ಕನ್ಯಾಕುಮಾರಿ: ಪತ್ನಿ ಸದಾ ಮೊಬೈಲ್ನಲ್ಲಿ ಬಿಜಿ ಆಗಿರುವುದನ್ನು ನೋಡಿ ಅನುಮಾನಗೊಂಡ ಪತಿ ಮಹಾಶಯನೊಬ್ಬ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವೆಲ್ಲಿಚಂದೈ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಉಮಾ ಕೊಲೆಯಾದ ಮಹಿಳೆ. ರಮೇಶ್ (42) ಆರೋಪಿ ಪತಿ. ದಂಪತಿಗೆ 11 ವರ್ಷದ ಮಗ ಮತ್ತು 9 ವರ್ಷದ ಮಗಳಿದ್ದಾಳೆ. ರಮೇಶ್ ದ್ವಿಚಕ್ರ ವಾಹನಗಳಿಗೆ ಸೀಟ್ ಕವರ್ ತಯಾರಿಸುವ ಕೆಲಸ ಮಾಡುತ್ತಿದ್ದಾನೆ. ಉಮಾ ಟೈಲರಿಂಗ್ ಕಲಿತು ಕೆಲಸದಲ್ಲಿ ತೊಡಗಿಕೊಂಡಿದ್ದಳು.
ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಬಟ್ಟೆ ಹೊಲಿಯುವುದೇ ಉಮಾರ ನೆಚ್ಚಿನ ಕಸುಬು ಆಗಿತ್ತು. ಗ್ರಾಹಕರೊಂದಿಗೆ ಮಾತನಾಡುವುದು, ವಾಟ್ಸ್ಆ್ಯಪ್ ಮೂಲಕ ಹೊಸ ಹೊಸ ಡಿಸೈನ್ಗಳನ್ನು ಕಳುಹಿಸಿ ಅವರಿಂದ ಅನುಮತಿ ಪಡೆದುಕೊಳ್ಳುವುದು ಮಾಡುತ್ತಿದ್ದಳು. ತನಗೆ ಬೇಕಾದ ಡಿಸೈನ್ಗಳನ್ನು ಯೂಟ್ಯೂಬ್ನಲ್ಲಿ ಹುಡುಕುವ ಅಭ್ಯಾಸವನ್ನು ಉಮಾ ಬೆಳೆಸಿಕೊಂಡಿದ್ದಳು.
ಇತ್ತ ಅಂಗಡಿಯಲ್ಲಿ ಇದ್ದಾಗಲೆಲ್ಲ ರಮೇಶ್, ಉಮಾ ಜತೆಯಲ್ಲಿ ಮಾತನಾಡಲು ಫೋನ್ ಮಾಡುತ್ತಿದ್ದ. ಆದರೆ, ಬಹುತೇಕ ಸಮಯದಲ್ಲಿ “ನೀವು ಕರೆ ಮಾಡಿರುವ ಚಂದದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ. ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ” ಎಂಬ ಮಾತೊಂದೇ ಕೇಳಿಬರುತ್ತಿತ್ತು.
ಪದೇಪದೆ ಈ ಮಾತನ್ನು ಕೇಳುತ್ತಿದ್ದ ರಮೇಶ್, ಪತ್ನಿ ಉಮಾ ಮೇಲೆ ಅನುಮಾನ ಪಡಲು ಆರಂಭಿಸಿದ. ಬೇರೋಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿರಬಹುದು ಅಂದುಕೊಂಡು. ಅದಕ್ಕೆ ಪುಷ್ಟಿ ನೀಡುವಂತೆ ಅನೇಕ ಟೈಲರ್ಗಳು ಅವಳ ಮನೆಗೆ ಬಂದು ಹೋಗುತ್ತಿದ್ದರು. ಅದರಲ್ಲಿ ಪುರುಷ ಟೈಲರ್ಗಳು ಸೇರಿಕೊಂಡಿದ್ದರು. ಇದರಿಂದ ಆಕೆಗೆ ಕಿರುಕುಳ ನೀಡಲು ರಮೇಶ್ ಆರಂಭಿಸಿದ.
ಗಲಾಟೆ ನಡೆದಾಗ ಉಮಾ ಮನೆಯವರು ಬಂದು ಕೌಟುಂಬಿಕ ವಿವಾದವನ್ನು ಇತ್ಯರ್ಥಪಡಿಸಿ ಹೋಗಿದ್ದರು. ರಮೇಶ್ಗೆ ಆಪ್ತ ಸಮಾಲೋಚನೆಯನ್ನು ಸಹ ನೀಡಿದ್ದರು. ಆದರೆ, ಪತ್ನಿಯ ಫೋನ್ ಸದಾ ಬಿಜಿಯಾಗಿರುತ್ತಿದ್ದನ್ನು ನೋಡುತ್ತಿದ್ದ ರಮೇಶ್ಗೆ ಅನುಮಾನ ಹೋಗಲೇ ಇಲ್ಲ. ಆತ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದ ಎನ್ನಲಾಗಿದೆ.
ಹಾಲು ಮಾರಾಟ ಮಾಡುವವನ ಮೇಲೆಯೂ ರಮೇಶ್ಗೆ ಅನುಮಾನ ಮೂಡಲು ಆರಂಭಿಸಿತು. ಕೊನೆಗೂ ಗಂಡ ವರ್ತನೆಯಿಂದ ಬೇಸತ್ತ ಉಮಾ ಗಂಡನನ್ನು ಬಿಟ್ಟು ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋದಳು. ರಮೇಶ್, ಗ್ರಾಮಸ್ಥರ ಮೂಲಕ ಸಂಧಾನ ಮಾಡಿ ಮತ್ತೆ ಮನೆಗೆ ಕರೆತಂದಿದ್ದ. ಅಂದಿನಿಂದ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ, ಮೇ 16ರಂದು ಎಲ್ಲರು ಮಲಗಿದ್ದ ವೇಳೆ ಪತ್ನಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮಕ್ಕಳಿಗೆ ಎಚ್ಚರವಾಗಿ ನೋಡುತ್ತಿದ್ದಂತೆ ರಮೇಶ್, ಬೈಕ್ ತೆಗೆದುಕೊಂಡು ಅಲ್ಲಿಂದ ಪರಾರಿ ಆಗಿದ್ದಾನೆ.
ಈ ವಿಚಾರವನ್ನು ಮಕ್ಕಳು ನೆರೆಮನೆಯವರಿಗೆ ತಿಳಿಸಿದ್ದಾರೆ. ತಕ್ಷಣ ಉಮಾಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು ಸಹ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಘಟನೆ ಸಂಬಂಧ ಸಿಲ್ವರ್ ಮಾರ್ಕೆಟ್ ಸ್ಟೇಷನ್ನಲ್ಲಿ ದೂರು ದಾಖಲಾಗಿದ್ದು, ಮಕ್ಕಳು ಮತ್ತು ನೆರೆಹೊರೆಯವರನ್ನು ವಿಚಾರಣೆ ನಡೆಸಲಾಗಿದೆ.
ಇದಾದ ಬಳಿಕ ತನ್ನ ಮಕ್ಕಳಿಗೆ ಕರೆ ಮಾಡಿ ಮಾತನಾಡಿರುವ ರಮೇಶ್, ಗಲಾಟೆ ಎಲ್ಲ ಇಲ್ಲಿಗೆ ಕೊನೆಯಾಯಿತು. ಫೋನ್ನಲ್ಲಿ ಸದಾ ಕೇಳಿಬರುತ್ತಿದ್ದ ಎಂಗೇಜ್ಮೆಂಟ್ ಶಬ್ದ ಇನ್ಮುಂದೆ ಕೇಳಿಬರುವುದಿಲ್ಲ ಎಂದಿದ್ದಾನೆ. ಈ ವಿಚಾರ ಕೇಳಿದ ಸ್ಥಳೀಯರು ಇವನೆಂಥಾ ಹುಚ್ಚು ಮನುಷ್ಯ. ಪತ್ನಿಯ ಬಗ್ಗೆ ವಿಚಾರಿಸದೇ ಹುಚ್ಚನಂತಾಗಿ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ ಎಂದು ಜರಿದಿದ್ದಾರೆ. (ಏಜೆನ್ಸೀಸ್)
ಲಾಕ್ಡೌನ್ ನಡುವೆಯೂ ನಡೆಯಿತು ಅದ್ಧೂರಿ ಮದುವೆ: ಕರೊನಾ ಪ್ರಕರಣಗಳಿದ್ರೂ ಡೋಂಟ್ ಕೇರ್
ತಮ್ಮನೋ ತಂಗಿಯೋ ಇದ್ದಿದ್ರೆ ಚೆನ್ನಾಗಿರ್ತಿತ್ತು!; ಒಂದೇ ಮಗುವಿರುವ ಮನೆಗಳಲ್ಲಿ ಒಂಟಿತನ..
ಏರ್ ಇಂಡಿಯಾ ಸರ್ವರ್ ಮೇಲೆ ಸೈಬರ್ ದಾಳಿ: 4.5 ಮಿಲಿಯನ್ ಗ್ರಾಹಕರ ದತ್ತಾಂಶ ಸೋರಿಕೆ