Pahalgam Terror Attack : ಕಳೆದ ವಾರ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಅದೇ ರೀತಿಯ ಹೆಚ್ಚಿನ ದಾಳಿಗಳು ನಡೆಯುವ ಸಾಧ್ಯತೆಯ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಸರ್ಕಾರ, ಕಾಶ್ಮೀರದಾದ್ಯಂತ 87 ಪ್ರವಾಸಿ ತಾಣಗಳಲ್ಲಿ 48 ತಾಣಗಳನ್ನು ಮುಚ್ಚಿದೆ.
ಪಹಲ್ಗಾಮ್ ದಾಳಿಯ ನಂತರ ಕಣಿವೆಯಲ್ಲಿ ಕೆಲವು ಸ್ಲೀಪರ್ ಸೆಲ್ಗಳು ಸಕ್ರಿಯಗೊಂಡಿದ್ದು, ತಮಗೆ ಬಂದ ಸೂಚನೆಯಂತೆ ಕಾರ್ಯಾಚರಣೆಗಳನ್ನು ನಡೆಸಲು ಹೊಂಚು ಹಾಕುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಪಹಲ್ಗಾಮ್ ದಾಳಿಯ ನಂತರ ಕಣಿವೆಯಲ್ಲಿ ಸಕ್ರಿಯ ಭಯೋತ್ಪಾದಕರ ಮನೆಗಳನ್ನು ನಾಶಪಡಿಸಿದ್ದಕ್ಕೆ ಪ್ರತೀಕಾರವಾಗಿ ದೊಡ್ಡ ದಾಳಿಗಳನ್ನು ನಡೆಸಲು ಯೋಜಿಸುತ್ತಿದ್ದಾರೆ ಎಂದು ಗುಪ್ತಚರ ವರದಿಗಳು ಬಂದಿವೆ.
ದಾಳಿಯ ಎಚ್ಚರಿಕೆಯ ಬೆನ್ನಲ್ಲೇ ಭದ್ರತಾ ಪಡೆಗಳು ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ದಾಲ್ ಸರೋವರ ಪ್ರದೇಶಗಳು ಸೇರಿದಂತೆ ಸೂಕ್ಷ್ಮ ಪ್ರವಾಸಿ ಸ್ಥಳಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನಿಂದ ಫಿದಾಯೀನ್ ವಿರೋಧಿ ಪಡೆಗಳನ್ನು ಸೂಕ್ಷ್ಮ ಪ್ರವಾಸಿ ತಾಣಗಳಿಗೆ ನಿಯೋಜಿಸಲಾಗಿದೆ. ಒಟ್ಟಾರೆಯಾಗಿ, ಭದ್ರತಾ ಕ್ರಮಗಳನ್ನು ಗಮನಾರ್ಹವಾಗಿ ಬಲಪಡಿಸಲಾಗಿದೆ.
ಏಪ್ರಿಲ್ 22 ರಂದು, ಪಾಕಿಸ್ತಾನ ಮೂಲದ ಭಯೋತ್ಪಾದಕರ ಗುಂಪೊಂದು ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣವಾದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ರಜೆಯಲ್ಲಿದ್ದ ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಪ್ರವಾಸಿಗರನ್ನು ಕೊಂದು ಹಾಕಿತು. ಈ ದಾಳಿಯು ಕಾಶ್ಮೀರದಿಂದ ಪ್ರವಾಸಿಗರ ಬೃಹತ್ ವಲಸೆಗೆ ಕಾರಣವಾಗಿದೆ ಮತ್ತು ಪ್ರವಾಸಿಗರು ಕ್ರಮೇಣ ಪಹಲ್ಗಾಮ್ ಸೇರಿದಂತೆ ರಾಜ್ಯಕ್ಕೆ ಮರಳುತ್ತಿರುವಾಗಲೇ ಈ ಎಚ್ಚರಿಕೆಗಳು ಬಂದಿವೆ. ಈ ದಾಳಿಯಿಂದ ಕಾಶ್ಮೀರದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ.
ಭದ್ರತಾ ಸಂಸ್ಥೆಗಳು ರಾಜ್ಯಾದ್ಯಂತ ಬೃಹತ್ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಸಂಘಟಿತ ದಾಳಿಗಳನ್ನು ನಡೆಸುತ್ತಿದೆ. ಈ ಕಾರ್ಯಾಚರಣೆಯಲ್ಲಿ ನೂರಾರು ಶಂಕಿತರನ್ನು ಬಂಧಿಸಿವೆ. ಅಲ್ಲದೆ, ಕಣಿವೆಯಲ್ಲಿ ಸಕ್ರಿಯ ಭಯೋತ್ಪಾದಕರ ಹಲವಾರು ಮನೆಗಳನ್ನು ಧ್ವಂಸ ಮಾಡಲಾಗಿದೆ. (ಏಜೆನ್ಸೀಸ್)
ಜಗತ್ತಿನ ಮೊದಲ ಮಾನವ ಯಾವ ದೇಶದಲ್ಲಿ ಜನಿಸಿದನೆಂದು ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ ಉತ್ತರ… World First Man