ಗಂಗೊಳ್ಳಿ: ಗಂಗೊಳ್ಳಿ ಹಾಗೂ ಸುತ್ತಮುತ್ತ ಮಹಾಶಿವರಾತ್ರಿ ಮಹೋತ್ಸವವನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಗುಜ್ಜಾಡಿಯ ವಿಶಿಷ್ಟ ಗುಹಾಂತರ ಶ್ರೀ ಗುಹೇಶ್ವರ ದೇವಾಲಯದಲ್ಲಿ ಈ ವರ್ಷವೂ ಜನರಿಗೆ ಗುಹೆ ಪ್ರವೇಶಿಸಿ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿಲ್ಲ.
ಗಣಪತಿ ಹೋಮ, ಕೊಡಪಾಡಿ ಶ್ರೀ ಗುಹೇಶ್ವರ ಭಜನಾ ಮಂಡಳಿ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಗವದ್ಗೀತಾ ಹಾಗೂ ವಿಷ್ಣು ಸಹಸ್ರನಾಮ ಪಠಣ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ಜರುಗಿತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ದೇವಸ್ಥಾನ ಅಭಿವೃದ್ಧಿ ಸಮಿತಿ, ಸ್ಥಳೀಯ ಸವ್ಯಸಾಚಿ ಯುವಕ ಮಂಡಲ, ಭಾರತ್ ಸಂಘ, ತಾಯಿ ಮಾರಿಕಾಂಬಾ ಮಹಿಳಾ ಮಂಡಳಿ, ಗುಹೇಶ್ವರ ಯಕ್ಷಗಾನ ಸಂಘ ಸದಸ್ಯರು ಸಹಕರಿಸಿದರು.
ಮಾರಸ್ವಾಮಿಯಲ್ಲಿನ ಗಂಗಾಧರೇಶ್ವರ ದೇವಸ್ಥಾನ, ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನ, ಶ್ರೀ ಇಂದುಧರ ದೇವಸ್ಥಾನ, ಮೇಲ್ಗಂಗೊಳ್ಳಿಯ ಶ್ರೀ ಬಸವೇಶ್ವರ ದೇವಸ್ಥಾನ, ಗುಜ್ಜಾಡಿ ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನ, ಮೊವಾಡಿ ಗ್ರಾಮದ ಶ್ರೀ ಮಾಣಿಸಿದ್ಧಲಿಂಗೇಶ್ವರ ದೇವಸ್ಥಾನ, ಶ್ರೀ ಮಾಣಿಕೊಳಲು ದೇವಸ್ಥಾನ ಸೇರಿದಂತೆ ಅನೇಕ ಶಿವನ ದೇವಾಲಯಗಳಿಗೆ ಜನರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.