ವಿಶ್ವಸಂಸ್ಥೆ ವಾಷಿಂಗ್ಟನ್/ಮಾಸ್ಕೊ: ಪೂರ್ವ ಯೂಕ್ರೇನ್ನ ಪ್ರತ್ಯೇಕತಾವಾದಿಗಳನ್ನು ತನ್ನ ನಿಯಂತ್ರಣಕ್ಕೆ ಪಡೆಯಲು ನಡೆಸುತ್ತಿರುವ ಪ್ರಯತ್ನಗಳಿಗೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ (ಯುಎನ್ಎಸ್ಸಿ) ಬೆಂಬಲ ಪಡೆಯುವಲ್ಲಿ ರಷ್ಯಾ ವಿಫಲವಾಗಿದೆ. ಯೂಕ್ರೇನ್- ರಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ನಡೆದ ಯುಎನ್ಎಸ್ಸಿ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ರಷ್ಯಾ ನಡೆಯನ್ನು ಖಂಡಿಸಿದವು. ಯೂಕ್ರೇನ್ನ ಪ್ರಾದೇಶಿಕ ಸಮಗ್ರತೆ ಮೇಲಿನ ದಾಳಿಯಾಗಿದೆ ಎಂದು ಅನೇಕ ದೇಶಗಳು ಹೇಳಿದವು. ರಷ್ಯಾದ ಕ್ರಮಗಳು ಯೂಕ್ರೇನ್ ಮೇಲೆ ಇನ್ನಷ್ಟು ದಾಳಿ ನಡೆಸುವ ನೆಪವಾಗಿದೆ ಎಂದು ಅಮೆರಿಕ ಟೀಕಿಸಿದೆ. ಅಧ್ಯಕ್ಷ ಪುತಿನ್ ಕ್ರಮಗಳನ್ನು ಖಂಡಿಸಲು ತುರ್ತಾಗಿ ಅಧಿವೇಶನ ನಡೆಸುವಂತೆ ಯೂಕ್ರೇನ್, ಅಮೆರಿಕ, ಐದು ಐರೋಪ್ಯ ದೇಶಗಳು ಮತ್ತು ಮೆಕ್ಸಿಕೊ ಆಗ್ರಹಿಸಿದ್ದವು. ರಷ್ಯಾದ ನಡೆಯನ್ನು ದಕ್ಷಿಣ ಕೊರಿಯಾ, ಜಪಾನ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಟರ್ಕಿ, ಆಸ್ಟ್ರಿಯಾ, ಫಿನ್ಲೆಂಡ್ ದೇಶಗಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಪೂರ್ವ ಯುರೋಪ್ನ ಈ ಅಸ್ಥಿರ ಸನ್ನಿವೇಶವು ಆ ಪ್ರಾದೇಶಿಕದಲ್ಲಿ ಮಾತ್ರವಲ್ಲದೆ ಇತರ ಖಂಡಗಳ ಮೇಲೂ ಪರಿಣಾಮ ಬೀರಲಿದೆ ಎಂದಿದ್ದಾರೆ.

ಮಾನ್ಯ ಮಾಡಿದ ಭಾಗಕ್ಕೆ ಸೇನೆ ರವಾನೆ: ಉಕ್ರೇನ್ನ ಪೂರ್ವಭಾಗದಲ್ಲಿನ ಬಂಡುಕೋರರ ಎರಡು ಪ್ರದೇಶಗಳನ್ನು ಸ್ವಾಯತ್ತವೆಂದು ರಷ್ಯಾ ಮಾನ್ಯ ಮಾಡಿದೆ. ಬಂಡುಕೋರರ ನಾಯಕರ ಜತೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ’ಬಹು ಹಿಂದೆಯೇ ಆಗಬೇಕಿದ್ದ ಒಪ್ಪಂದ ಈಗ ಕೈಗೊಡಿದೆ. ಡೊನೆಟ್ಕ್ಸ್ ಮತ್ತು ಲುಗಾನ್ಕ್ಸ್ ಜನರ ಸಾರ್ವಭೌಮತ್ವವನ್ನು ಎತ್ತಿಹಿಡಿಯಲಾಗಿದೆ’ ಎಂದಿದ್ದಾರೆ. ಇವೆರಡು ಭೂಭಾಗಗಳು 2014ರಿಂದ ತಾತ್ಕಾಲಿಕವಾಗಿ ಯೂಕ್ರೇನ್ನ ಹಿಡಿತದಲ್ಲಿ ಇದ್ದವು ಈಗ ಅವು ಸ್ವತಂತ್ರಹೊಂಡಿವೆ ಎಂದು ಕ್ರೆಮ್ಲಿನ್ನ (ರಷ್ಯಾ ಅಧ್ಯಕ್ಷರ ನಿವಾಸ) ವಕ್ತಾರರು ಹೇಳದ್ದಾರೆ. ಈಗ ಈ ಪ್ರದೇಶಕ್ಕೆ ರಷ್ಯಾ ಸೇನೆಯನ್ನು ಕಳುಹಿಸುತ್ತಿದೆ. ಇದು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಸಿಟ್ಟು ಹೆಚ್ಚಾಗಲು ಕಾರಣವಾಗಿದೆ, ಅಮೆರಿಕ ಜತೆಗೆ ನಡೆಸಲು ಉದ್ದೇಶಿಸಿದ್ದ ಶಾಂತಿ ಶೃಂಗಸಭೆಯ ಬಗ್ಗೆ ರಷ್ಯಾ ಉಲ್ಟಾ ಹೊಡೆದಿದೆ. ಫ್ರಾನ್ಸ್ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಮಧ್ಯಸ್ಥಿಕೆಯಿಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ರಷ್ಯಾ ಅಧ್ಯಕ್ಷ ಪುತಿನ್ ಮಾತುಕತೆಗೆ ತಾತ್ವಿಕ ಒಪ್ಪಿಗೆ ನೀಡಿದ್ದರು. ಇದಾದ ಕೆಲವು ತಾಸಿನ ಬಳಿಕ ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿದ ರಷ್ಯಾದ ಕ್ರೆಮ್ಲಿನ್ , ‘ಈ ಮಾತುಕತೆಗೆ ಮಹತ್ವವೇನೂ ಇಲ್ಲ ಮತ್ತು ಇದು ತೀರ ಮುಂಚಿತವಾಯಿತು’ ಎಂದು ಹೇಳುವ ಮೂಲಕ ಶಾಂತಿ ಮಾತುಕತೆಗೆ ತಣ್ಣೀರು ಎರಚಿದೆ.
ಯುದ್ಧ ಪಿಪಾಸುವಾಗಿರುವ ರಷ್ಯಾ ಸೇನಾ ಆಕ್ರಮಣದ ಮಾತ್ರವಲ್ಲದೆ ನಮ್ಮ ದೇಶದ ಮೇಲೆ ಸೈಬರ್ ದಾಳಿ ನಡೆಸುವ ಸಂಚು ಮಾಡಿದೆ. ಸರ್ಕಾರಿ ಇಲಾಖೆ, ರಕ್ಷಣಾ ಇಲಾಖೆ, ಬ್ಯಾಂಕ್ ಇನ್ನಿತರ ಸಂಸ್ಥೆಗಳ ಮೇಲೆ ರಷ್ಯಾದ ಹ್ಯಾಕರ್ಗಳು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ.
| ಸಿಇಆರ್ಟಿ-ಯುಎ ಯೂಕ್ರೇನ್ನ ಸೈಬರ್ ಸುರಕ್ಷತಾ ಏಜೆನ್ಸಿ
ಯೂಕ್ರೇನ್ನಿಂದ ಹೊರಟ ಏರ್ ಇಂಡಿಯಾ ವಿಮಾನ: ಯೂಕ್ರೇನ್ನಲ್ಲಿರುವ ಭಾರತ ಮೂಲದವರು, ವಿಶೇಷವಾಗಿ ವಿದ್ಯಾರ್ಥಿಗಳನ್ನು ಕರೆತರಲು ಭಾರತದಿಂದ ಹೋಗಿರುವ ಏರ್ ಇಂಡಿಯಾ ವಿಮಾನ, 240 ಪ್ರಯಾಣಿಕರೊಂದಿಗೆ ವಾಪಸ್ ಪ್ರಯಾಣ ಬೆಳೆಸಿದೆ. ಹೆಚ್ಚುವರಿಯಾಗಿ ವಿಮಾನದ ಅವಶ್ಯಕತೆ ಬಿದ್ದರೆ ಅದನ್ನೂ ಸಂಯೋಜಿಸುವುದಾಗಿ ಕೀವ್ನಲ್ಲಿರುವ ಭಾರತದ ದೂತಾವಾಸ ತಿಳಿಸಿದೆ.
ಬ್ರಿಟನ್ ನಿರ್ಬಂಧ, ಅಮೆರಿಕ ಚಿಂತನೆ: ಯೂಕ್ರೇನ್ ಮೇಲೆ ಆಕ್ರಮಣಕ್ಕೆ ಮುಂದಾಗಿರುವ ರಷ್ಯಾ ವಿರುದ್ಧ ಹೊಸದಾಗಿ ಕಠಿಣ ನಿರ್ಬಂಧ ಹೇರಲು ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳು ಮುಂದಾಗಿವೆ. ಆದರೆ, ಬ್ರಿಟನ್ ನಿರ್ಬಂಧ ಹೇರುವ ನಿರ್ಧಾರವನ್ನೆ ಕೈಗೊಂಡಿದೆ. ನಾರ್ಡ್ ಸ್ಟ್ರೀಮ್2 ಗ್ಯಾಸ್ ಪೈಪ್ಲೈನ್ನದ ಮಹತ್ವದ ದಾಖಲೆಯನ್ನು ರಷ್ಯಾದಿಂದ ಹಿಂಪಡೆಯುವುದಾಗಿ ಜರ್ಮನಿ ಹೇಳಿದೆ.
100 ಡಾಲರ್ ಸನಿಹಕ್ಕೆ ತೈಲ ಬೆಲೆ: ಯೂಕ್ರೇನ್- ರಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡ 5ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ ದರ 100 ಡಾಲರ್ ಸನಿಹಕ್ಕೆ ಹೋಗಿದೆ. ಇತ್ತೀಚೆಗೆ ತೈಲ ಬೆಲೆಗಳಲ್ಲಿ 2014ರ ನಂತರದ ದಾಖಲೆಯ ಏರಿಕೆ ಆಗಿದ್ದು ಈಗ ರಷ್ಯಾ-ಯೂಕ್ರೇನ್ ಬಿಕ್ಕಟ್ಟಿನಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಭಾರತದಲ್ಲಿ ಪಂಚರಾಜ್ಯಗಳ ಚುನಾವಣೆ ಮುಗಿದ ಬಳಿಕ ತೈಲ ಬೆಲೆ ಹೆಚ್ಚಳ ಪರ್ವ ಶುರುವಾಗಲಿದೆ. ಈ ಮಧ್ಯೆ, ಕಚ್ಚಾ ತೈಲ ಮಾರುಕಟ್ಟೆಯ ಆಗುಹೋಗುಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯೂಕ್ರೇನ್ ಬಿಕ್ಕಟ್ಟು ಭಾರತದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.