ಚೆನ್ನೈ: ಕರ್ನಾಟಕದ ಕುಳ್ಳ ಎಂದೇ ಖ್ಯಾತಿ ಪಡೆದಿದ್ದ ನಟ ದ್ವಾರಕೀಶ್ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಹೇಳಲಾಗಿದೆ. ದ್ವಾರಕೀಶ್ ಅವರ ಸಾವಿಗೆ ಚಿತ್ರರಂಗ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸ್ಯಾಂಡಲ್ವುಡ್ ಮಾತ್ರವಲ್ಲದೇ ಪರಭಾಷೆಗಳಲ್ಲೂ ಖ್ಯಾತಿ ಹೊಂದಿದ್ದ ನಟ ದ್ವಾರಕೀಶ್ ಸೂಪರ್ಸ್ಟಾರ್ ರಜನಿಕಾಂತ್ ಅವರೊಂದಿಗೆ ಸಿನಿಮಾ ಮಾಡಿದ್ದರು.

ನೆಚ್ಚಿನ ಗೆಳೆಯನ ನಿಧನಕ್ಕೆ ಸಂತಾಪ ಸೂಚಿಸಿರುವ ನಟ ರಜನಿಕಾಂತ್, ಆ ಎಲ್ಲ ಸಂಗತಿಗಳು ಈಗ ನೆನಪಾಗುತ್ತಿವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. 1983ರಲ್ಲಿ ರಜನಿಕಾಂತ್-ಶ್ರೀದೇವಿ ನಟಿಸಿದ್ದ ಅಡುತ ವಾರಿಸು ಸಿನಿಮಾವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು.
The demise of my long time dear friend Dwarakesh is very painful to me..starting his career as a comedian, he raised himself up to being a big producer and director.. fond memories come to my mind..my heartfelt condolences to his family and dear ones..
— Rajinikanth (@rajinikanth) April 16, 2024
ಇದನ್ನೂ ಓದಿ: ಪತ್ನಿ ನಿಧನರಾದ ದಿನದಂದೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್
ನನ್ನ ಬಹುಕಾಲದ ಆತ್ಮೀಯ ಗೆಳೆಯ ದ್ವಾರಕೀಶ್ ಅವರ ನಿಧನ ನನಗೆ ಅತೀವ ನೋವನ್ನು ತಂದಿದೆ. ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿ ದೊಡ್ಡ ನಿರ್ಮಾಪಕ, ನಿರ್ದೇಶಕನಾಗಿ ಬೆಳೆದು ನಿಂತ ಆ ಎಲ್ಲ ಸಂಗತಿಗಳು ಈಗ ನೆನಪಾಗುತ್ತಿವೆ. ಅವರ ಕುಟುಂಬ ಮತ್ತು ಆತ್ಮೀಯರಿಗೆ ನನ್ನ ಸಂತಾಪಗಳು ಎಂದು ನಟ ರಜನಿಕಾಂತ್ ಬರೆದುಕೊಂಡಿದ್ಧಾರೆ.
ಬುಧವಾರ (ಏಪ್ರಿಲ್ 17) ಬೆಳಗ್ಗೆ 7 ರಿಂದ 11 ಗಂಟೆಯಿಂದ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. 11 ಗಂಟೆ ಬಳಿಕ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ಧಾರೆ.