ಸಿಂಧನೂರು: ಸಮೀಪದ ಹೊಸಳ್ಳಿ ಕ್ಯಾಂಪ್ಗೆ ಮೇ 2ರಂದು ಮಧ್ಯಾಹ್ನ 2.30ಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ.
ಸಿಂಧನೂರಿನಲ್ಲಿ ಬಿಜೆಪಿ ಬಾವುಟ ಹಾರಿಸುವ ಉದ್ದೇಶ
ಹೊಸಳ್ಳಿ ಕ್ಯಾಂಪ್ ಬಳಿ ಸೋಮವಾರ ವೇದಿಕೆ ಸೇರಿ ಇತರ ಸಿದ್ಧತೆ ಯುದ್ಧೋಪಾದಿಯಲ್ಲಿ ಸಾಗಿತ್ತು. ಎರಡು ದಿನ ಸುರಿದ ಮಳೆಯಿಂದ ಕುಸಿದಿದ್ದ ವೇದಿಕೆ ಮರು ನಿರ್ಮಾಣ ಕಾರ್ಯ ನಡೆದಿತ್ತು. ಮೊದಲ ಬಾರಿಗೆ ಸಿಂಧನೂರಿನಲ್ಲಿ ಬಿಜೆಪಿ ಬಾವುಟ ಹಾರಿಸುವ ಉದ್ದೇಶದಿಂದ ಶಕ್ತಿ ಪ್ರದರ್ಶನ ನಡೆಸಲು ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ.
ಕಳೆದ 15 ದಿನಗಳ ಹಿಂದೆ ಜಾಗ ಗುರುತಿಸಿ ವೇದಿಕೆ ಸಿದ್ಧತೆ
ಕಳೆದ 15 ದಿನಗಳ ಹಿಂದೆ ಜಾಗ ಗುರುತಿಸಿ ವೇದಿಕೆ ಸಿದ್ಧತೆಗೆ ಚಾಲನೆ ನೀಡಲಾಗಿತ್ತು. ಆದರೆ, ಕಳೆದ ಎರಡು ದಿನ ಮಳೆ, ಬಿರುಗಾಳಿಯಿಂದ ವೇದಿಕೆ ಕುಸಿದು ಕಾರ್ಯಕ್ರಮ ರದ್ಧತಿ ಇಲ್ಲವೇ ಸ್ಥಳಾಂತರ ಆಗುವ ಆತಂಕ ಎದುರಾಗಿತ್ತು.
ಆದರೆ, ಆಯೋಜಕರು ವೇದಿಕೆ ಸಿದ್ಧತೆಗೆ ಸೋಮವಾರ ಬೆಳಗ್ಗೆಯಿಂದ ಯುದ್ದೋಪಾದಿಯಲ್ಲಿ ಕೆಲಸ ಕೈಗೊಂಡಿದ್ದಾರೆ. ಈ ಮೊದಲು ನಿರ್ಮಿಸಿದ್ದ ವೇದಿಗೆ ಹಿಂಭಾಗದಲ್ಲಿ ಮತ್ತೊಂದು ಮುಖ್ಯವೇದಿಕೆ ನಿರ್ಮಿಸಿ ಅಭ್ಯರ್ಥಿಗಳು ಹಾಗೂ ಗಣ್ಯರು ಕುಳಿತುಕೊಳ್ಳಲು ಸಿದ್ಧತೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ನನ್ನ ನಮಸ್ಕಾರ ಮನೆ ಮನೆಗೆ ತಲುಪಿಸುವಿರಾ? – ನರೇಂದ್ರ ಮೋದಿ
ವಿಶೇಷ 7 ಸಾವಿರ ಆಸನಗಳ ವ್ಯವಸ್ಥೆ
ವೇದಿಕೆ ಮುಂಭಾಗ ಗಣ್ಯರು, ಅತಿ ಗಣ್ಯರು ಸೇರಿ ಪ್ರಮುಖರು ಕುಳಿತುಕೊಳ್ಳಲು ವಿಶೇಷ 7 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಏಳು ಕ್ಷೇತ್ರ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಹಾಗೂ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಮೋದಿ ಪ್ರಚಾರ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ
ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಹೊಂದಲಾಗಿದೆ. ವೇದಿಕೆ ಪಕ್ಕದಲ್ಲಿಯೇ ಪ್ರಧಾನಿ ನರೇಂದ್ರಮೋದಿ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಸೋಮವಾರ ಬೆಳಗ್ಗೆಯಿಂದ ಎರಡ್ಮೂರು ಬಾರಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿ ಪರಿಶೀಲಿಸಲಾಗಿದೆ. ಎಸ್ಪಿಜಿ ತಂಡ ಜಾಗ ಪರಿಶೀಲಿಸಿ, ಕಾರ್ಯಕ್ರಮ ನಡೆಸಲು ಅನುಮತಿ ನೀಡಿದೆ.
ಸಮಾವೇಶ ಸುತ್ತ ನಾಕಾಬಂದಿ
ಕಾರ್ಯಕ್ರಮದ ಭದ್ರತೆಗೆ ಒಬ್ಬ ಎಸ್ಪಿ, 3 ಜನ ಎಎಸ್ಪಿ, 11 ಡಿವೈಎಸ್ಪಿ, 34 ಸಿಪಿಐ, 90 ಪಿಎಸ್ಐ, 147 ಎಎಸ್ಐ, 914 ಜನ ಮುಖ್ಯ ಪೇದೆ, 350 ಜನ ಅರೆ ಸೇನಾಪಡೆ ಸಿಬ್ಬಂದಿ ನಿಯೋಜಿಸಲಾಗಿದೆ. ಕಾರ್ಯಕ್ರಮ ಸ್ಥಳದ ಸುತ್ತ ಭಾನುವಾರದಿಂದಲೇ ಭದ್ರತೆ ಒದಗಿಸಲಾಗಿದೆ. ಎಲ್ಲ ಕಡೆಗಳಲ್ಲಿ ಪೊಲೀಸ್ ನಾಕಾಬಂದಿ ಹಾಕಲಾಗಿದೆ.
ಹೊಸಳ್ಳಿ ಕ್ಯಾಂಪ್ನಲ್ಲಿ ನಿಗದಿಯಂತೆ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ನಡೆಯಲಿದೆ. ವೇದಿಕೆ ಮರು ನಿರ್ಮಾಣ ಕಾರ್ಯ ಚುರುಕಿನಿಂದ ನಡೆದಿದ್ದು, ಮಂಗಳವಾರ ಬೆಳಗ್ಗೆಯೊಳಗೆ ಮುಖ್ಯ ವೇದಿಕೆ, ಆಸನ ವ್ಯವಸ್ಥೆ ಪೂರ್ಣಗೊಳ್ಳಲಿದೆ.
ಕೆ.ವಿರೂಪಾಕ್ಷಪ್ಪ, ಕೆಪೆಕ್ ಅಧ್ಯಕ್ಷ, ಸಿಂಧನೂರು