ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ನಾಲ್ಕು ವರ್ಷದ ಹಿಂದೆ ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಹಕ್ಕುಪತ್ರ ಪಡೆದುಕೊಂಡಿದ್ದ ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಮಂದಿ ಫಲಾನುಭವಿಗಳಿಗೆ ಸರ್ವೆ ಗ್ರಾಮದ ಕಟ್ಟತ್ತಡ್ಕ ಎಂಬಲ್ಲಿ ನಿವೇಶನ ಹಂಚಿಕೆ ಮಾಡಿಕೊಡುವ ಕಾರ್ಯ ಗುರುವಾರ ಮುಂಡೂರು ಗ್ರಾಮ ಪಂಚಾಯಿತಿ ವತಿಯಿಂದ ನಡೆದಿದೆ.
ತಿಂಗಳೊಳಗಾಗಿ ನಿವೇಶನ ಗುರುತಿಸಿಕೊಡದಿದ್ದರೆ ಉಗ್ರ ಪ್ರತಿಭಟನೆಗಿಳಿಯುವ ಎಚ್ಚರಿಕೆ ನೀಡಿದ್ದ ಫಲಾನುಭವಿಗಳಿಗೆ ಕೊನೆಗೂ ನಿವೇಶನ ಭಾಗ್ಯ ಲಭಿಸಿದೆ.
ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಹಕ್ಕುಪತ್ರ ನೀಡಲಾಗಿದ್ದ 24 ಮಂದಿ ಫಲಾನುಭವಿಗಳಿಗೆ ನಿವೇಶನ ನೀಡಲು ಸರ್ವೆ ಗ್ರಾಮದ ಕಟ್ಟತ್ತಡ್ಕದಲ್ಲಿ ಜಾಗ ಕಾಯ್ದಿರಿಸಲಾಗಿತ್ತು. ಈ ಸ್ಥಳಕ್ಕೆ ಗುರುವಾರ ಹಕ್ಕುಪತ್ರ ಪಡೆದುಕೊಂಡಿದ್ದ ಫಲಾನುಭವಿಗಳನ್ನು ಕರೆಸಿಕೊಂಡು ಮುಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್ ಎನ್.ಎಸ್.ಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹಕ್ಕುಪತ್ರ ಪಡೆದುಕೊಂಡಿದ್ದ ಫಲಾನುಭವಿಗಳಿಗೆ ತಲಾ ಎರಡು ಮುಕ್ಕಾಲು ಸೆಂಟ್ಸ್ ಅಳತೆ ಮಾಡಿ ಹಂಚಿಕೆ ಮಾಡಲಾಯಿತು.
ಮುಂಡೂರು ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಬಾಲಕೃಷ್ಣ ಪೂಜಾರಿ ಕುರೆಮಜಲು, ಬಾಬು ಕಲ್ಲುಗುಡ್ಡೆ, ರಸಿಕಾ ರೈ ಮೇಗಿನಗುತ್ತು, ಪಂಚಾಯಿತಿ ಕಾರ್ಯದರ್ಶಿ ಸೂರಪ್ಪ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು, ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಆಚಾರ್ಯ ನರಿಮೊಗರು, ಗುತ್ತಿಗೆದಾರ ರಾಜ್ಕುಮಾರ್ ಮತ್ತಿತರರು ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವ ವೇಳೆ ಉಪಸ್ಥಿತರಿದ್ದರು.
ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಹಕ್ಕುಪತ್ರ ಪಡೆದುಕೊಂಡು ಕಳೆದ 4 ವರ್ಷಗಳಿಂದ ನಿವೇಶನಕ್ಕಾಗಿ ಅಲೆದಾಡುತ್ತಿದ್ದ ಫಲಾನುಭವಿಗಳ ಅಳಲಿನ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಫಲಾನುಭವಿಗಳ ವೇದನೆಯನ್ನು ತೆರೆದಿಡುವ ಕೆಲಸ ಮಾಡಲಾಗಿದ್ದು, ಇದೀಗ ಗ್ರಾಮ ಪಂಚಾಯಿತಿ ಸ್ಪಂದನೆ ನೀಡುವ ಮೂಲಕ, ನಂಬಿಕೆ ಕಳಕೊಂಡಿದ್ದ ಫಲಾನುಭವಿಗಳ ವೇದನೆ ದೂರ ಮಾಡಿದಂತಾಗಿದೆ.
ಫಲಾನುಭವಿಗಳ ಅಲೆದಾಟಕ್ಕೆ ಮುಕ್ತಿ
ನಮಗೆ 2020ರ ಜೂನ್ 15ರಂದು ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಹಕ್ಕುಪತ್ರ ನೀಡಲಾಗಿದೆ. ಆದರೆ ಈ ತನಕ ಗಡಿ ಗುರುತು ಮಾಡಿ ನಿವೇಶನ ಹಂಚಿಕೆ ಮಾಡಿಕೊಟ್ಟಿಲ್ಲ. ಇದಕ್ಕಾಗಿ ನಾವು ಕಳೆದ 4 ವರ್ಷಗಳಿಂದ ಅಲೆದಾಡುತ್ತಿದ್ದೇವೆ. ಆದರೆ ಗ್ರಾಮ ಪಂಚಾಯಿತಿಯವರು ವರ್ಷವಿಡೀ ಇಂದು, ನಾಳೆ ಎಂದು ಹೇಳುತ್ತಾ ದಿನ ದೂಡುತ್ತಲೇ ಇದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಂದ ಸರಿಯಾದ ಉತ್ತರಗಳು ಕೂಡ ಸಿಕ್ಕಿಲ್ಲ ಎಂದು ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಹಕ್ಕು ಪತ್ರ ಪಡೆದುಕೊಂಡಿದ್ದ ಫಲಾನುಭವಿಗಳು ಆರೋಪಿಸಿದ್ದರು.
ಫಲ ನೀಡಿದ ಪ್ರತಿಭಟನೆ ಎಚ್ಚರಿಕೆ
ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಹಕ್ಕುಪತ್ರ ಪಡೆದುಕೊಂಡಿರುವ ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಮಂದಿಯ ಪೈಕಿ ಕೆಲವರು ಕಳೆದ ಸೆ.9ರಂದು ಮುಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದ್ದರು. ಇನ್ನು ಒಂದು ತಿಂಗಳೊಳಗಾಗಿ ಹಕ್ಕುಪತ್ರದ ಜಾಗವನ್ನು ಗುರುತಿಸಿ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದರು. ಇದೀಗ ಮುಂಡೂರು ಗ್ರಾಮ ಪಂಚಾಯಿತಿ ಆಡಳಿತ ಹಕ್ಕುಪತ್ರ ಪಡೆದುಕೊಂಡಿದ್ದ ಫಲಾನುಭವಿಗಳು ನೀಡಿರುವ ಗಡುವಿಗೆ ಮುಂಚಿತವಾಗಿಯೇ ನಿವೇಶನ ಹಂಚಿಕೆ ಮಾಡಿದೆ.