Mohammed Siraj : ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಂತರ ವೇಗಿ ಮೊಹಮ್ಮದ್ ಸಿರಾಜ್ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಇಂಗ್ಲೆಂಡ್ ವಿರುದ್ಧದ ತವರು ಸರಣಿಯ ಜೊತೆಗೆ ಭಾರತ ಇತ್ತೀಚೆಗೆ ಗೆಲುವು ದಾಖಲಿಸಿದ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಸಿರಾಜ್ ಅವರನ್ನು ಹೊರಗಿಡಲಾಗಿತ್ತು. ಆದಾಗ್ಯೂ, ಹೈದರಾಬಾದ್ ವೇಗಿ ಶೀಘ್ರದಲ್ಲೇ ರಾಷ್ಟ್ರೀಯ ತಂಡಕ್ಕೆ ಮರಳುವ ಭರವಸೆಯಲ್ಲಿದ್ದಾರೆ. ಈ ಸಮಯದಲ್ಲಿ ನಾನು ಯಾವುದರ ಬಗ್ಗೆಯೂ ಚಿಂತಿಸುತ್ತಿಲ್ಲ ಮತ್ತು ಐಪಿಎಲ್ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಲು ದೃಢನಿಶ್ಚಯ ಹೊಂದಿದ್ದೇನೆ ಎಂದು ಸಿರಾಜ್ ಹೇಳಿದ್ದಾರೆ.
ಸಿರಾಜ್ ಅವರು ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ನಿನ್ನೆ (ಮಾರ್ಚ್ 20) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿರಾಜ್, ವಾಸ್ತವವೆಂದರೆ ಭಾರತ ತಂಡದ ಆಯ್ಕೆ ನನ್ನ ಕೈಯಲ್ಲಿಲ್ಲ. ಚೆಂಡು ಮಾತ್ರ ನನ್ನ ಕೈಯಲ್ಲಿದೆ. ನಾನು ಅದರಿಂದ ಏನು ಮಾಡಬಹುದು ಎಂಬುದು ಮುಖ್ಯ. ತಂಡದ ಆಯ್ಕೆಯ ಬಗ್ಗೆ ನಾನು ಹೆಚ್ಚು ಯೋಚಿಸುವುದಿಲ್ಲ ಮತ್ತು ನನ್ನ ಮೇಲೆ ಒತ್ತಡ ಹೇರಿಕೊಳ್ಳುವುದಿಲ್ಲ. ಹಾಗೆ ಮಾಡುವುದರಿಂದ ನನ್ನ ಆಟದ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಇಂಗ್ಲೆಂಡ್ ಪ್ರವಾಸ ಮತ್ತು ಏಷ್ಯಾ ಕಪ್ನಂತಹ ಅವಕಾಶಗಳು ನನ್ನ ಮುಂದಿವೆ ಎಂದು ನನಗೆ ತಿಳಿದಿದೆ. ಏನಾಗುತ್ತದೆ ಎಂದು ಕಾದು ನೋಡೋಣ. ಇದೀಗ ನನ್ನ ಗಮನ ಐಪಿಎಲ್ ಮೇಲಿದೆ ಎಂದು ಸಿರಾಜ್ ಹೇಳಿದರು.
ಭಾರತ ತಂಡದಿಂದ ದೂರ ಉಳಿದಿರುವ ಸಮಯದಲ್ಲಿ ತಮ್ಮ ಬೌಲಿಂಗ್ ಮತ್ತು ಫಿಟ್ನೆಸ್ ಅನ್ನು ಸುಧಾರಿಸುವತ್ತ ಗಮನಹರಿಸುತ್ತಿರುವುದಾಗಿ ಸಿರಾಜ್ ಬಹಿರಂಗಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಾನು ನಿರಂತರವಾಗಿ ಆಡುತ್ತಿದ್ದೇನೆ. ಸಾಮಾನ್ಯವಾಗಿ, ನನಗೆ ಹೆಚ್ಚು ವಿಶ್ರಾಂತಿ ಸಿಗುವುದಿಲ್ಲ. ಆದರೆ, ಈ ಬಾರಿ ನನಗೆ ಉತ್ತಮ ವಿರಾಮ ಸಿಕ್ಕಿತು. ಅದಕ್ಕಾಗಿಯೇ ನಾನು ಬೌಲಿಂಗ್ ಮತ್ತು ಫಿಟ್ನೆಸ್ ಮೇಲೆ ಹೆಚ್ಚು ಗಮನಹರಿಸಿದೆ. ನಾನು ಹೊಸ ಚೆಂಡುಗಳು ಮತ್ತು ಹಳೆಯ ಚೆಂಡುಗಳೊಂದಿಗೆ ಬೌಲಿಂಗ್ ಮಾಡಿದೆ. ನಾನು ವಿಶೇಷವಾಗಿ ನಿಧಾನಗತಿಯ ಚೆಂಡುಗಳು ಮತ್ತು ಯಾರ್ಕರ್ಗಳೊಂದಿಗೆ ಅಭ್ಯಾಸ ಮಾಡಿದ್ದೇನೆ. ನಾನು ಐಪಿಎಲ್ನಲ್ಲಿ ಹೊಸದಾಗಿ ಕಲಿತ ವಿಷಯಗಳನ್ನು ಪ್ರದರ್ಶಿಸುತ್ತೇನೆ ಎಂದು ಸಿರಾಜ್ ಹೇಳಿದರು.
ಶುಭಮನ್ ಗಿಲ್ ನಾಯಕತ್ವದಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ಬೆಂಗಳೂರು ತಂಡದಿಂದ ದೂರವಿರುವುದು ಸ್ವಲ್ಪ ನೋವುಂಟುಮಾಡಿದೆ ನಿಜ. ನನ್ನ ವೃತ್ತಿ ಜೀವನದಲ್ಲಿ ಕೊಹ್ಲಿಯ ಪಾತ್ರ ಅಪಾರ. ಕೊಹ್ಲಿ ಎಲ್ಲ ರೀತಿಯಲ್ಲೂ ಬೆಂಬಲ ನನಗೆ ನೀಡಿದ್ದಾರೆ. ಆದರೆ, ಇಲ್ಲಿಯೂ ಗಿಲ್ ನಾಯಕತ್ವದಲ್ಲಿ ಉತ್ತಮ ತಂಡವಿದೆ. ಗಿಲ್ ನಾಯಕತ್ವದಲ್ಲಿ ಬೌಲರ್ಗಳಿಗೆ ಸಾಕಷ್ಟು ಸ್ವಾತಂತ್ರ್ಯವಿದೆ. ಅವರು ಹೊಸದನ್ನು ಪ್ರಯತ್ನಿಸುವುದನ್ನು ಎಂದಿಗೂ ತಡೆಯುವುದಿಲ್ಲ. ನಾವಿಬ್ಬರೂ ಒಂದೇ ಟೆಸ್ಟ್ನಲ್ಲಿ ನಮ್ಮ ಚೊಚ್ಚಲ ಪ್ರವೇಶ ಮಾಡಿದ್ದೇವೆ. ವೈಯಕ್ತಿಕ ಮಟ್ಟದಲ್ಲಿಯೂ ನಮಗೆ ಉತ್ತಮ ಬಾಂಧವ್ಯವಿದೆ ಎಂದು ಸಿರಾಜ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ರಬಾಡ, ರಶೀದ್, ಇಶಾಂತ್ ಮತ್ತು ಕೋಟ್ಜೀ ಅವರಂತಹ ಉನ್ನತ ಬೌಲರ್ಗಳನ್ನು ತಮ್ಮ ತಂಡದಲ್ಲಿ ಹೊಂದಿರುವುದು ಸಕಾರಾತ್ಮಕ ವಿಷಯ ಮತ್ತು ಇದು ಎಲ್ಲರ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸಿರಾಜ್ ತಿಳಿಸಿದರು. (ಏಜೆನ್ಸೀಸ್)
ಅಂದು ICC ಫೈನಲ್ನಲ್ಲಿ ಭಾರತದ ಹೀರೋ ಆಗಿದ್ದ ಈತ ಇಂದು IPL ಅಂಪೈರ್: ಕೊಹ್ಲಿ ಜತೆಯೂ ಆಡಿದ್ದರು! Umpire
ಕೆಟ್ಟ ಕೊಲೆಸ್ಟ್ರಾಲ್ ಅನ್ನು ನ್ಯಾಚುರಲ್ ಆಗಿ ಕಡಿಮೆ ಮಾಡಬೇಕಾ? ಕೇವಲ ಈ ಬದಲಾವಣೆ ಮಾಡಿ ಸಾಕು! Bad cholesterol