ಮುಂಬೈ:ಪಾಡ್ಕಾಸ್ಟರ್ ರಣವೀರ್ ಅಲ್ಲಾಬಾಡಿಯಾ(Ranveer Allahbadia)ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಯ ವಿವಾದ ಸದ್ಯ ನಿಲ್ಲುವಂತೆ ಕಾಣುತ್ತಿಲ್ಲ. ವಿವಾದ ಭುಗಿಲೆಳುತ್ತಿದ್ದಂತೆ ತಾನು ಮಾತನಾಡಿದ್ದು ತಪ್ಪು ಎಂದು ರಣವೀರ್ ಅಲ್ಲಾಬಾಡಿಯಾ ಕ್ಷಮೆಯಾಚಿಸಿದ್ದರು. ಆದರೆ ಅವರ ವಿರುದ್ಧ ಹಲವಾರು ಎಫ್ಐಆರ್ಗಳು ದಾಖಲಾಗಿವೆ. ಆತನ ಫೋನ್ ಸ್ವಿಚ್ ಆಫ್ ಆಗಿದ್ದು ಮನೆಯನ್ನು ಲಾಕ್ ಮಾಡಲಾಗಿದೆ. ಆದ್ದರಿಂದ ರಣವೀರ್ ಅಲ್ಲಾಬಾಡಿಯಾರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದರು.
ಇದನ್ನು ಓದಿ: ರಣವೀರ್ ಅಲ್ಲಾಬಾಡಿಯಾ ಮೊಬೈಲ್ ಸ್ವಿಚ್ ಆಫ್; ಸಮಯ್ ರೈನಾಗೆ ಮಾರ್ಚ್ 10ರವರೆಗೆ ಗಡುವು | Ranveer Allahbadia
ಈ ಮಧ್ಯೆ ರಣವೀರ್ ಅಲ್ಲಾಬಾಡಿಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ತನಗೆ ಜೀವ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಬಹಿರಂಗಪಡಿಸಿದ್ದಾರೆ. ತನ್ನ ಹೇಳಿಕೆಗೆ ಮತ್ತೊಮ್ಮೆ ಕ್ಷಮೆಯಾಚಿಸಿರುವ ರಣವೀರ್, ನನ್ನ ತಂಡ ಮತ್ತು ನಾನು ಪೊಲೀಸರು ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಪಾಲಕರ ಕುರಿತು ನನ್ನ ಕಾಮೆಂಟ್ ತಪ್ಪಾಗಿತ್ತು. ನನ್ನ ತಪ್ಪನ್ನು ಸರಿಪಡಿಸಿಕೊಳ್ಳುವುದು ನನ್ನ ನೈತಿಕ ಜವಾಬ್ದಾರಿ. ನ್ಯಾಯಾಂಗ ಪ್ರಕ್ರಿಯೆಯನ್ನು ಅನುಸರಿಸುತ್ತೇನೆ ಮತ್ತು ಎಲ್ಲಾ ತನಿಖಾ ಸಂಸ್ಥೆಗಳ ಮುಂದೆ ಲಭ್ಯವಿರುತ್ತೇನೆ ಎಂದು ತಿಳಿಸಿದ್ದಾರೆ.
ಆದರೆ ತನಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಮತ್ತು ಈಗ ತನ್ನ ಕುಟುಂಬವನ್ನೂ ಗುರಿಯಾಗಿಸಲಾಗುತ್ತಿದೆ ಎಂದು ರಣವೀರ್ ಹೇಳಿದ್ದಾರೆ. ನನ್ನನ್ನು ಕೊಲ್ಲಲು ಮತ್ತು ನನ್ನ ಕುಟುಂಬಕ್ಕೆ ನೋವುಂಟು ಮಾಡಲು ಬಯಸುವ ಜನರಿಂದ ಜೀವ ಬೆದರಿಕೆಗಳು ಬರುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಜನರು ರೋಗಿಗಳಂತೆ ನಟಿಸುತ್ತಾ ನನ್ನ ತಾಯಿಯ ಚಿಕಿತ್ಸಾಲಯಕ್ಕೆ ಬರುತ್ತಿದ್ದಾರೆ. ನನಗೆ ಇದು ಭಯವನ್ನುಂಟು ಮಾಡಿದ್ದು ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ಆದರೆ ಈ ವಿವಾದದಿಂದ ತಾನು ಓಡಿಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನನಗೆ ಭಾರತದ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದರು.
ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಪಾಲಕರು ಮತ್ತು ಲೈಂಗಿಕತೆಯ ಬಗ್ಗೆ ರಣವೀರ್ ಅಲ್ಲಾಬಾಡಿಯಾ ಅವರು ಅಸಭ್ಯ ಹೇಳಿಕೆಗಳನ್ನು ನೀಡಿದ್ದರು. ಸಮಯ್ ರೈನಾ ಅವರ ವಕೀಲರ ಮನವಿಯನ್ನು ಸ್ವೀಕರಿಸಿದ ಮುಂಬೈ ಪೊಲೀಸರು ಮಾರ್ಚ್ 10ರೊಳಗೆ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ರೈನಾ ಅವರಿಗೆ ಗಡುವು ನೀಡಿದ್ದಾರೆ.(ಏಜೆನ್ಸೀಸ್)
ರಣವೀರ್ ಅಲ್ಲಾಬಾಡಿಯಾಗೆ ಮುಂಬೈ ಪೊಲೀಸರಿಂದ ಸಮನ್ಸ್ ಜಾರಿ; ಕಾರಣ ಹೀಗಿದೆ.. | Ranveer Allahbadia