ಶಿವಮೊಗ್ಗ: ವಾಹನ ಚಾಲನೆ ವೇಳೆ ಸವಾರರ ಜೀವಕ್ಕೆ ಯಾವುದೇ ಸಂಚಕಾರ ಬಾರದೇ ಇರಲಿ ಎಂದು ಸರ್ಕಾರವು ಕಟ್ಟುನಿಟ್ಟಾದ ಸಂಚಾರಿ ನಿಯಮಗಳನ್ನು ಜಾರಿ ಮಾಡಿದ್ದು, ಇದನ್ನು ಪಾಲಿಸದಿರುವವರಿಗೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ತಡೆದಾಗ ಪೊಲೀಸರು ಮತ್ತು ಸವಾರರು ನಡುವೆ ಬಹಳಷ್ಟು ವಾಗ್ವಾದ ನಡೆಸುವುದು ಸಹಜ. ಆದರೆ ಶಿವಮೊಗ್ಗದ ಬಿ.ಎಚ್.ರಸ್ತೆಯಲ್ಲಿ ಕಾರು ಚಾಲಕ ದಂಡ ಪಾವತಿಸುವಂತೆ ಸೂಚಿಸಿದ್ದಕ್ಕೆ ಸಂಚಾರ ಠಾಣೆ ಪೇದೆಯನ್ನೇ ಕಾರಿನ (Car) ಬಾನೆಟ್ ಮೇಲೆ ಹೊತ್ತೊಯ್ದು ಜೀವದ ಜತೆ ಚೆಲ್ಲಾಟವಾಡಿರುವ ಘಟನೆ ಬೆಳಕಿಗೆ ಬಂದಿದೆ.
ಪೂರ್ವ ಸಂಚಾರ ಠಾಣೆಯ ಸಿಬ್ಬಂದಿಗಳು ಗುರುವಾರ ಮಧ್ಯಾಹ್ನ ಬಿ.ಎಚ್.ರಸ್ತೆಯ ಸಹ್ಯಾದ್ರಿ ಕಾಲೇಜು ಎದುರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಭದ್ರಾವತಿ ಕಡೆಯಿಂದ ಬಂದ ಬಿಳಿ ಕಾರನ್ನು ಸಂಚಾರ ಠಾಣೆ ಸಿಬ್ಬಂದಿಯೊಬ್ಬರು ತಡೆದು ರಸ್ತೆಯ ಪಕ್ಕಕ್ಕೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಚಾಲಕ ಕಾರನ್ನು ನಿಲ್ಲಿಸದೆ ಮುಂದೆ ಚಲಿಸಲು ಯತ್ನಿಸಿದ್ದಾನೆ.
ಚಾಲಕ ನಿಲ್ಲಿಸದೇ ಮುಂದೆ ತೆರಳಲು ಯತ್ನಿಸಿದಾಗ ಪೇದೆ ಕಾರಿನ ಮುಂಭಾಗ ಬಂದು ತಡೆಯಲು ಯತ್ನಿಸಿದ್ದಾರೆ. ಆದರೂ ನಿಲ್ಲಿಸಿದಿದ್ದಾಗ ಪೊಲೀಸ್ ಸಿಬ್ಬಂದಿ ಕೂಡಲೆ ಕಾರಿನ ಮುಂಭಾಗ ಹಿಡಿದುಕೊಂಡು ಬಾನೆಟ್ ಮೇಲೆ ಹತ್ತಿದ್ದಾರೆ. ಇದರಿಂದ ಕುಪಿತಗೊಂಡ ಚಾಲಕ ಕಾರು ನಿಲ್ಲಿಸದೇ ಸಹ್ಯಾದ್ರಿ ಕಾಲೇಜು ಗೇಟ್ನಿಂದ ಮತ್ತೂರು ಮಾರ್ಗವಾಗಿ ವೇಗವಾಗಿ ಸಾಗಿರುವ ದೃಶ್ಯವನ್ನು ಕೆಲವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಮುಂದೆ ಕಾರು ನಿಲ್ಲಿಸಿ ಪೇದೆಯನ್ನು ಕೆಳಗಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಪೇದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಖಾಕಿ ಪಡೆ
ಕಾರಿನ ಬಾನೆಟ್ ಮೇಲೆ ಸಂಚಾರ ಠಾಣೆ ಪೇದೆ ಇದ್ದರೂ ನಿಲ್ಲಿಸದೇ ಮುಂದೇ ವೇಗವಾಗಿ ಸಾಗಿದ್ದ ದೃಶ್ಯವನ್ನು ಕೆಲವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸಂಜೆ ವೇಳೆಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡು ಸಂಚಾರ ಠಾಣೆ ಪೊಲೀಸರು ಕಾರಿನ ಮಾಲೀಕನ ಬೆನ್ನುಬಿದ್ದಿದ್ದಾರೆ. ರಾಜಧಾನಿ ಬೆಂಗಳೂರು ಸೇರಿ ಹಲವೆಡೆ ಇಂತಹ ದೃಶ್ಯಗಳನ್ನು ನೋಡಿದ್ದ ಜನರು ಗುರುವಾರ ಶಿವಮೊಗ್ಗದಲ್ಲೂ ನೋಡಿ ಬೆಚ್ಚು ಬಿದ್ದಿದ್ದಾರೆ.
ಅಂದು ತಾಯಿ ಮಾಡಿದ್ದ ಸಾಲವನ್ನು ತೀರಿಸಲು ಚಿತ್ರರಂಗಕ್ಕೆ ಎಂಟ್ರಿ; ಇಂದು ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಸ್ಟಾರ್ ನಟ
Off Spin ದಾಳಿಗೆ ತತ್ತರಿಸಿದ ಕಿವೀಸ್ ಪಡೆ; ಪುಣೆ ಟೆಸ್ಟ್ನಲ್ಲಿ ಹೊಸ ದಾಖಲೆ ಬರೆದ ಚೆನ್ನೈ ಹುಡುಗರು