ಸುಳ್ಯ: ಮನೆ ಕಟ್ಟಲು ಶುರು ಮಾಡಿದಾಗ ಅರಣ್ಯ ಅಧಿಕಾರಿಗಳು ಹಾಗೂ ಸೂರಜ್ ಹೊಸೂರು ಎಂಬುವರು ಅಡೆತಡೆ ಮಾಡುತ್ತಿರುವುದರಿಂದ ತನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಚೆಂಬು ಗ್ರಾಮದ ಹೊಸೂರಿನ ಹೇಮಾಧರ ಎಂಬುವರು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡದ್ದು ವೈರಲ್ ಆಗಿ ಸಂಚಲನ ಉಂಟುಮಾಡಿತು.
ಸೂರಜ್ ಹೊಸೂರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಸಂಪಾಜೆ ಹೊರ ಠಾಣೆಗೆ ಹೋಗಿ ತಮ್ಮ ಮೇಲಿನ ಆರೋಪ ನಿರಾಕರಿಸಿ ಸ್ವಯಂಹೇಳಿಕೆ ನೀಡಿದ್ದಾರೆ. ಚೆಂಬು ಗ್ರಾಮದ ಹೊಸೂರು ಹೇಮಾಧರ ಎಂಬುವರು ಮನೆ ಕಟ್ಟಲು ನೆಲ ಸಮತಟ್ಟುಗೊಳಿಸಿ, ಕಲ್ಲು ತರಿಸಿ ಕೆಲಸ ಆರಂಭಿಸಿದ್ದರು. ಇದನ್ನು ತಿಳಿದ ಅರಣ್ಯ ಇಲಾಖಾ ಸಿಬ್ಬಂದಿ ತಿಲಕ ಎಂಬುವರು ಸ್ಥಳಕ್ಕೆ ಹೋಗಿ ಅರಣ್ಯ ಇಲಾಖೆಯ ಜಾಗವಾದುದರಿಂದ ಇಲ್ಲಿ ಮನೆ ಕಟ್ಟುವಂತಿಲ್ಲ ಎಂದು ಹೇಳಿ, ಕೆಲಸ ನಿಲ್ಲಿಸಿದ್ದರೆನ್ನಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಒಪ್ಪಿಗೆಯ ಬಳಿಕವೇ ಕಟ್ಟಲು ಹೇಳಿದ್ದೆವು, ಈಗಲೇ ಕಟ್ಟಿದ್ದೇಕೆ ಎಂದು ಸಾಮಾಜಿಕ ಮುಂದಾಳು ಸೂರಜ್ ಹೊಸೂರು ಕೂಡ ಹೇಳಿದರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಹೇಮಾಧರ್, ಸೂರಜ್ ಹೊಸೂರು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳ ಹೆಸರು ಉಲ್ಲೇಖಿಸಿ ಮನೆಕಟ್ಟಲು ಅವರಿಬ್ಬರು ಅಡ್ಡಿಪಡಿಸುತ್ತಿರುವುದರಿಂದ ತಾನು ಮತ್ತು ತನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬರೆದು ಸ್ಟೇಟಸ್ ಹಾಕಿಕೊಂಡಿದ್ದರು. ಈ ಬರಹ ವೈರಲ್ ಆದುದರಿಂದ ಸೂರಜ್ ಹೊಸೂರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ತಿಲಕ ಎಂಬುವರು ಸಂಪಾಜೆ ಹೊರ ಠಾಣೆಗೆ ಬಂದು ನಾವು ಯಾರಿಗೂ ತೊಂದರೆ ನೀಡಿಲ್ಲ. ನಮ್ಮ ಮೇಲಿನ ಆರೋಪ ನಿರಾಧಾರವಾಗಿದ್ದು, ಈ ಬಗ್ಗೆ ಹೇಮಾಧರ್ ಅವರನ್ನು ಕರೆಸಿ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕೆಂದು ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.