ಪಾಟನಾ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳ ಗೆಲುವು ಬಿಜೆಪಿಗೆ ಆನೆ ಬಲ ಬಂದಂತಾಗಿರುವುದು ತಿಳಿದ ಸಂಗತಿಯೇ. ಅಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಇಮೇಜ್ ಸಹ ಹೆಚ್ಚಾಗಿದೆ. ಮೋದಿಯವರಿಂದಲೇ ಮೂರು ರಾಜ್ಯ ಗೆಲ್ಲುವಂತಾಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಬಿಜೆಪಿ ವಿರೋಧಿ ಹಾಗೂ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟದ ಭಾಗವಾಗಿರುವ ಜನತಾ ದಳದ (ಯುನೈಟೆಡ್) ಲೋಕಸಭಾ ಸಂಸದ ಸುನೀಲ್ ಕುಮಾರ್ ಪಿಂಟು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. ಇದಾದ ಬಳಿಕ ಬಿಹಾರದಲ್ಲಿ ರಾಜಕೀಯ ಗದ್ದಲ ಭುಗಿಲೆದ್ದಿದ್ದು, ಸ್ವಪಕ್ಷಯರೇ ಅವರ ರಾಜೀನಾಮೆ ಕೇಳುವಂತಾಗಿದೆ.
ಇದನ್ನೂ ಓದಿ: ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ: ನಾಳೆ ಪ್ರಮಾಣ ವಚನ
ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ನಂತರ ಸೀತಾಮರ್ಹಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸುನೀಲ್ ಕುಮಾರ್ ಪಿಂಟು ಅವರು ‘ಮೋದಿ ಹೈ ತೋ ಮುಮ್ಕಿನ್ ಹೈ’ (ಮೋದಿ ಅವರಿಂದ ಮಾತ್ರ ಇಂತಹ ಗೆಲುವು ಸಾಧಿಸುವುದು ಸಾಧ್ಯ). ಮೋದಿ ಅವರ ವರ್ಚಸ್ಸು ಕೇಸರಿ ಪಕ್ಷವು ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸುವಂತಾಯಿತು ಎಂದು ಹಾಡಿಹೊಗಳಿದ್ದರು.
‘ಮೋದಿ ಹೈ ತೋ ಮುಮ್ಕಿನ್ ಹೈ’ ಎಂದು ತೋರಿಸುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ‘ಮೋದಿ ಹೈ ತೋ ಮುಮ್ಕಿನ್ ಹೈ’ ಎಂಬ ಈ ಘೋಷಣೆಯನ್ನು ನೀಡಿತ್ತು. ಇದನ್ನು ಪಿಂಟು, ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಇದು ನಿಜವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.
ತನ್ನದೇ ಪಕ್ಷದ ಸಂಸದರ ಹೇಳಿಕೆಗೆ ಜೆಡಿ(ಯು) ತೀವ್ರ ತಿರುಗೇಟು ನೀಡಿದೆ. ಪಿಂಟು ಅವರು ಪ್ರಧಾನಿ ಮೋದಿಯವರ ಪ್ರಭಾವಕ್ಕೆ ಒಳಗಾಗಿದ್ದರೆ, ಲೋಕಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ಅವರು ಪ್ರಭಾವಿತರಾಗಿದ್ದರೆ ಲೋಕಸಭೆ ಚುನಾವಣೆಗೂ ಮುನ್ನ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು, ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ಬಿಜೆಪಿ ವಕ್ತಾರ ಕುಂಟಲ್ ಕೃಷ್ಣ ಪಿಂಟು ಹೇಳಿಕೆಯನ್ನು ಬೆಂಬಲಿಸಿದ್ದಾರೆ. “ಮೋದಿ ಹೈ ತೋ ಮುಮ್ಕಿನ್ ಹೈ” ಎಂದು ಜೆಡಿಯು ಸಂಸದರು ನೀಡಿರುವ ಹೇಳಿಕೆಯು ಪ್ರಸ್ತುತ (ಲೋಕಸಭಾ ಚುನಾವಣೆಯ ಮೊದಲು) ಪರಿಸ್ಥಿತಿ ಏನೆಂದು ಪ್ರತಿಯೊಬ್ಬ ವ್ಯಕ್ತಿಗೂ ಅರ್ಥವಾಗಿದೆ ಎಂದು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಜೆಡಿಯು ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡು ಎನ್ಡಿಎಯಿಂದ ಹೊರನಡೆದಿತ್ತು. ಬಿಜೆಪಿ ಮಿತ್ರ ಪಕ್ಷವಾಗಿದ್ದ ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರು ತರುವಾಯ ‘ಮಹಾಘಟಬಂಧನ್’ (ಮಹಾಮೈತ್ರಿಕೂಟ) ದ ಘಟಕಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ನೊಂದಿಗೆ ಕೈಜೋಡಿಸಿ ಮತ್ತೆ ಮುಖ್ಯಮಂತ್ರಿಯಾದರು.