ನವದೆಹಲಿ: ಸಹ ಕುಸ್ತಿಪಟುವನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲುವಾಸಿಯಾಗಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್, ಜೈಲಿನಲ್ಲಿ ವಿಶೇಷ ಆಹಾರ ಹಾಗೂ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ.
ಪ್ರಸ್ತುತ ಅರ್ಜಿಯ ಮೂಲಕ ಆರೋಪಿ ಅಥವಾ ಅರ್ಜಿದಾರ 2018ರ ದೆಹಲಿ ಕಾರಾಗೃಹ ನಿಯಮಗಳ ಪ್ರಕಾರ ತನ್ನ ದೈನಂದಿನ ಆಹಾರದಲ್ಲಿರುವ ಪ್ರಮಾಣ ಹಾಗೂ ಪೋಷಕಾಂಶಗಳ ಸಾಮಾನ್ಯ ಮೂಲ ಸೇರಿದಂತೆ ಮುಂತಾದ ಯಾವುದೇ ಕೊರತೆಗಳನ್ನು ಹೇಳಿಕೊಳ್ಳುತ್ತಿಲ್ಲ. ಆ ಮೂಲಕ ಆರೋಪಿ ಅಥವಾ ಅರ್ಜಿದಾರರಿಗೆ ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ನೀಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಸಹ ಕುಸ್ತಿಪಟುವನ್ನು ಕೊಲೆ ಮಾಡಿರುವ ಆರೋಪ ಸುಶೀಲ್ ಕುಮಾರ್ ವಿರುದ್ಧ ಕೇಳಿಬಂದಿದೆಯೇ ಹೊರತು ಆತ ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ. ಕಾನೂನು ಎಲ್ಲರಿಗೂ ಒಂದೇ. ಹೀಗಾಗಿ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಲಾಗುತ್ತದೆ ಎಂದು ನ್ಯಾಯಾಲಯ ಸುಶೀಲ್ ಕುಮಾರ್ ಅರ್ಜಿಗೆ ಖಡಕ್ ಆಗಿ ಪ್ರತಿಕ್ರಿಯಿಸಿದೆ.
ಸುಶೀಲ್ ಕುಮಾರ್ ಅವರು ತಮ್ಮ ಅರ್ಜಿಯಲ್ಲಿ ಒಮೆಗಾ 3 ಮಾತ್ರೆಗಳು, ಪೂರ್ವ-ತಾಲೀಮು ಪೂರಕಗಳು ಮತ್ತು ಮಲ್ಟಿವಿಟಮಿನ್ ಮಾತ್ರೆಗಳನ್ನು ನೀಡಬೇಕೆಂದು ಒತ್ತಾಯಿಸಿದ್ದರು. ತಾಲೀಮುಗಾಗಿ ವ್ಯಾಯಾಮ ಬ್ಯಾಂಡ್ಗಳನ್ನು ಸಹ ಬಯಸಿದ್ದರು.
ಸುಶೀಲ್ ಕುಮಾರ್ ಮತ್ತು ಆತನ ಸ್ನೇಹಿತರು ಮೇ 4ರಂದು ಸಾಗರ್ ಧನಕರ್ ಮತ್ತ ಆತನ ಸ್ನೇಹಿತರಿಬ್ಬರ ಮೇಲೆ ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಹಲ್ಲೆ ಮಾಡಿದ್ದರು. ಹಲ್ಲೆಯ ವೇಳೆ ಗಾಯಗೊಂಡ ಮೂವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾಗರ್ ಮೃತಪಟ್ಟಿದ್ದಾರೆ.
ಪೊಲೀಸ್ ಬಂಧನದಿಂದ ರಕ್ಷಿಸಿಕೊಳ್ಳಲು ಮೇ 18ರಂದು ಸುಶೀಲ್ ಕುಮಾರ್ ದೆಹಲಿ ಕೋರ್ಟ್ ಮೆಟ್ಟಲೇರಿದ್ದರು. ನನ್ನ ವಿರುದ್ಧದ ತನಿಖೆ ಪಕ್ಷಪಾತವಾಗಿದೆ ಮತ್ತು ಸಂತ್ರಸ್ತನಿಗಾದ ಯಾವುದೇ ಗಾಯಗಳಿಗೂ ನನಗೂ ಸಂಬಂಧವಿಲ್ಲ ಎಂದು ಸುಶೀಲ್ ವಾದಿಸಿದ್ದರು. ಆದರೆ, ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿತು. ಇದೀಗ ಬಂಧನಕ್ಕೆ ಒಳಗಾಗಿರುವ ಸುಶೀಲ್ ಕುಮಾರ್ ವಿಚಾರಣೆ ನಡೆಯುತ್ತಿದೆ.
ಅಂದಹಾಗೆ ಸುಶೀಲ್ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಮತ್ತು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. (ಏಜೆನ್ಸೀಸ್)
ಕೊಲೆ ಆರೋಪಿ ಸುಶೀಲ್ ಕುಮಾರ್ ಒಲಿಂಪಿಕ್ಸ್ ಪದಕ, ಪದ್ಮಶ್ರೀ, ಖೇಲ್ರತ್ನ ಪ್ರಶಸ್ತಿ ವಾಪಸ್ ಕೊಡ್ಬೇಕಾ?
ವೈರಲ್ ಆಯ್ತು ಸುಶೀಲ್ ಕುಮಾರ್ ದಾಳಿಯ ವಿಡಿಯೋ: ಕುಸ್ತಿಪಟು ಮೇಲಿನ ಹಲ್ಲೆ ಹಿಂದಿನ ಉದ್ದೇಶ ಬಯಲು
ಅವಳಿ ಒಲಿಂಪಿಕ್ ಪದಕ ವಿಜೇತ ಪೈಲ್ವಾನ್ ಸುಶೀಲ್ ಕುಮಾರ್ಗೆ ದೆಹಲಿ ಪೊಲೀಸರಿಂದ ಶಾಕ್ ಮೇಲೆ ಶಾಕ್..