ನವದೆಹಲಿ: ಸಗಣಿಯಿಂದ ಪೇಂಟ್ ತಯಾರಿಸುವ ಭಾರತದ ಮೊದಲ ಹಾಗೂ ಏಕೈಕ ಖಾದಿ ಪ್ರಾಕೃತಿಕ ಪೇಂಟ್ನ ಹೊಸ ಸ್ವಯಂಚಾಲಿತ ಉತ್ಪಾದನಾ ಘಟಕ ಇಂದು ಜೈಪುರದಲ್ಲಿ ಉದ್ಘಾಟನೆಗೊಂಡಿತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವರ್ಚುವಲ್ ಆಗಿ ಇದನ್ನು ಲೋಕಾರ್ಪಣೆ ಮಾಡಿದರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು, ತಂತ್ರಜ್ಞಾನದ ಹೊಸ ಶೋಧವನ್ನು ಶ್ಲಾಘಿಸಿದರು. ಇದು ದೇಶದ ಗ್ರಾಮೀಣ ಮತ್ತು ಕೃಷಿ ಆಧಾರಿತ ಆರ್ಥಿಕತೆಯನ್ನು ಸಶಕ್ತಗೊಳಿಸುವಲ್ಲಿ ದೀರ್ಘಕಾಲೀನ ಪರಿಣಾಮ ಹೊಂದಿರಲಿದೆ ಎಂದು ಹೇಳಿದರು. ಲಕ್ಷ-ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರೂ ಈ ಉತ್ಪಾದನಾ ಘಟಕವನ್ನು ಉದ್ಘಾಟಿಸಿದಷ್ಟು ಸಂತೋಷ ಮತ್ತು ತೃಪ್ತಿ ದೊರೆತಿರಲಿಲ್ಲ ಎಂದು ಗಡ್ಕರಿ ಹೇಳಿದರು.
ಯಶಸ್ವಿ ಸಂಶೋಧನೆಗಾಗಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಡು ಬಡವರ ಅನುಕೂಲಕ್ಕಾಗಿ ಸುಸ್ಥಿರ ಅಭಿವೃದ್ಧಿಯನ್ನು ಸೃಷ್ಟಿಸುವ ಅಪಾರ ಸಾಮರ್ಥ್ಯವನ್ನು ಖಾದಿ ಪ್ರಕೃತಿಕ್ ಪೇಂಟ್ʼ ಹೊಂದಿದೆ ಎಂದ ಅವರು, ಪ್ರತಿ ಹಳ್ಳಿಯಲ್ಲಿ ಇದರ ಘಟಕ ಸ್ಥಾಪಿಸುವ ಗುರಿ ಇರಿಸಿಕೊಳ್ಳಿ ಎಂದರು. ನಾಗ್ಪುರದ ತಮ್ಮ ನಿವಾಸದಲ್ಲಿ ಬಳಸಲು 500 ಲೀಟರ್ ಡಿಸ್ಟೆಂಪರ್ ಮತ್ತು 500 ಲೀಟರ್ ಎಮಲ್ಷನ್ ಒದಗಿಸುವಂತೆ ಸಂಸ್ಥೆಗೆ ಬೇಡಿಕೆ ಸಲ್ಲಿಸಿದರು. ಖಾದಿ ಪ್ರಾಕೃತಿಕ ಪೇಂಟ್ಗೆ ತಾವೇ ಪ್ರಚಾರ ರಾಯಭಾರಿ ಆಗುವುದಾಗಿಯೂ ಸಚಿವ ಗಡ್ಕರಿ ತಿಳಿಸಿದರು.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಜೈಪುರದಲ್ಲಿನ ಘಟಕದ ಕುಮಾರಪ್ಪ ರಾಷ್ಟ್ರೀಯ ಹಸ್ತ ತಯಾರಿಕಾ ಕಾಗದ ಸಂಸ್ಥೆ (ಕೆಎಮ್ಎಚ್ಪಿಐ) ಕ್ಯಾಂಪಸ್ನಲ್ಲಿ ಈ ಹೊಸ ಘಟಕ ಸ್ಥಾಪಿಸಲಾಗಿದೆ. ಈ ಹಿಂದೆ ಪ್ರಾಕೃತಿಕ್ ಪೇಂಟ್ ಕೈಯಿಂದಲೇ ತಯಾರಿಸಲಾಗುತ್ತಿತ್ತು. ಹೊಸ ಉತ್ಪಾದನಾ ಘಟಕ ಸ್ಥಾಪಿಸಿರುವುದರಿಂದ ಉತ್ಪಾದನಾ ಸಾಮರ್ಥ್ಯ ದ್ವಿಗುಣಗೊಳ್ಳಲಿದೆ. ಪ್ರಸ್ತುತ ಪ್ರಾಕೃತಿಕ್ ಪೇಂಟ್ನ ದೈನಂದಿನ ಉತ್ಪಾದನೆ 500 ಲೀಟರ್ ಆಗಿದ್ದು, ಇದನ್ನು ದಿನಕ್ಕೆ 1000 ಲೀಟರ್ಗಳಿಗೆ ಹೆಚ್ಚಿಸಲಾಗುವುದು ಎಂದು ಕೆವಿಐಸಿ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಹೇಳಿದರು.
‘ಕಪಿಲ್ದೇವ್’ ವರ್ಗಾವಣೆ, ‘ಬೌಂಡರಿ’ ಮೀರಿದ ಸಂಭ್ರಮ!; ಖಾಕಿ ಖದರಿಗೆ ಮುದುರಿತಾ ಕೋವಿಡ್ ನಿಯಮ?
ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?
ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?