ಮಂಡ್ಯ: ದಾಖಲೆಯ ತಾಪಮಾನದಿಂದಾಗಿ ಕಂಗಲಾಗಿದ್ದ ಜಿಲ್ಲೆಯ ಜನರಿಗೆ ಶುಕ್ರವಾರ ಸುರಿದ ಗುಡುಗು ಸಹಿತ ಜೋರು ಮಳೆ ತಂಪೆರೆಯಿತು. ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಮತ್ತು ಬಿರುಗಾಳಿ ಸಹಿತ ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆಯಾಗಿದೆ.
ಕೆಲವೆಡೆ ಆಲಿಕಲ್ಲು ಕೂಡ ಬಿದ್ದಿವೆ. ಇತ್ತ ಬಿರುಗಾಳಿಯಿಂದಾಗಿ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಆದರೆ ಜಿಲ್ಲಾದ್ಯಂತ ಸಾವಿರಾರೂ ಬಾಳೆ ಗಿಡ ನೆಲಕಚ್ಚಿವೆ. ಹಲವು ಮನೆಗಳ ಮೇಲ್ಛಾವಣಿಗೆ ಅಳವಡಿಸಿದ್ದ ಕಬ್ಬಿಣದ ಶೀಟ್ಗಳು ತೂರಿ ಹೋಗಿವೆ. ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಬಿರುಬಿಸಿಲಿನ ವಾತಾವರಣವಿತ್ತು. ಸಂಜೆ 4 ಗಂಟೆ ವೇಳೆಗೆ ಇದ್ದಕ್ಕಿದ್ದಂತೆಯೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ 4.15ಕ್ಕೆ ಮಳೆ ಶುರುವಾಯಿತು. ಸಂಜೆ 5 ಗಂಟೆವರೆಗೆ ಸುಮಾರು 45 ನಿಮಿಷ ಮಂಡ್ಯ ನಗರದಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಜೋರು ಮಳೆಯಾಯಿತು.
ಮಂಡ್ಯದ ದ್ವಾರಕನಗರ, ಕಾವೇರಿನಗರ ಸೇರಿದಂತೆ ಹಲವೆಡೆ ಮಳೆಯೊಂದಿಗೆ ಆಲಿಕಲ್ಲುಗಳು ಕೂಡ ಬಿದ್ದಿವೆ. ದಿಢೀರನೆ ಸುರಿದ ಮಳೆಯೊಂದಿಗೆ ಬಿದ್ದ ಆಲಿಕಲ್ಲುಗಳು ಜನರ ಸಂಭ್ರಮವನ್ನು ಇಮ್ಮಡಿಗೊಳಿಸಿದವು. ಹಲವರು ಆಲಿಕಲ್ಲುಗಳನ್ನು ಆಯ್ದುಕೊಂಡು ಕೈಯ ಬೊಗಸೆಯಲ್ಲಿ ಹಿಡಿದುಕೊಂಡು ಖುಷಿಯ ಕ್ಷಣಗಳನ್ನು ಅನುಭವಿಸಿದವು. ನಗರದ ಹೊರವಲಯದ ಮಾಂಡವ್ಯ ಕಾಲೇಜು ಎದುರು ಬೆಂಗಳೂರು-ಮೈಸೂರು ಹೆದ್ದಾರಿಯ ಹಳೆಯ ರಸ್ತೆಯ ಪಕ್ಕದಲ್ಲಿ ಅಳವಡಿಸಿದ್ದ ಬೃಹತ್ ಜಾಹೀರಾತು ಫಲಕವು ಕಂಬದ ಮೇಲೆ ವಿದ್ಯುತ್ಲೈನ್ ಮೇಲೆ ಮುರಿದುಬಿದ್ದಿತ್ತು.
ಮಂಡ್ಯದ ವಿವೇಕಾನಂದ ಜೋಡಿ ರಸ್ತೆಯ ಖಾಸಗಿ ಹೋಟೆಲ್ನ ಮುಂಭಾಗ ಮರದ ಕೊಂಬೆ ಮುರಿದು ಬಿದ್ದಿದೆ. ಆದರೆ, ಮಳೆಯಿಂದಾಗಿ ಜನರು ಹೋಟೆಲ್ ಹೊರಗೆ ನಿಲ್ಲದೆ ಒಳಗಿದ್ದರಿಂದ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಆದರೆ, ಅಲ್ಲಿ ನಿಂತಿದ್ದ ಕೆಲವು ಬೈಕ್ಗಳು ಹಾನಿಗೊಳಗಾಗಿವೆ. ನಗರದ ಬೀಡಿ ಕಾರ್ಮಿಕರ ಕಾಲನಿಯಲ್ಲಿ 5 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಕೆಲವು ಮನೆಗಳ ಮೇಲೆಯೇ ಮುರಿದು ಬಿದ್ದಿದ್ದರಿಂದ ಮನೆಗಳಿಗೂ ಹಾನಿಯಾಗಿದೆ. ವಿದ್ಯುತ್ ತಂತಿಗಳು ಮನೆಯ ಆರ್ಸಿಸಿ ಮೇಲೆಯೇ ಕಡಿದು ಬಿದ್ದಿದ್ದು, ಮಳೆ ನಿಂತ ಬಳಿಕ ಸೆಸ್ಕ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಂಬ ಮತ್ತು ವಿದ್ಯುತ್ ಲೈನ್ಗಳನ್ನು ತೆರವುಗೊಳಿಸಿದರು.
ಬೀಡಿ ಕಾರ್ಮಿಕರ ಕಾಲನಿಯೊಂದರ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಕಬ್ಬಿಣದ ತಗಡು ಶೀಟ್ವೊಂದು ಸುಮಾರು 150ರಿಂದ 200ಮೀಟರ್ ದೂರದವರೆಗೆ ತೂರಿಕೊಂಡು ಹೋಗಿ ಮೂರು ಕ್ರಾಸ್ನ ರಸ್ತೆಯೊಂದರ ಮನೆಗೆ ಬಡಿದಿದೆ. ಇದರಿಂದ ಮನೆಯ ಗೋಡೆಗೂ ಹಾನಿಯಾಗಿದೆ. ಮಳೆ ಮತ್ತು ಗಾಳಿ ಶುರುವಾಗುತ್ತಿದ್ದಂತೆ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ವಿದ್ಯುತ್ ಕಡಿತಗೊಳಿಸಲಾಯಿತು.