
ಸೊರಬ: ಕವಿತೆ ರಚನೆಯಲ್ಲಿ ಕವಿಯ ಭಾವ ಹುದುಗಿರುತ್ತದೆ. ಆದರೆ ಭಾವರಹಿತವಾಗಿ ಗಾಯನ ಪ್ರಸ್ತುತಪಡಿಸುವುದು ಕವಿತೆ ರಚನಾಕಾರನಿಗೆ ತೋರುವ ಅಗೌರವ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷೆ ಶಾಂತಾ ಎಸ್. ಶೆಟ್ಟಿ ಹೇಳಿದರು.
ಪಟ್ಟಣದ ಗುರುಕುಲ ಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ತಾಲೂಕು ಘಟಕದಿಂದ ಏರ್ಪಡಿಸಿದ್ದ ಸುಗಮ ಸಂಗೀತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಬದುಕಿಗೆ ಚೈತನ್ಯ ತುಂಬುವ ಶಕ್ತಿ ಸಂಗೀತಕ್ಕಿದೆ. ಸೌಜನ್ಯದಿಂದ ಗಾಯನ ಆಲಿಸುವ ಗುಣ ಕವಿತೆಯ ಭಾವಕ್ಕೆ ತಕ್ಕಂತೆ ಹಾಡುವ ಗಾಯಕನಿಗೆ ನೀಡುವ ಗೌರವವಾಗಿದೆ ಎಂದು ತಿಳಿಸಿದರು.
ಕವಿತೆಗಳನ್ನು ರಚಿಸಿದವರು ಯಾವ ಸನ್ನಿವೇಶದಲ್ಲಿ ರಚಿಸಿದ್ದಾರೆ ಎಂಬುದನ್ನು ಸಹ ಗಾಯಕರು ಅರಿಯಬೇಕು. ವರಕವಿ ದ.ರಾ.ಬೇಂದ್ರೆ ಅವರು ನೀ ಹಿಂಗ ನೋಡಬೇಡ ನನ್ನ ಕವಿತೆಯನ್ನು ದುಃಖದ ಸನ್ನಿವೇಶದಲ್ಲಿ ರಚಿಸಿದರು. ಪ್ರಸ್ತುತ ಯುವಜನತೆ ಪ್ರೇಮಗೀತೆ ಎಂಬಂತೆ ಬಿಂಬಿಸುತ್ತಾರೆ. ಇದು ಕವಿಯ ಭಾವಕ್ಕೆ ಧಕ್ಕೆ ತರುತ್ತದೆ. ಸಂಗೀತಗಾರರಿಗೆ ಭಾಷೆ ಪ್ರಜ್ಞೆ ಇರಬೇಕು. ಉಚ್ಛಾರ ಸ್ಪಷ್ಟತೆ ಇರಬೇಕು ಎಂದರು.
ಸಮಾಜಸೇವಕ ನಾಗರಾಜ ಗುತ್ತಿ ಮಾತನಾಡಿ, ಕಲಿಯುವುದಕ್ಕೆ ವಯಸ್ಸಿನ ಅಡ್ಡಿ ಬರುವುದಿಲ್ಲ. ಆದರೆ ಕಲಿಯುವುದಕ್ಕೆ ಆಸಕ್ತಿ ಮುಖ್ಯ. ಸಕಾರಾತ್ಮಕ ಆಲೋಚನೆ, ಸಾಧಿಸುವ ಗುಣ, ಇಚ್ಛಾಶಕ್ತಿ ಹಾಗೂ ಏಕಾಗ್ರತೆ ಇದ್ದಾಗ ಬದುಕಿಗೆ ಹೊಸ ಮಾರ್ಗ ಸಿಗುತ್ತದೆ. ಜೀವನ ಶೈಲಿಯಲ್ಲೂ ಬದಲಾವಣೆಯಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ತಾಲೂಕು ಅಧ್ಯಕ್ಷ ಗುರುಮೂರ್ತಿ, ಸಂಚಾಲಕಿ ಪೂರ್ಣಿಮಾ ಭಾವೆ, ಸದಸ್ಯರಾದ ಲಕ್ಷ್ಮೀ ಮುರಳೀಧರ್, ಈರಪ್ಪ ಮಾಸ್ತರ್, ವಸಂತ್ ಬಾಂಬೋರೆ, ಲಕ್ಷ್ಮಣ ಮಾಸ್ತರ್, ಗುರುಕುಲ ಸಂಸ್ಥೆ ಕಾರ್ಯದರ್ಶಿ ಸತೀಶ್ ಬೈಂದೂರು, ಪ್ರಮುಖರಾದ ವಿಜಯ ಮೂಡಿ, ಎನ್.ಷಣ್ಮುಖಾಚಾರ್, ಕೆ.ಪಿ.ಶ್ರೀಧರ್ ನೆಮ್ಮದಿ, ತ್ಯಾಗರಾಜ, ಸರಸ್ವತಿ ನಾವುಡ, ರೂಪಾ ಮಧುಕೇಶ್ವರ್, ವಿನಯ, ಪ್ರಶಾಂತ್ ಇತರರಿದ್ದರು.