ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ ಕೋಡಿ ಭಾಗದಲ್ಲಿ ಉಪ್ಪುನೀರು ಬರುತ್ತಿದ್ದು 2 ದಶಕಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಕುಂದಾಪುರ ಪುರಸಭೆ ಹಾಗೂ ತಾಲೂಕು ಕಚೇರಿ ಎದುರು ಮಂಗಳವಾರ ಉಪ್ಪುನೀರಿನ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.

ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗಳಷ್ಟೇ ಆಗುತ್ತಿದ್ದು, ಕೋಡಿ ಭಾಗಕ್ಕೆ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ಪುರಸಭೆಯಿಂದ ಕೋಡಿ ಬೇರ್ಪಡಿಸಿ ಗ್ರಾಪಂ ಮಾಡಿಕೊಡಿ ಎಂದು ಕೋಡಿ ಭಾಗದ ಜನರು ಬೇಡಿಕೆ ಇಟ್ಟರು. ತೆರಿಗೆ ವಿಷಯದಲ್ಲಿ ಕೋಡಿಗೆ ಸಮಪಾಲು ಇದ್ದರೂ ಅನುದಾನ ಹಂಚಿಕೆಯಲ್ಲಿ ಇರುವುದಿಲ್ಲ. ಜನರ ಬೇಡಿಕೆಗೆ ಬೆಲೆಯೇ ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯಶಿಕ್ಷಕ ರತ್ನಾಕರ ಶೇರೆಗಾರ್, ಅಶೋಕ್ ಪೂಜಾರಿ ಕೋಡಿ, ಸುಬ್ರಹ್ಮಣ್ಯ ಶೇರೆಗಾರ್, ಪ್ರಸಾದ್ ಗಾಣಿಗ ಮೊದಲಾದವರು ಮಾತನಾಡಿದರು. ಮುಖ್ಯಾಧಿಕಾರಿ ಆನಂದ್ ಜತೆ ಪ್ರತಿಭಟನಕಾರರು ವಾಗ್ವಾದ ನಡೆಸಿದರು.
ಅಹವಾಲು ಸ್ವೀಕರಿಸಿದ ಕುಂದಾಪುರ ತಹಸೀಲ್ದಾರ್ ಹಾಗೂ ಪುರಸಭಾ ಮುಖ್ಯ ಅಧಿಕಾರಿ ಸ್ಥಳ ಪರಿಶೀಲನೆಗೆ ಕೋಡಿ ನಾಗಜಟ್ಟಿಗೇಶ್ವರ ದೇವಸ್ಥಾನದಿಂದ ಕೋದಂಡರಾಮ ದೇವಸ್ಥಾನವರೆಗೆ ತೆರಳಿದರು. ಸೋಮವಾರ ಪುರಸಭೆ ಅಧ್ಯಕ್ಷ ಮೋಹದಾಸ ಶೆಣೈ ಭೇಟಿ ನೀಡಿ ಶಾಸಕರ ಜತೆ ಚರ್ಚಿಸಿ ಅನುದಾನದ ಭರವಸೆ ನೀಡಿದ್ದರು.
ಪರಿಹಾರ ಮನವಿ
ಕೋಡಿಯ ಅರ್ಧ ಊರಿನಲ್ಲಿ ಉಪ್ಪು ನೀರು ತುಂಬಿದ್ದು ಗ್ರಾಮಸ್ಥರು ದಿನದ 24 ಗಂಟೆ ಸೊಳ್ಳೆ ಬತ್ತಿ ಹಚ್ಚಿ ಜೀವನ ನಡೆಸುತ್ತಿದ್ದೇವೆ. ಅಧಿಕಾರಿಗಳು ಮೌನ ವಹಿಸಿದ್ದಾರೆ. ಸ್ಥಳೀಯಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ, ಸಮಸ್ಯೆ ದಿನಪತ್ರಿಕೆಗಳಲ್ಲಿ ಪ್ರಕಟವಾದರೂ ಶಾಶ್ವತ ಪರಿಹಾರ ಸಾಧ್ಯವಾಗಿಲ್ಲ. ನೂರಾರು ಎಕರೆ ಕೃಷಿ ಭೂಮಿ, ತೆಂಗಿನ ತೋಟ ಸಂಪೂರ್ಣ ನಾಶವಾಗಿದೆ. ಬಾವಿಯ ನೀರು ಉಪ್ಪಾಗಿದೆ. ದೂರದಿಂದ ನೀರು ಹೊತ್ತು ತರುವ ಪರಿಸ್ಥಿತಿ ಇದ್ದು ಶಾಶ್ವತ ಪರಿಹಾರ ಒದಗಿಸಬೇಕು ಎಂದು ತಹಸೀಲ್ದಾರ್, ಸಹಾಯಕ ಕಮಿಷನರ್, ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.