ದಾವಣಗೆರೆ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಅದೇ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಕಾಣಿಸದಿದ್ದರೂ ಇಂದು ನಿರೀಕ್ಷಣಾ ಜಾಮೀನು ಸಿಗುತ್ತಿದ್ದಂತೆ ತಮ್ಮ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಈ ಮಧ್ಯೆ ಅವರ ಹುಡುಕಾಟಕ್ಕಾಗಿ ಭಾರಿ ಶೋಧ ನಡೆದಿದ್ದು, ಅವರು ತಲೆಮರೆಸಿಕೊಂಡಿದ್ದರು ಎನ್ನಲಾಗಿತ್ತು. ಆದರೆ “ನಾನು ಎಲ್ಲೂ ಹೋಗಿಲ್ಲ, ಮನೆಯಲ್ಲೇ ಇದ್ದೆ” ಎಂಬುದಾಗಿ ಶಾಸಕರು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ನಾನು ತಲೆಮರೆಸಿಕೊಂಡಿದ್ದೆ ಎಂದು ಮಾಧ್ಯಮದಲ್ಲೆಲ್ಲ ಸುದ್ದಿಯಾಗಿತ್ತು. ಆದರೆ, ನಾನು ಎಲ್ಲೂ ಹೋಗಿರಲಿಲ್ಲ, ಮನೆಯಲ್ಲೇ ಇದ್ದೆ. ಒಬ್ಬೊಬ್ಬರು ಒಂದೊಂದು ಪ್ರಶ್ನೆ ಕೇಳುತ್ತಾರೆ, ಉತ್ತರ ಕೊಡಲು ಆಗಲ್ಲ ಅಂತ ಮೊಬೈಲ್ಫೋನ್ ಸ್ವಿಚ್ಡ್ ಆಫ್ ಮಾಡಿಟ್ಟುಕೊಂಡಿದ್ದೆ ಎಂಬುದಾಗಿ ಶಾಸಕ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕುಸಿದು ಬಿದ್ದು ಸಾವಿಗೀಡಾದ ಕ್ರಿಕೆಟಿಗ; ಫಲಿಸಲಿಲ್ಲ ಜೀವ ಉಳಿಸಿಕೊಳ್ಳುವ ಪ್ರಯತ್ನ
ನನ್ನ ಮೇಲೆ ಆರೋಪ ಬಂದ ಬಳಿಕ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದ ಕ್ರಮ ಸರಿಯಾಗಿಯೇ ಇದೆ. ದೊಡ್ಡ ಪಕ್ಷವಾದ ಬಿಜೆಪಿಗೆ ಕಳಂಕ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಹಾಗೆ ಮಾಡಿದ್ದಾರೆ. ನಾನು ದೋಷಮುಕ್ತ ಆದ ಮೇಲೆ ಮತ್ತೆ ಸದಸ್ಯತ್ವ ಪಡೆಯುವೆ, ಅದರಲ್ಲಿ ತಪ್ಪೇನಿದೆ? ಎಂದೂ ಶಾಸಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ
ಬಿಜೆಪಿ ನನಗೆ ತಾಯಿ ಇದ್ದ ಹಾಗೆ. ಎರಡು ಸಲ ಶಾಸಕನನ್ನಾಗಿಸಿದೆ. ಮೋದಿ ಮತ್ತೆ ಪಿಎಂ, ಬೊಮ್ಮಾಯಿ ಮತ್ತೆ ಸಿಎಂ ಆಗಬೇಕಾದ್ದರಿಂದ ಪಕ್ಷ ಕೈಗೊಂಡ ಕ್ರಮ ಸರಿಯಾಗಿಯೇ ಇದೆ. ಮುಂದೆ ನಾನು ಮತ್ತೆ ಸದಸ್ಯತ್ವ ಪಡೆಯುವೆ ಎಂಬುದಾಗಿ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.