ದೇವದುರ್ಗ: ರಾಜ್ಯ ಸರ್ಕಾರ ಅವೈಜ್ಞಾನಿಕವಾದ ವರದಿಯನ್ನು ಶಿಫಾರಸು ಮಾಡಿರುವ ಪರಿಶಿಷ್ಟ ಸಮುದಾಯದ ಒಳಮೀಸಲಾತಿ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ತಾಲೂಕು ಆಡಳಿತ ಸೌಧ ಮುಂದೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಮಂಗಳವಾರ ಪ್ರತಿಭಟನೆ ನಡೆಸಿತು.
ಅವೈಜ್ಞಾನಿಕ ಕ್ರಮ
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಲಿತ ಸಮುದಾಯದ ಒಳಮೀಸಲಾತಿ ಜಾರಿಗೆ ಶಿಫಾರಸು ಮಾಡುವ ನಿರ್ಧಾರ ಕೈಗೊಳ್ಳುವ ಮೂಲಕ ಜಾತಿಗಳ ನಡುವೆ ಮುನಿಸು ಮೂಡಿಸುವ ಕೆಲಸಕ್ಕೆ ಸರ್ಕಾರ ಕೈಹಾಕಿದೆ. ಒಳಮೀಸಲಾತಿ ಜಾರಿ ಅವೈಜ್ಞಾನಿಕ ಕ್ರಮವಾಗಿದೆ. ಜಾತಿಗಳಿಗೆ ಮೀಸಲಾತಿ ಕಲ್ಪಿಸುವುದು ಹಾಗೂ ಮೀಸಲು ಸೌಲಭ್ಯ ಕಲ್ಪಿಸಲು ಕೇಂದ್ರಕ್ಕೆ ಶಿಫಾರಸು ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ.
ಇದನ್ನೂ ಓದಿ: ಒಳಮೀಸಲಾತಿ ಅಧಿಸೂಚನೆ ಕೈಬಿಡಲು ಆಗ್ರಹ
ಅಧ್ಯಯನ ಮಾಡದೆ ಜಾರಿಗೆ
ಆದರೆ ಒಳಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಇದು ಸಂವಿಧಾನ ಬಾಹಿರ ಕ್ರಮವಾಗಿದ್ದು ಕಾನೂನು ಸಚಿವ ಮಾಧುಸ್ವಾಮಿ ರಚಿಸಿದ ಸಮಿತಿ ಯಾವುದೇ ಅಧ್ಯಯನ ಮಾಡದೆ ಒಳಮೀಸಲಾತಿ ಜಾರಿಗೆ ಶಿಫಾರಸು ಮಾಡಿದೆ. ದಲಿತರಲ್ಲಿ ನಾಲ್ಕು ವರ್ಗಗಳನ್ನು ಮಾಡಿರುವುದು ಅವೈಜ್ಞಾನಿಕ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ತಕ್ಕಪಾಠ
ರಾಜ್ಯ ಸರ್ಕಾರ ಒಳಮೀಸಲಾತಿ ಶಿಫಾರಸು ಹಿಂಪಡೆಯಬೇಕು. ಹಿಂದಿನ ಮೀಸಲಾತಿ ಪದ್ಧತಿಯನ್ನು ಮುಂದುವರಿಸಬೇಕು. ಶಿವಮೊಗ್ಗದಲ್ಲಿ ಒಳಮೀಸಲಾತಿ ವಿರೋಧಿಸಿ ಹೋರಾಟ ನಡೆಸುತ್ತಿದ್ದವರ ವಿರುದ್ಧ ಹಾಕಿರುವ ಪೊಲೀಸ್ ಕೇಸ್ ವಾಪಸ್ ಪಡೆಯಬೇಕು. ನಿರ್ಲಕ್ಷಿಸಿದರೆ, ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದಾಗಿ ಎಚ್ಚರಿಸಿದರು.
ಇದನ್ನೂ ಓದಿ: ಚುನಾವಣೆ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಿ
ತಾಲೂಕು ಅಧ್ಯಕ್ಷ ತಮ್ಮಣ್ಣ ರಾಥೋಡ್, ಮುಖಂಡರಾದ ದೇವೇಂದ್ರಪ್ಪ, ಶಿವಪ್ಪ ವಕೀಲ, ವೆಂಕಟೇಶ್ ಚವ್ಹಾಣ್, ಅಮರೇಶ್, ರಮೇಶ ರಾಥೋಡ್, ಲಕ್ಷ್ಮಣ, ರೂಪೇಶ್, ಗುರಪ್ಪ, ಪಂಪಣ್ಣ, ದೀಪಕ್, ಸೀತಪ್ಪ, ನರೇಶ್ ಜಾಧವ್, ಶಂಕ್ರಪ್ಪ, ಆನಂದ್, ತುಕಾರಾಮ್, ಭೀಮಣ್ಣ ಕೊತ್ತದೊಡ್ಡಿ, ಭೀಮಣ್ಣ, ರವಿ ಬಂಡೆಗುಡ್ಡ ಇತರರಿದ್ದರು.