ಮಂಡ್ಯ: ಲೋಕಸಭಾ ಚುನಾವಣೆಯ ಪ್ರಮುಖ ಅಭ್ಯರ್ಥಿಗಳಿಗೆ ತಮಗೆ ತಾವು ಮತ ಹಾಕುವ ಹಕ್ಕು ಹೊಂದಿರಲಿಲ್ಲ.
ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರ ಮತದಾನ ಹಕ್ಕನ್ನು ರಾಮನಗರ ಜಿಲ್ಲೆ ಕೇತಗಾನಹಳ್ಳಿಯಲ್ಲಿ ಹೊಂದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ಬೆಂಗಳೂರಿನ ಮಹಾಲಕ್ಷ್ಮೀಪುರಂನಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಅಭ್ಯರ್ಥಿಗಳು ತಲಾ ಒಂದೊಂದು ಮತದಿಂದ ವಂಚಿತರಾದರು.
ಆದಾಗ್ಯೂ ಇಬ್ಬರು ಬೆಳಗ್ಗೆಯೇ ತಮ್ಮ ಮತವನ್ನು ಚಲಾಯಿಸಿ ಕ್ಷೇತ್ರಕ್ಕೆ ಆಗಮಿಸಿದರು. ಮಾತ್ರವಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರವಾಸ ಮಾಡಿ ಮತದಾನವನ್ನು ಪರಿಶೀಲಿಸಿದರು. ಜತೆಗೆ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಮಾಜಿ ಸಂಸದೆ ರಮ್ಯಾ ಗೈರು: ಮಾಜಿ ಸಂಸದೆ ರಮ್ಯಾ ಈ ಬಾರಿಯೂ ಮತದಾನದಿಂದ ದೂರ ಉಳಿಯುವ ಮೂಲಕ ತಮ್ಮ ಕರ್ತವ್ಯವನ್ನು ಮರೆತರು. ಮಂಡ್ಯ ವಿದ್ಯಾನಗರ ಮತಗಟ್ಟೆ ವ್ಯಾಪ್ತಿಯಲ್ಲಿ ರಮ್ಯಾ ಮತದಾನದ ಹಕ್ಕನ್ನು ಹೊಂದಿದ್ದಾರೆ. ಆದರೆ 2018ರಿಂದ ಈವರೆಗೆ ಒಂದೂ ಚುನಾವಣೆಯಲ್ಲಿಯೂ ರಮ್ಯಾ ಮತದಾನ ಮಾಡಿಲ್ಲ.