ಗಂಗೊಳ್ಳಿ: ಮೇಲ್ಗಂಗೊಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲದ 38ನೇ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲದ 32ನೇ ವಾರ್ಷಿಕೋತ್ಸವ ಸಮಾರಂಭ ಡಾ.ಅಂಬೇಡ್ಕರ್ ಸಭಾಭವನ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಆದರ್ಶ ಆಸ್ಪತ್ರೆ ಮೆಡಿಕಲ್ ಡೈರೆಕ್ಟರ್ ಡಾ.ಆದರ್ಶ ಹೆಬ್ಬಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕೆ.ವಿನಾಯಕ ಪೈ ಶುಭ ಹಾರೈಸಿದರು. ಉಡುಪಿ ನಗರ ಠಾಣೆ ಸಹಾಯಕ ಪೊಲೀಸ್ ಉಪನಿರೀಕ್ಷಕ ಜಯಕರ್ ಐರೋಡಿ, ಅಂಬೇಡ್ಕರ್ ಚಿಂತನೆಗಳ ಕುರಿತು ಮಾತನಾಡಿದರು.
ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿ ಶೇಷು ಪಿ., ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಜು ಎನ್.ಮಾಸ್ತರ್ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಹಿಮೇಶ್ ಅವರನ್ನು ಸನ್ಮಾನಿಸಲಾಯಿತು. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದ ನೇಹಾ ಎಸ್.ಕೊಡೇರಿ ಅವರಿಗೆ ದಾನಿಗಳು ನೀಡಿದ 5000 ರೂ. ನಗದು ಬಹುಮಾನ ವಿತರಿಸಲಾಯಿತು. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಗದು ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಯುವತಿ ಮಂಡಲ ಅಧ್ಯಕ್ಷೆ ಸಹನಾ ಕೆ. ಮತ್ತು ಮಹಿಳಾ ಮಂಡಲ ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು.
ಯುವಕ ಮಂಡಲ ಅಧ್ಯಕ್ಷ ನಾಗೇಶ ಸ್ವಾಗತಿಸಿದರು. ಗೌರವಾಧ್ಯಕ್ಷ ಭಾಸ್ಕರ ಎಚ್.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವತಿ ಮಂಡಲ ಕಾರ್ಯದರ್ಶಿ ಸರಸ್ವತಿ ವರದಿ ವಾಚಿಸಿದರು. ರಿತೇಶ ಮತ್ತು ಸುಲೋಚನಾ ಬಹುಮಾನ ವಿಜೇತರ ಪಟ್ಟಿ ಓದಿದರು. ಯುವಕ ಮಂಡಲ ಕಾರ್ಯದರ್ಶಿ ರಂಜಿತಾ ವಂದಿಸಿದರು.