ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ನಡೆಸಿಕೊಡುವ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ 11ನೇ ಆವೃತ್ತಿಯೂ (Bigg Boss 11th Season) ಶುರುವಾದಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಈ ಬಾರಿ ಕಾರ್ಯಕ್ರಮವು ವಿವಾದದಿಂದಲೇ (Controversy) ಹೆಚ್ಚು ಸದ್ದು ಮಾಡುತ್ತಿದೆ. ಸ್ಫರ್ಧಿಗಳ ನಡುವಿನ ಕಿತ್ತಾಟ ಹಾಗೂ ಅವಾಚ್ಯ ಶಬ್ದಗಳ ಬಳಕೆಯಿಂದಲೇ ಕಾರ್ಯಕ್ರಮವು ಹೆಚ್ಚು ಸುದ್ದಿಯಲ್ಲಿದ್ದು, ಒಂದಲ್ಲ ಒಂದು ಸಂಕಷ್ಟ ಎದುರಿಸುತ್ತಿದ್ದು, ಇದೀಗ ಮತ್ತೊಂದು ಸಂಕಷ್ಟಕ್ಕೆ (Problems) ಕೊರಳೊಡ್ಡಿದೆ.
ಕಾರ್ಯಕ್ರಮವನ್ನು ಮೊದಲು ಸ್ವರ್ಗ-ನರಕ (Hell-Heaven) ಎಂಬ ಥೀಮ್ನಲ್ಲಿ ಕಾರ್ಯಕ್ರಮ ರೂಪುಗೊಂಡಿತ್ತು. ಆದರೆ, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೂರು ಸಲ್ಲಿಕೆಯಾಗಿತ್ತು. ಇದಾದ ಬಳಿಕ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ (Privacy) ಧಕ್ಕೆಯಾಗಿದೆ ಅಂತ ಮಹಿಳಾ ಆಯೋಗಕ್ಕೆ ಪತ್ರದ ಮೂಲಕ ವಕೀಲೆ ದೂರು ನೀಡಿದ್ದರು. ನೋಟಿಸ್ ಬಂದ ಬಳಿಕ ಎಚ್ಚೆತ್ತುಕೊಂಡ ಬಿಗ್ಬಾಸ್ (Bigg Boss) ಆಯೋಜಕರು ನರಕ-ಸ್ವರ್ಗ (Hell-Heaven) ಎಂಬ ಪರಿಕಲ್ಪನೆಯನ್ನು ಅರ್ಧಕ್ಕೆ ನಿಲ್ಲಿಸಿ ಎಲ್ಲಾ ಸ್ಪರ್ಧಿಗಳನ್ನು ಒಂದೇ ಮನೆಯಲ್ಲಿ ಇರುವ ಅವಕಾಶ ಕಲ್ಪಿಸಿಕೊಟ್ಟಿದ್ದರು. ಇದಲ್ಲದೆ ವಾರದ ಕೊನೆಯಲ್ಲಿ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಮಹಿಳಾ ಸ್ಫರ್ಧಿಗಳಿಂದಲೇ ಸ್ಪಷ್ಟನೆ ಕೊಡಿಸುವ ಮೂಲಕ ಖಾಸಗಿತನಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂಬುದನ್ನು ಹೇಳಿದ್ದರು. ಇದೀಗ ಬಿಗ್ಬಾಸ್ (Bigg Boss) ಕಾರ್ಯಕ್ರಮದ ಪ್ರಸಾರವನ್ನು ಖಾಯಂ ಅಗಿ ರದ್ದುಪಡಿಸುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಮಾನ್ಯ ಪ್ರಧಾನ ವ್ಯವಹಾರ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ನಟಿ ಅಮೂಲ್ಯ ಸಹೋದರ Deepak Aras ನಿಧನ
ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ 11 ನೇ ಸೀಸನ್ (Bigg Boss 11th Season) ವಿರುದ್ಧ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲ ಕೆ.ಎಲ್ ಭೋಜರಾಜ್ ಎಂಬುವವರು ಪ್ರಧಾನ ವ್ಯವಹಾರ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವ್ಯವಹಾರ ಪ್ರಕ್ರಿಯಾ ಸಂಹಿತೆ ಆದೇಶ 39 ನಿಯಮ 1 ಮತ್ತು 2 ರೆಡ್ ವಿತ್ ಸೆಕ್ಷನ್ 151ರ ಪ್ರಕಾರ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಚಾಂದಿನಿ ಅವರು ಸಿವಿಲ್ ಕಾರ್ಯವಿಧಾನದ ಕೋಡ್ ಕಾಯಿದೆ U/sec.26,order7,rule1 ಅಡಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯ ನಿರ್ಮಾಪಕರ ಹಾಗೂ ಸಂಪಾದಕರಿಗೆ ತುರ್ತು ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 28ರಂದು ನಡೆಸುವುದಾಗಿ ಹೇಳಿ ಅರ್ಜಿಯನ್ನು ಮುಂದೂಡಿದ್ದಾರೆ.
11ನೇ ಆವೃತ್ತಿಯ ಬಿಗ್ಬಾಸ್ (BiggBoss) ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದು, ಪ್ರೇಕ್ಷಕರು ಆಯೋಜಕರ ವಿರುದ್ಧ ಕಿಡಿಕಾರುತ್ತಿದ್ದಾರೆ. ಕಾರ್ಯಕ್ರಮ ಶುರುವಾದ ದಿನದಿಂದಲೂ ಸ್ಫರ್ಧಿಗಳ ನಡುವೆ ಒಂದಿಲ್ಲೊಂದು ಕಾರಣಕ್ಕೆ ಜಗಳವಾಗುತ್ತಿದ್ದು, ಅವಾಚ್ಯ ಶಬ್ದಗಳನ್ನು ಹೆಚ್ಚು ಬಳಸುತ್ತಿರುವುದು ಪ್ರೇಕ್ಷಕರಿಗೆ ದೊಡ್ಡ ಕಿರಿಕಿರಿಯನ್ನು ಉಂಟು ಮಾಡಿದೆ. ಇದಲ್ಲದೆ ಕಳೆದ ವಾರ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಕೂಡ ಇದು ತಮ್ಮ ಕೊನೆಯ ಸೀಸನ್ ಎಂದು ಅಧಿಕೃತವಾಗಿ ಘೋಷಿಸಿದ್ದರು. ಇದೀಗ ಕಾರ್ಯಕ್ರಮದ ಪ್ರಸಾರವನ್ನು ರದ್ದುಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.