ವಿಶಾಖಪಟ್ಟಣ: ಭಾರತಕ್ಕೆ ಈ ಬಹುರಾಷ್ಟ್ರೀಯ ಕಂಪನಿಗಳಿಂದ ಗಂಡಾಂತರ ತಪ್ಪಿದ್ದೇ ಇಲ್ಲ ಎನ್ನುವಂತಾಗಿದೆ.
ದಶಕಗಳ ಹಿಂದಿನ ಭೋಪಾಲ್ ಅನಿಲ ದುರಂತದ ದುಷ್ಪರಿಣಾಮಗಳನ್ನು ಇಂದಿಗೂ ಅಲ್ಲಿನ ಜನ ಅನುಭವಿಸುತ್ತಲೇ ಇದ್ದಾರೆ. ಇದೀಗ ವಿಶಾಖಪಟ್ಟಣದಲ್ಲಿ ಘೋರ ವಿಷಾನಿಲ ದುರಂತ ಸಂಭವಿಸಿದೆ.
ಇಷ್ಟಕ್ಕೂ ಈ ವಿಷಾನಿಲ ದುರಂತ ಸಂಭವಿಸಿರುವುದು ಎಲ್ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ಸದ್ಯ ಇದು ದಕ್ಷಿಣ ಕೊರಿಯಾದ ಎಲ್ಜಿ ಕೆಮಿಕಲ್ಸ್ ಕಂಪನಿ ಒಡೆತನದಲ್ಲಿದೆ. ಎಲ್ಜಿ ಗೃಹೋಪಯೋಗಿ ಉತ್ಪನ್ನಗಳ ಮೂಲ ಕಂಪನಿ ಇದು. ಇಲ್ಲಿ ಪಾಲಿಸ್ಟರ್ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಎಲೆಕ್ಟ್ರಿಕ್ ಫ್ಯಾನ್ಗಳ ಬ್ಲೇಡ್, ಕಪ್ಗಳು ಹಾಗೂ ಗೃಹೋಪಯೋಗಿ ಪಾತ್ರೆಗಳು, ಸೌಂದರ್ಯವರ್ಧಕ ಉತ್ಪನ್ನಗಳು ಇಲ್ಲಿ ತಯಾರಾಗುತ್ತವೆ, ಇದಕ್ಕೆ ಸ್ಟೀರೀನ್ ಅನಿಲವನ್ನು ಬಳಸಲಾಗುತ್ತದೆ. ಸದ್ಯ ಸ್ಟೀರಿನ್ ತುಂಬಿದ್ದ ಅನಿಲದ ಟ್ಯಾಂಕ್ ಸ್ಫೋಟಗೊಂಡು ದುರಂತ ಸಂಭವಿಸಿದೆ. ಇದು ಅತ್ಯಂತ ದಹನಶೀಲ ಹಾಗೂ ಇದನ್ನು ದಹಿಸಿದರೆ ಅತ್ಯಂತ ವಿಷಕಾರಿ ಅನಿಲ ಹೊರಸೂಸುತ್ತದೆ.
ಅಷ್ಟಕ್ಕೂ ಇದನ್ನು ಆರಂಭಿಸಿದ್ದು ಎಲ್ಜಿ ಕಂಪನಿಯೇನಲ್ಲ. 1961ರಲ್ಲಿಯೇ ಹಿಂದುಸ್ತಾನ್ ಪಾಲಿಮರ್ಸ್ ಹೆಸರಿನಲ್ಲಿ ಈ ಕಾರ್ಖಾನೆ ಆರಂಭವಾಯಿತು. 1978ರಲ್ಲಿ ವಿಜಯ್ ಮಲ್ಯ ಒಡೆತನದ ಯುಬಿ ಗ್ರೂಪ್ನ ಮ್ಯಾಕ್ಡೊವೆಲ್ ಆ್ಯಂಡ್ ಕಂಪನಿ ಲಿಮಿಟೆಡ್ ಜತೆಗೆ ಈ ಕಂಪನಿ ವಿಲೀನವಾಯಿತು. 1997ರಲ್ಲಿ ಇದನ್ನು ಎಲ್ಜಿ ಕೆಮಿಕಲ್ಸ್ ಕಂಪನಿ ವಶಕ್ಕೆ ಪಡೆಯಿತು. ಎಲ್ಜಿ ಪಾಲಿಮರ್ಸ್ ಇಂಡಿಯಾ ಎಂದು ನಾಮಕರಣ ಮಾಡಲಾಯಿತು.
ಎಲ್ಜಿ ಕೆಮಿಕಲ್ಸ್ ಜಗತ್ತಿನಲ್ಲಿಯೇ ಎಂಟನೇ ಅತಿದೊಡ್ಡ ರಾಸಾಯನಿಕ ವಸ್ತುಗಳ ಕಂಪನಿಯಾಗಿದೆ. ದಕ್ಷಿಣ ಕೊರಿಯಾದಲ್ಲಿ ಅತಿ ದೊಡ್ಡ ಕಂಪನಿ ಎನಿಸಿದೆ. ಪಾಲಿಸ್ಟರ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.