ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಭಾರತ ಕಂಡ ಅತ್ಯಂತ ಅದ್ದೂರಿ ಮದುವೆ ಸಮಾರಂಭಗಳಲ್ಲಿ ಒಂದಾಗಿದೆ. ಈ ಅದ್ದೂರಿತನ ಜಾಗತಿಕ ಗಮನ ಸೆಳೆಯಿತು. ಈ ಜೋಡಿ ಜುಲೈ 12 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಗೂ ಮುನ್ನ ಜಾಮ್ನಗರದಲ್ಲಿ ಮತ್ತು ಇನ್ನೊಂದು ಯುರೋಪ್ನಲ್ಲಿ ಐಷಾರಾಮಿ ಕ್ರೂಸ್ನಲ್ಲಿ 2 ಪ್ರೀವೆಡ್ಡಿಂಗ್ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪ್ರಪಂಚದಾದ್ಯಂತದ ಗಣ್ಯರು ಮತ್ತು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಸದ್ಯ ಈ ವಿವಾಹದ ಕುರಿತು ನೀತಾ ಅಂಬಾನಿ(Nita Ambani) ಮುಕ್ತವಾಗಿ ಮಾತನಾಡಿದ್ದಾರೆ.
ಬ್ಲೂಮ್ಬರ್ಗ್ ಟೆಲಿವಿಷನ್ನಲ್ಲಿ ನೀಡಿದ ಸಂದರ್ಶನಲ್ಲಿ ನೀತಾ ಅಂಬಾನಿ ಮಾತನಾಡುವಾಗ ತಮ್ಮ ಮಗ ಅನಂತ್ ಅಂಬಾನಿ ವಿವಾಹಕ್ಕೂ ಮುನ್ನ ಹೇಳಿದ ಮಾತುಗಳನ್ನು ನೆನೆದರು. ನನ್ನ ಮಗ ಅನಂತ್ ತನ್ನ ಆಸ್ತಮಾದಿಂದಾಗಿ ಚಿಕ್ಕ ವಯಸ್ಸಿನಿಂದಲೂ ಬೊಜ್ಜಿನ ವಿರುದ್ಧ ಹೋರಾಡುತ್ತಿದ್ದಾನೆ. ವಿವಾಹ ಸಮಾರಂಭದಲ್ಲಿ ಅವನು ತನ್ನ ಆತ್ಮವಿಶ್ವಾಸದಿಂದ ವೇದಿಕೆಗೆ ಹೋದನು. ಅದಕ್ಕೂ ಮುನ್ನ ಅವನ್ನು ನನ್ನ ಬಳಿ, ಅಮ್ಮಾ ನಾನು ದೈಹಿಕವಾಗಿ ಹೇಗಿದ್ದೇನೆ ಎಂಬುದು ಅಲ್ಲ, ನನ್ನ ಹೃದಯ ಹೇಗಿದೆ ಎಂಬುದು ಮುಖ್ಯ ಎಂದು ಹೇಳಿದ. ಬಳಿಕ ಅನಂತ್ ತನ್ನ ಜೀವನ ಸಂಗಾತಿಯ ಕೈಯನ್ನು ಹಿಡಿದಿರುವುದನ್ನು ನಾನು ನೋಡಿದೆ. ಅದು ನನಗೆ ಭಾವನಾತ್ಮಕ ಕ್ಷಣ ಎಂದು ಭಾವಿಸುತ್ತೇನೆ ಎಂದರು.
ಇದೇ ಸಮಯದಲ್ಲಿ, ಮದುವೆ ಸಮಯದಲ್ಲಿ ಹಲವು ಟೀಕೆಗಳು ಕೇಳಿಬಂದವು. ವಿವಾಹದ ಅದ್ದೂರಿತನದ ಬಗ್ಗೆ ಕೆಲವು ವಿಮರ್ಶಕರು ಮಾತನಾಡುತ್ತಿದ್ದರು. ಆ ಟೀಕೆಗಳನ್ನು ಕೇಳಿದಾಗ ನಿಮಗೆ ಬೇಸರವಾಗುತ್ತದೆಯೇ? ಎಂದು ನೀತಾ ಅಂಬಾನಿ ಅವರನ್ನು ಕೇಳಲಾಯಿತು. ಅದಕ್ಕೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಮದುವೆಗೆ ತಮ್ಮ ಕೈಲಾದಷ್ಟು ಮಾಡಲು ಬಯಸುತ್ತಾರೆ ಎಂದು ನಿಮಗೆ ತಿಳಿದಿದೆ. ಮತ್ತು ಇದೆಲ್ಲದರಲ್ಲೂ ನಾವು ಮಾಡಿದ್ದು ಅದನ್ನೇ. ಇದು ಭಾರತದಲ್ಲಿ ತಯಾರಿಸಿದ ಬ್ರ್ಯಾಂಡ್ ಎಂದು ನಾನು ಭಾವಿಸುತ್ತೇನೆ. ಭಾರತೀಯ ಸಂಪ್ರದಾಯಗಳು, ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂಚೂಣಿಗೆ ತರಲು ಸಾಧ್ಯವಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದರು. (ಏಜೆನ್ಸೀಸ್)