣೆಯ ಬಗ್ಗೆ ನಾಯಕ ರೋಹಿತ್​ ಶರ್ಮ, ಕೋಚ್​ ಗೌತಮ್​ ಗಂಭೀರ್​ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಜತೆಗೆ ಬಿಸಿಸಿಐ ಅಧಿಕಾರಿಗಳು ಶನಿವಾರ ಮುಂಬೈನಲ್ಲಿ ಪರಾಮರ್ಶೆ ಸಭೆ ನಡೆಸಿದರು. ಈ ವೇಳೆ ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಅವರ ಟೆಸ್ಟ್​ ಕ್ರಿಕೆಟ್​ ಭವಿಷ್ಯದ ಬಗ್ಗೆಯೂ ಚರ್ಚಿಸಲಾಯಿತು ಎನ್ನಲಾಗಿದೆ. ಭಾರತ ತಂಡದಲ್ಲಿನ ಸ್ಥಿತ್ಯಂತರವನ್ನು ನಿಭಾಯಿಸುವ ಬಗ್ಗೆ ಕೋಚ್​ ಗಂಭೀರ್​ ಅಭಿಪ್ರಾಯವನ್ನೂ ಪಡೆದುಕೊಳ್ಳಲಾಯಿತು ಎನ್ನಲಾಗಿದೆ.

ಮಹಿಳಾ ಕ್ರಿಕೆಟ್​ನಲ್ಲಿ ಮನಗೆದ್ದ ಮನೋವಿಜ್ಞಾನ ವಿದ್ಯಾರ್ಥಿನಿ ಪ್ರತೀಕಾ ರಾವಲ್​!

TAGGED:
Share This Article
blank

ರಾತ್ರಿ 9 ಗಂಟೆ ಮೇಲೆ ಊಟ ಮಾಡೋದ್ರಿಂದ ಅನಾನುಕೂಲಗಳೇ ಅಧಿಕ: ಊಟಕ್ಕೆ ಸರಿಯಾದ ಸಮಯ ಯಾವುದು? | Eating

Eating: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಡವಾಗಿ ಭೋಜನ ಮಾಡುತ್ತಿದ್ದಾರೆ, ಆದರೆ ವೈದ್ಯಕೀಯ ತಜ್ಞರು ಇದು…

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

blank