ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರೆಂಟಿ ವಿಚಾರವಾಗಿ ಇದೀಗ KSRTC ಸಂಸ್ಥೆಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಸಿಬ್ಬಂದಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕರಾರಸಾನಿ ಸಂಸ್ಥೆಯಿಂದ ಬೇಗನೇ ನಿರ್ಧಾರ ತೆಗೆದುಕೊಳ್ಳುವಂತೆ ಕೋರಿ ಪತ್ರ ಬರೆಯಲಾಗಿದೆ. ಈಗಾಗಲೇ ಕೆಲ ಮಹಿಳೆಯರು ಬಸ್ಸಿನಲ್ಲಿ ಹಣ ನೀಡಲು ನಿರಾಕರಿಸುತ್ತಿದ್ದು ಇದರಿಂದಾಗಿ ಟಿಕೆಟ್ ಹಣ ಪಡೆಯುವುದೇ ಸಾಹಸಾಗಿದೆ.
ಹೀಗಾಗಿ ಶೀಘ್ರದಲ್ಲೇ ಸರ್ಕಾರ ಯೋಜನೆ ಜಾರಿಗೆ ತರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಬೇಕು ಎಂದು ಸಿಎಂಗೆ ಸಾರಿಗೆ ಯೂನಿಯನ್ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಪತ್ರ ಬರೆದಿದ್ದಾರೆ.
ಜೊತೆಗೆ ಈ ಯೋಜನೆ ಜಾರಿಯಿಂದ ನಿಗಮಕ್ಕಾಗುವ ಹೊರೆಯನ್ನು ಸರ್ಕಾರ ಮುಂಗಡವಾಗೇ ಹಣ ಬಿಡುಗಡೆ ಮಾಡಿ ಪಾವತಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.