ಮುಂಬೈ: ಅಗ್ಗದ ದರದಲ್ಲಿ ಚಿನ್ನವನ್ನು ಕೊಳ್ಳುವ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು ಒಂದು ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆ ನವಿ ಮುಂಬೈನಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಸಂತ್ರಸ್ತ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಬಂಧಿತರನ್ನು ನೀರಜ್ ಖಂಡಗಾಲೆ ಮತ್ತು ನೀತು ಕದಂ ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಂಧಿತ ಆರೋಪಿಗಳಿಬ್ಬರು ನವಿ ಮುಂಬೈ ಮೂಲದ ವ್ಯಕ್ತಿಗೆ ಗೋವಾದಲ್ಲಿ ಚಿನ್ನದ ಮಡಕೆ ಒಂದು ಪತ್ತೆಯಾಗಿದ್ದು, ಅದರಲ್ಲಿರುವ ನಾಣ್ಯಗಳು ಹಾಗೂ ಬೆಲೆಬಾಳುವ ವಸ್ತುಗಳು ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಬಳಿಕ ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಬಳಿಕ ಪರಮೇಶ್ವರ್ ಸಿಎಂ; ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಕೆ.ಎನ್. ರಾಜಣ್ಣ
ಆರೋಪಿಗಳ ಮಾತಿಗೆ ಮರುಳಾಗಿ ಅಗ್ಗದ ದರದಲ್ಲಿ ಚಿನ್ನ ಖರೀದಿಸುವ ಆಸೆಗೆ ಬಿದ್ದ ಸಂತ್ರಸ್ತರು ಮಾರ್ಚ್ 2022ರಿಂದ ಜುಲೈ 2023ರವರೆಗೆ ಕಂತಿನ ರೂಪದಲ್ಲಿ 1.05 ಕೋಟಿ ರೂಪಾಯಿ ಹಣವನ್ನು ಪಾವತಿಸಿದ್ದಾರೆ. ಆದರೆ, ಆರೋಪಿಗಳು ಚಿನ್ನವನ್ನು ಕೊಡದೆ ವಂಚಿಸಲು ಯತ್ನಿಸಿದ್ದಾರೆ. ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಭಾರತ ದಂಡ ಸಂಹಿತೆ (IPC Section) 420ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ. ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.