ಭೋಪಾಲ್: 10ನೇ ತರಗತಿ ಪರೀಕ್ಷೆ ಮುಗಿಸಿ ಪ್ರವಾಸಕ್ಕೆ ತೆರಳಿದ್ದ 17 ವರ್ಷದ ಬಾಲಕಿಯನ್ನು ಅಪಹರಿಸಿ ಮಾರಾಟ ಮಾಡಿರುವ ಘಟನೆ ಮಧ್ಯಪ್ರದೇಶದ ಕೋಟಾದಲ್ಲಿ ನಡೆದಿದೆ.
ಸದ್ಯ ಬಾಲಕಿಯನ್ನು ರಕ್ಷಿಸಿರುವ ಮಕ್ಕಳ ಕಲ್ಯಾಣ ಸಮಿತಿ(CWC) ಸದಸ್ಯರು ಆಕೆಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದಾರೆ.
ಪುಸಲಾಯಿಸಿ ಕೃತ್ಯ
ಸಂತ್ರಸ್ತ ಬಾಲಕಿ ಐದು ತಿಂಗಳ ಹಿಂದೆ 10ನೇ ತರಗತಿ ಪರೀಕ್ಷೆಯನ್ನು ಮುಗಿಸಿ ಏಕಾಂಗಿಯಾಗಿ ಪ್ರವಾಸ ತೆರಳಲು ಮುಂದಾದಾಗ ಆಕೆಗೆ ಕಟ್ನಿ ರೈಲ್ವೇ ನಿಲ್ದಾಣದಲ್ಲಿ ಕೆಲ ಯುವಕರು ಪರಿಚಯವಾಗಿದ್ದಾರೆ.
ನಂತರ ಆಕೆಯನ್ನು ಪುಸಲಾಯಿಸಿ ಹತ್ತಿರದ ಪಾರ್ಕ್ ಒಂದಕ್ಕೆ ಕರೆದುಕೊಂಡು ಹೋಗಿ ಜ್ಯೂಸಿನಲ್ಲಿ ಮತ್ತು ಬರುವ ಔಷಧಿ ಹಾಕಿ ಕುಡಿಸಿದ್ದಾರೆ. ನಂತರ ಪ್ರಜ್ಞಾಹೀನಳಾಗಿದ್ದ ಬಾಲಕಿ ಎಚ್ಚರಗೊಂಡಾಗ ಉಜ್ಜಯಿನಿಯ ರೂಂ ಒಂದರಲ್ಲಿ ಆಕೆ ಜೊತೆ ಮಹಿಳೆ ಹಾಗೂ ಇಬ್ಬರು ಪುರುಷರು ಇದ್ದರು ಎಂದು ತಿಳಿಸಿದ್ದಾಳೆ.
ಇದನ್ನೂ ಓದಿ: ಬಿಲ್ಕಿಸ್ ಬಾನೊ ಪ್ರಕರಣ; ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸುವುದಾಗಿ ತಿಳಿಸಿದ ಗುಜರಾತ್-ಕೇಂದ್ರ ಸರ್ಕಾರ
ಮದುವೆ ಹೆಸರಲ್ಲಿ ಮಾರಾಟ
ಮಹಿಳೆ ಹಾಗೂ ಇಬ್ಬರು ಪುರುಷರು ನನ್ನನ್ನು ಬೆದರಿಸಿ 27 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆಯ ನಂತರ ವ್ಯಕ್ತಿಯೂ ನನ್ನನ್ನು ಎರಡು ಲಕ್ಷ ರೂಪಾಯಿಗೆ ಖರೀದಿಸಿದಾಗಿ ತಿಳಿಸಿದ್ದಾರೆ.
ಮದುವೆಯಾದ ನಾಲ್ಕು ತಿಮಗಳ ನಂತರ ಬಾಲಕಿಯ ಮೊದಲ ಪತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಕುಟುಂಬಸ್ಥರು ಎರಡನೇ ಮದುವೆ ನೆಪದಲ್ಲಿ ಸಂತ್ರಸ್ತೆಯನ್ನು ಮೂರು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಆತ್ಮಹತ್ಯೆಗೆ ಯತ್ನ
ತನ್ನ ಎರಡನೇ ಆಕೆಯನ್ನು ಮೂರು ಲಕ್ಷ ರೂಪಾಯಿಗೆ ಖರೀದಿಸಿದಾನೆಂಬ ವಿಚಾರ ತಿಳಿದ ಬಾಲಕಿ ಅತ್ತೆ ಮನೆಯಲ್ಲಿ ಕೊಡುತ್ತಿದ್ದ ಕಾಟವನ್ನು ಸಹಿಸಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅದು ಸಾಧ್ಯವಾಗದಿದ್ದಾಗ ಆಕೆ ಮನೆ ಬಿಟ್ಟು ಓಡಿ ಬಂದಿದ್ದಾಳೆ.
ಹತ್ತಿರದ ರೈಲ್ವೇ ಸ್ಟೇಷನ್ ತಲುಪಿದ ಬಾಲಕಿ ನಂತರ ರೈಲಿನ ಮೂಲಕ ಕೋಟಾಗೆ ಬಂದು ಇಳಿದಿದ್ದಾಳೆ. ಆಕೆಯ ಸ್ಥಿತಿಯನ್ನು ಗಮನಿಸಿದ ರೈಲ್ವೇ ಪೊಲೀಸರು ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರ ಬಳಿ ಬಾಲಕಿ ನಡೆದಿದ್ದಲ್ಲ ಹೇಳಿಕೊಂಡಿದ್ದಾಳೆ ಮತ್ತು ಆಕೆಯನ್ನು ತಕ್ಷಣ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಿಗೆ ಒಪ್ಪಿಸಿ ಚಿಕಿತ್ಸೆ ಕೊಡಿಸುವಂತೆ ವಿನಂತಿಸಿದ್ದಾರೆ.
ಬೇಜವಾಬ್ದಾರಿ
ಇನ್ನು ಬಾಲಕಿ ದೊರೆತ್ತಿರುವ ಬಗ್ಗೆ ಪೊಲೀಸರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದು ಈ ಬಗ್ಗೆ ಈಗಾಗಲೇ ನಾವು ಬಾಲಕಿ ಕಾಣೆಯಾದ ದಿನದಿಂದ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಕಾಣೆಯಾಗಿ ಐದು ತಿಂಗಳಾದರೂ ಪೊಲೀಸರು ಬಾಲಕಿಗಾಗಿ ಹುಡುಕಾಟ ನಡೆಸದಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮಕ್ಕಳ ಕಲ್ಯಾಣ ಸಮಿತಿ(CWC) ಅಧ್ಯಕ್ಷೆ ಕನೀಜ್ ಫಾತಿಮಾ ಬಾಲಕಿಯ ಸ್ಥಿತಗೆ ಕಾರಣವಾದವರನ್ನು ಸುಲಭವಾಗಿ ಬಿಡುವ ಮಾತಿಲ್ಲ ಎಂದು ಎಚ್ಚರಿಸಿದ್ದಾರೆ.