ಬೆಂಗಳೂರು: ಕರ್ನಾಟಕ ಸರ್ಕಾರದ ನೂತನ ಸಿಎಂ ಹಾಗೂ ಡಿಸಿಎಂ ಪದಗ್ರಹಣ ಸಮಾರಂಭಕ್ಕೆ ರಾಷ್ಟ್ರ ರಾಜಕಾರಣದ ಅನೇಕ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಟಾರ್ ನಟರಾದ ಶಿವರಾಜ್ಕುಮಾರ್, ಉಮಾಶ್ರೀ, ದುನಿಯಾ ವಿಜಯ್, ಕಮಲ್ ಹಾಸನ್, ಸಾಧು ಕೋಕಿಲಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಮಾಜಿ ಸಂಸದೆ ರಮ್ಯಾ ಹಾಗೂ ನಿಶ್ವಿಕಾ ನಾಯ್ಡು ಭಾಗವಹಿಸುವ ಮೂಲಕ ಮೆರಗನ್ನು ಮತ್ತಷ್ಟು ಹೆಚ್ಚಿಸಿದ್ದರು.
ಕಾಲಿಗೆ ಪೆಟ್ಟು
ಇನ್ನು ಕಾರ್ಯಕ್ರಮ ಮಗಿಸಿಕೊಂಡು ವಾಪಸ್ ತೆರಳುವ ವೇಳೆ ನಟ ಶಿವರಾಜ್ಕುಮಾರ್ ಕಾಲಿಗೆ ಪೆಟ್ಟಾಗಿದ್ದು ಪತ್ನಿಯ ಸಹಾಯದೊಂದಿಗೆ ವಾಪಸ್ ತೆರಳಿದ್ದಾರೆ ಎಂದು ವರದಿಯಾಗಿದೆ.
ಪ್ರಮಾಣ ವಚನ ಕಾರ್ಯಕ್ರಮ ಮುಗಿದ ಬಳಿಕ ಶಿವರಾಜ್ಕುಮಾರ್ ತಮ್ಮ ಪತ್ನಿ ಗೀತಾ ಜೊತೆ ವಾಪಸ್ ಆಗುವ ವೇಳೆ ಮೆಟ್ಟಿಲುಗಳನ್ನು ಇಳಿಯುವ ಸಂದರ್ಭದಲ್ಲಿ ಕಾಲು ಜಾರಿದ ಪರಿಣಾಮ ಉಳುಕಿದೆ ಎಂದು ತಿಳಿದು ಬಂದಿದೆ.
ತಾರಾ ಮೆರಗು
ಪ್ರಮಾಣ ವಚನದಲ್ಲಿ ಭಾಗಿಯಾಗಿದ್ದ ಶಿವರಾಜ್ಕುಮಾರ್, ದುನಿಯಾ ವಿಜಯ್, ಸಾಧುಕೋಕಿಲಾ, ನಿಶ್ವಿಕಾ ನಾಯ್ಡು, ರಮ್ಯಾ ಕಾಂಗ್ರೆಸ್ ಪಕ್ಷದ ಪರ ರಾಜ್ಯದ್ಯಂತ ಪ್ರವಾಸ ಮಾಡಿದ್ದರು. ಕೆಲವು ಸಿಎಂ ಸಿದ್ದರಾಮಯ್ಯ ಪರ ಕಾಣಿಸಿಕೊಂಡರೆ ಇನ್ನು ಕೆಲವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿದ್ದರು.
ಶನಿವಾರ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನಟ ಕಮಲ್ ಹಾಸನ್ ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ನಟ ತಮ್ಮ ಬೆಂಬಲವನ್ನು ಸೂಚಿಸಿದ್ದರು.