ಬೆಂಗಳೂರು: ಈ ಮಹಿಳೆ ‘ಮನೆ ಬಿಟ್ಟು ಹೋಗುತ್ತಿದ್ದೇನೆ. ಇನ್ನು ಯಾರ ಕೈಗೂ ಸಿಗವುದಿಲ್ಲ’ ಎಂದು ಪತ್ರದಲ್ಲಿ ಬರೆದು ಮನೆ ಬಿಟ್ಟು ಓಡಿ ಹೋಗಿದ್ದರು. ಈ ಘಟನೆ ನಿನ್ನೆ (ಫೆ.18) ನಡೆದಿದ್ದು ಇಂದು ಬೆಳಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಮನೆ ಬಿಟ್ಟು ಹೋಗಿದ್ದ ಮಹಿಳೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇತ್ತೀಚೆಗೆ ಅವರ ಪತಿ ತೀರಿದ್ದರಿಂದ 56 ವರ್ಷ ವಯಸ್ಸಿನ ತಾರಾ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಪತಿಯ ಸಾವಿನಿಂದ ಮನನೊಂದ ಮಹಿಳೆ, ನಿನ್ನೆ ಮನೆ ಬಿಟ್ಟು ಹೋಗಿದ್ದರು. ಮನೆ ಬಿಟ್ಟು ಹೋಗುವಾಗ ಇನ್ಮೇಲೆ ಯಾರಿಗೂ ಸಿಗುವುದಿಲ್ಲ ಎಂದು ಪತ್ರ ಬರೆದು ಹೋಗಿದ್ದರು.
ಈ ಬಗ್ಗೆ ಭಯಗೊಂಡು ಕೋಣನಕುಂಟೆ ಠಾಣೆಗೆ ಕುಟುಂಬಸ್ಥ ಭರತ್ ದೂರು ನೀಡಿದ್ದ. ದೂರು ಬಂದ ಕೆಲ ಗಂಟೆಗಳಲ್ಲೇ ಕೋಣನಕುಂಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ತಾರಾರನ್ನು ಹುಡುಕಿ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಭರತ್, ಕೋಣನಕುಂಟೆ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.