ಬೆಂಗಳೂರು: ಕಾಯಕ ಮತ್ತು ದಾಸೋಹ ಎಂಬ ಪದಗಳಿಗೆ ನಿಜವಾದ ಅರ್ಥವನ್ನು ತಂದುಕೊಟ್ಟು, ಇಡೀ ಜಗತ್ತಿನ ಗಮನ ಸೆಳೆದ ಶ್ರೇಷ್ಟ ಸಂತ ಸಿದ್ಧಗಂಗೆಯ ಶ್ರೀಶಿವಕುಮಾರ ಸ್ವಾಮಿಗಳು ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಭಾರತೀಯ ವಿದ್ಯಾಭವನದಲ್ಲಿ ಶ್ರೀಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ ಮತ್ತು ನ್ಯಾ. ನಾಡೋಜ ಶಿವರಾಜ ಪಾಟೀಲ್ ಅಭಿನಂದನಾ ಸಮಿತಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತತ್ವ ಸಿದ್ಧಾಂತಗಳನ್ನು ಬೋದಿಸಿ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಖ್ಯಾತನಾಮರು ಹೆಚ್ಚಾಗಿರುವ ಈ ಕಾಲದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿ ಭವಿಷ್ಯವನ್ನು ರೂಪಿಸಿದ ಶಿವಕುಮಾರ ಸ್ವಾಮೀಜಿ ಅವರ ಕಾರ್ಯವನ್ನು ಎಷ್ಟು ಹೇಳಿದರೂ ಕಡಿಮೆಯೇ. ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಮಠ–ಮಂದಿರಗಳು ಮತ್ತು ನ್ಯಾಯಾಲಯಗಳ ಬಗ್ಗೆ ಪವಿತ್ರ ಕ್ಷೇತ್ರಗಳೆಂಬ ಗೌರವವಿದೆ. ಆ ಕ್ಷೇತ್ರಗಳು ಕೂಡಾ ಇತ್ತೀಚೆಗೆ ಕಲುಷಿತಗೊಂಡಿರುವುದು ದುರಾದೃಷ್ಟಕರ. ಆದರೆ ಆ ಎರಡೂ ಕ್ಷೇತ್ರಗಳ ಘನತೆಯನ್ನು ಎತ್ತಿ ಹಿಡಿದ ಈರ್ವರು ಸಾಧಕರ ಬಗ್ಗೆ ಮಾತನಾಡುವ ಸಂದರ್ಭ ಒದಗಿ ಬಂದಿರುವ ಸೌಭಾಗ್ಯ. ಉತ್ತರ ಕರ್ನಾಟಕ ಹಿಂದುಳಿದ ಭಾಗದಲ್ಲಿ ಜನಿಸಿ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ನ್ಯಾ. ಶಿವರಾಜ ಪಾಟೀಲರ ವ್ಯಕ್ತಿತ್ವಕ್ಕೆ ಪೂರಕವಾಗಿ ಇತ್ತೀಚೆಗೆ ನಾಡೋಜ ಗೌರವ ಸಂದಿದೆ. ಆ ಕಾರಣಕ್ಕೆ ವಕೀಲರ ಸಂಘದವರು ಅವರನ್ನು ಅಭಿನಂದಿಸುತ್ತಿರುವುದು ಸ್ವಾಗತಾರ್ಹ. ಸಮಾಜವನ್ನು, ಸಂವಿಧಾನವನ್ನು, ಮೌಲ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಚ್ಚಾರಿತ್ರ್ಯವನ್ನು ಇರಿಸಿಕೊಂಡ ಶಿವರಾಜ ಪಾಟೀಲರು ನಾಡಿನ ಆಡಳಿತಾತ್ಮಕ ವಿಷಯಗಳಲ್ಲಿ ಏನಾದರೂ ಬಿಕ್ಕಟ್ಟುಗಳು ಎದುರಾದಾಗ ನಮಗೆ ಮಾರ್ಗದರ್ಶನ ಮಾಡಿ ರಾಜ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದ್ದಾರೆ. ಅವರಿಗೆ ಇಂತಹ ಎಷ್ಟೇ ಅಭಿನಂದನೆ ಸಲ್ಲಿಸಿದರೂ, ಎಷ್ಟೇ ಪದಗಳಿಂದ ಹೊಗಳಿದರೂ ಅವರ ವ್ಯಕ್ತಿತ್ವಕ್ಕೆ ಕಡಿಮೆಯೇ ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಕ್ಷಣಮಾತ್ರದಲ್ಲಿ ನ್ಯಾ.ಶಿವರಾಜ ಪಾಟೀಲರ ಚಿತ್ರವನ್ನು ಬರೆದ ಪ್ರಸಿದ್ಧ ತೈಲವರ್ಣ ಕಲಾವಿದ ಸಿದ್ದು ಇಟಗಿಯ ಪ್ರತಿಭೆ ಎಲ್ಲರ ಗಮನ ಸೆಳೆಯಿತು. ಶಿವರಾಜ ಪಾಟೀಲರ ಬೃಹತ್ ತೈಲವರ್ಣ ಚಿತ್ರವನ್ನು ಉಡುಗೊರೆಯಾಗಿ ನೀಡಿ ಅಭಿನಂದನೆ ಸಲ್ಲಿಸಲಾಯಿತು .
ಕಾರ್ಯಕ್ರಮದಲ್ಲಿ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಅಶೋಕ ಹಿಂಚಗೇರಿ, ನ್ಯಾ.ಧರ್ಮಗೌಡ್ರು, ಹಿರಿಯ ವಕೀಲರಾದ ಉದಯ ಹೊಳ್ಳ, ಕೆ.ಜಿ.ರಾಘವನ್, ಕೆ.ಶಶಿಕಿರಣ ಶೆಟ್ಟಿ, ಎಚ್.ಎಸ್.ಮಿತ್ತಲಕೋಡ, ಎನ್.ದೇವದಾಸ್, ಆರ್.ಆರ್.ಹಿರೇಮಠ ಮತ್ತಿತರರು ಪಾಲ್ಗೊಂಡಿದ್ದರು.