ವಿಜಯವಾಣಿ ಸುದ್ದಿಜಾಲ ಕಾರ್ಕಳ

ಪ್ರತಿ ನಿತ್ಯ ಕಾಲೇಜಿಗೆ ವಿದ್ಯಾರ್ಥಿಗಳು ಖಾಸಗಿ ಬಸ್ ಬಾಗಿಲಲ್ಲಿ ನಿಂತು ನೇತಾಡಿ ಬರುತ್ತಿರುವುದು ಅಪಾಯಕಾರಿಯಾಗಿದ್ದು, ಈಗಾಗಲೇ ಓರ್ವ ವಿದ್ಯಾರ್ಥಿ ಬಸ್ನಿಂದ ಬಿದ್ದು ಜೀವ ಕಳೆದುಕೊಂಡಿದ್ದಾನೆ. ಇನ್ನು ಇಂತಹ ಅವಘಡ ನಡೆಯದಂತೆ ಈ ಭಾಗದಲ್ಲಿ ಹೆಚ್ಚುವರಿ ಬಸ್ ಓಡಾಟ ನಡೆಸುವಂತೆ ಮತ್ತು ಮೃತ ವಿದ್ಯಾರ್ಥಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳು ಗುರುವಾರ ನಿಟ್ಟೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮಂಗಳೂರು, ಪಡುಬಿದ್ರಿ, ಬೆಳ್ಮಣ್ ಹಾಗೂ ಕಾರ್ಕಳದ ಭಾಗಗಳಿಂದ ನಿಟ್ಟೆ ವಿದ್ಯಾಸಂಸ್ಥೆಗೆ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಬರುತ್ತಿದ್ದು, ಸರಿಯಾದ ವೇಳೆಗೆ ಬಸ್ಗಳಿಲ್ಲದೆ ತರಗತಿಗಳಿಗೆ ಹಾಜರಾಗುವ ಉದ್ದೇಶದಿಂದ ಖಾಸಗಿ ಬಸ್ ಬಾಗಿಲ ಬಳಿ ನಿಂತು ನೇತಾಡಿಕೊಂಡು ಬರುವ ಸ್ಥಿತಿ ನಿರಂತರವಾಗಿದೆ. ಖಾಸಗಿ ಬಸ್ ಮಿತಿ ಮೀರಿ ಪ್ರಯಾಣಿಕರನ್ನು ತುಂಬಿಸಿ ಸಾಗುತ್ತಿದ್ದು ಈ ನಿರ್ಲಕ್ಷೃ ಇಲ್ಲಿಗೆ ನಿಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಆಗ್ರಹ
ವಿದ್ಯಾರ್ಥಿಗಳಿಗೆ ಈ ಹಿಂದೆ ಕಾಲೇಜು ಬಸ್ಗಳಲ್ಲಿ ಓಡಾಟಕ್ಕೆ ಕಲ್ಪಿಸಲಾದ ಪಾಸ್ ವ್ಯವಸ್ಥೆ ಆಡಳಿತ ಮಂಡಳಿ ರದ್ದುಗೊಳಿಸಿದ್ದು, ಮತ್ತೆ ಪಾಸ್ ವ್ಯವಸ್ಥೆ ಕಲ್ಪಿಸಿ ಹೆಚ್ಚುವರಿ ಕಾಲೇಜು ಬಸ್ ವ್ಯವಸ್ಥೆ ಮಾಡಬೇಕು. ಬಸ್ ಸಿಗದೆ ತಡವಾಗಿ ಬರುವ ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸಿ ಹಾಜರಾತಿ ನೀಡಬೇಕು. ಪರ್ಮಿಟ್ಗಳಿರುವ ಹೆಚ್ಚುವರಿ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್ಗಳನ್ನು ಕಾಲೇಜು ಸಮಯದಲ್ಲಿ ಓಡಾಡುವಂತೆ ಕ್ರಮ ಕೈಗೊಳ್ಳಬೇಕು. ಮೃತ ವಿದ್ಯಾರ್ಥಿ ಜನಿತ್ ಶೆಟ್ಟಿಗೆ ಕಾಲೇಜು ಫೀಸ್ ವಾಪಸ್ ನೀಡುವುದರ ಜತೆ ಹೆಚ್ಚುವರಿ ಪರಿಹಾರ ಮೊತ್ತ ನೀಡಬೇಕು ಹಾಗೂ ಘಟನೆ ನಡೆದ ಬಸ್ ಮಾಲೀಕರು ಪರಿಹಾರ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಕಾರ್ಕಳ ಪೊಲೀಸರು ಬಂದು ಸಮಾಧಾನಪಡಿಸುವ ಪ್ರಯತ್ನ ಮಾಡಿದರೂ ಪಟ್ಟುಬಿಡದ ಪ್ರತಿಭಟನಾಕಾರರು ಬಳಿಕ ಕಾರ್ಕಳ ತಹಸೀಲ್ದಾರ್ ಭೇಟಿ ನೀಡಿ ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟು ತರಗತಿಗೆ ಹಾಜರಾದರು. ಎಬಿವಿಪಿಯ ವಿಭಾಗ ಸಂಚಾಲಕ ಗಣೇಶ್ ಪೂಜಾರಿ, ಉಡುಪಿ ತಾಲೂಕು ಸಂಚಾಲಕ ಶ್ರೇಯಸ್ ಅಂಚನ್, ತಾಲೂಕು ಸಂಚಾಲಕ ಪವನ್ ಕುಲಾಲ್, ಕಾರ್ಯಕರ್ತರಾದ ಮನುಶೆಟ್ಟಿ, ಭಾವನ, ಶಿವಂ, ಮನೋಜ್, ಹೃಷಿತ್, ಮನೀಷ್, ಧನುಷ್, ಹೃತ್ವಿಕ್ ಹಾಗೂ ಸದಸ್ಯರು ಮತ್ತು ಎನ್.ಎಸ್.ಯು.ಐ ಸದಸ್ಯರು ಉಪಸ್ಥಿತರಿದ್ದರು.
ಸಾವಿರರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ನಿರತರಾದ ಸಂದರ್ಭ ಓರ್ವ ವಿದ್ಯಾರ್ಥಿ ಒಂದು ಕೈಯಲ್ಲಿ ಆಡು ಮರಿ ಎತ್ತಿಕೊಂಡು ಮತ್ತೊಂದು ಕೈಯಲ್ಲಿ ವಿ ವಾಂಟ್ ಜಸ್ಟೀಸ್ ಬೋರ್ಡ್ ಹಿಡಿದು ವಿದ್ಯಾರ್ಥಿಗಳು ಆಡು, ಕುರಿ ಮರಿಗಳಲ್ಲ. ನಿತ್ಯ ಬಸ್ನಲ್ಲಿ ಕುರಿಗಳನ್ನು ತುಂಬಿಸಿದಂತೆ ತುಂಬಿ ಸಾಗುತ್ತಿದ್ದು ಇನ್ನೆಷ್ಟು ಬಲಿ ಬೀಳಬೇಕು. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವಿಶೇಷ ರೀತಿಯಲ್ಲಿ ಪ್ರತಿಭಟಿಸಿದರು.
ವಿದ್ಯಾರ್ಥಿ ಸಾವನ್ನಪ್ಪಿರುವ ಬಗ್ಗೆ ನಮಗೂ ಬೇಸರವಿದೆ. ಈ ರೀತಿ ಘಟನೆ ಮತ್ತೆ ಮರುಕಳಿಸಬಾರದು. ಬಸ್ ಸಿಬ್ಬಂದಿ ನಿರ್ಲಕ್ಷೃವಾಗಿದ್ದರೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಸಾರಿಗೆ ಅಧಿಕಾರಗಳ ಜತೆ ಮಾತುಕತೆ ನಡೆಸಿ ಸರ್ಕಾರಿ ಬಸ್ ಹಾಕಲು ಪ್ರಯತ್ನ ಪಡುತ್ತೇವೆ. ಖಾಸಗಿ ಬಸ್ ಮಾಲೀಕರ ಜತೆ ಸಭೆ ನಡೆಸಿ ಹೆಚ್ಚುವರಿ ಬಸ್ ಓಡಾಟ ನಡೆಸುವಂತೆ ಸೂಚಿಸುತ್ತೇನೆ.
-ಪ್ರತಿಭಾ ಆರ್.ಕಾರ್ಕಳ ತಹಸೀಲ್ದಾರ್