ನವದೆಹಲಿ : ಎರಡು ಬಾರಿ ಒಲಂಪಿಕ್ ಪದಕ ಗೆದ್ದಿರುವ ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಅವರು, ಗ್ಯಾಂಗ್ಸ್ಟರ್ ಕಾಲಾ ಜತೇದಿಯ ಸೋದರ ಪ್ರದೀಪ್ ಜೊತೆಗಿರುವ ಹಳೆಯ ಚಿತ್ರವೊಂದು ಇದೀಗ ವೈರಲ್ ಆಗಿದೆ. ಮತ್ತೊಬ್ಬ ಕುಸ್ತಿಪಟು ಸಾಗರ್ ರಾಣ ಕೊಲೆ ಪ್ರಕರಣದಲ್ಲಿ 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಸುಶೀಲ್ಗೆ ಈ ಹಳೆಯ ನಂಟು ಇನ್ನಷ್ಟು ಸಮಸ್ಯೆ ಉಂಟುಮಾಡಲಿದೆಯೆ ಕಾದುನೋಡಬೇಕು.
ದೆಹಲಿ ಪೊಲೀಸರ ಪ್ರಕಾರ ಸುಶೀಲ್ ಅವರ ಎಡಪಕ್ಕದಲ್ಲಿ ಬಿಳಿಯ ಅಂಗಿ ಧರಿಸಿ ಕುಳಿತಿರುವ ಪ್ರದೀಪ್, ಕಾಲಾ ಜತೇದಿಯ ಸೋದರ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರದೀಪ್ ಪತ್ತೆಗೆ ಪೊಲೀಸರು 7 ಲಕ್ಷ ರೂ.ಗಳ ಬಹುಮಾನ ಇಟ್ಟಿದ್ದಾರೆ. ಡಿಸೆಂಬರ್ 18, 2018 ರ ಈ ಚಿತ್ರವನ್ನು ಭಾಯಿಚಾರಾ @ಪೆಹಲ್ವಾನ್ಜಿ ಎಂಬ ಶೀರ್ಷಿಕೆಯೊಂದಿಗೆ ಫೇಸ್ಬುಕ್ನಲ್ಲಿ ಶೇರ್ ಮಾಡಲಾಗಿದೆ.
ಇದನ್ನೂ ಓದಿ: 2.11 ಲಕ್ಷ ಹೊಸ ಕರೊನಾ ಪ್ರಕರಣ ; ತಮಿಳುನಾಡಿನದೇ ಹೆಚ್ಚು ಪಾಲು
ಸಾಗರ್ ಕೊಲೆ ಪ್ರಕರಣದಲ್ಲಿ ಸುಶೀಲ್ ಮತ್ತು ಅವರ ಸಹಚರ ಅಜಯ್ಕುಮಾರ್, 15 ದಿನಗಳವರೆಗೆ ತಲೆಮರೆಸಿಕೊಂಡಿದ್ದು, ಕೊನೆಗೂ ದೆಹಲಿ ಪೊಲೀಸರ ವಶವಾಗಿದ್ದಾರೆ. ವಿಚಾರಣೆ ವೇಳೆಯಲ್ಲಿ ಸುಶೀಲ್, ಯಾರೂ ತಮ್ಮನ್ನು ದುರ್ಬಲ ಎಂದುಕೊಳ್ಳಬಾರದೆಂದು ಮೃತ ಸಾಗರ್ಗೆ ಪಾಠ ಕಲಿಸಬೇಕೆಂದು ಭಾವಿಸಿದ್ದರೂ, ಆತನನ್ನು ಕೊಲೆ ಮಾಡುವ ಯಾವುದೇ ಇರಾದೆ ಇರಲಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸುಶೀಲ್ ಮತ್ತು ಸಾಗರ್ ನಡುವೆ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿರುವ ಸುಶೀಲ್ಗೆ ಸೇರಿದ ಫ್ಲ್ಯಾಟ್ ಕುರಿತು ವೈಮನಸ್ಯವಿತ್ತು. ಸಾಗರ್ ಆ ಫ್ಲ್ಯಾಟ್ನಲ್ಲಿ ಗ್ಯಾಂಗ್ಸ್ಟರ್ ಕಾಲಾ ಜತೇದಿಯ ಬಲಗೈ ಭಂಟ ಎನ್ನಲಾದ ಸೋನು ಮಹಲ್ ಎಂಬ ಮಿತ್ರನೊಂದಿಗೆ ಬಾಡಿಗೆಗೆ ವಾಸಿಸುತ್ತಿದ್ದ ಎನ್ನಲಾಗಿದೆ. (ಏಜೆನ್ಸೀಸ್)
ಮಾಂಸ ಕಡಿಯುವ ಕತ್ತಿಯಿಂದ ಅಣ್ಣ ಅತ್ತಿಗೆಯನ್ನು ಕೊಚ್ಚಿದ; ಪುಟ್ಟ ಕಂದಮ್ಮನನ್ನೂ ಬಿಡಲಿಲ್ಲ…