| ಹರ್ಷವರ್ಧನ್ ಬ್ಯಾಡನೂರು
ಸಿಂಪಲ್ ಸುನಿ, ನಿರ್ದೇಶಕ : ಇವತ್ತಲ್ಲ ನಾಳೆ, ಕಪ್ ನಮ್ಮದೇ
ಕಳೆದ 16 ವರ್ಷಗಳಿಂದ ಆರ್ಸಿಬಿ ಐಪಿಎಲ್ ಟ್ರೋಫಿ ಗೆಲ್ಲುತ್ತದೆ ಎಂದು ಕಾಯುತ್ತಲೇಯಿದ್ದೇವೆ. ಮೊದಲು ತಂಡದ ಮ್ಯಾನೇಜ್ಮೆಂಟ್ ಬದಲಾಗಬೇಕು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಬದಲು, ನಿವೃತ್ತಿ ಪಡೆದು ಕಾಮೆಂಟರಿಯಲ್ಲಿದ್ದವರನ್ನು ಕರೆತಂದು ಆಡಿಸುತ್ತಿದ್ದಾರೆ. ಭವಿಷ್ಯವನ್ನೇ ನೋಡುತ್ತಿಲ್ಲ. ನಮ್ಮ ಭಾರತದಲ್ಲೇ ಇರುವ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡಬೇಕು. ಉತ್ತಮ ತಂಡವನ್ನು ಕಟ್ಟಬೇಕು. ಈ ಬಾರಿ ಗೆಲ್ಲುತ್ತಾರೆ ಎಂಬ ಭರವಸೆ ಇತ್ತು. ಹೀಗಾಗಿಯೇ ಬೆಂಗಳೂರಿನಲ್ಲಿ ನಡೆದ ಆರ್ಸಿಬಿಯ ಏಳೂ ಪಂದ್ಯಗಳನ್ನು ನಾನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೋಡಿದೆ. ಇರುವ 11 ಮಂದಿ ಆಟಗಾರರಲ್ಲಿ ಕೇವಲ ನಾಲ್ವರು ಆಡಿದರೆ ಹೇಗೆ? ಅದು ಲೂಡೋ ಆಗುತ್ತದೆ, ಕ್ರಿಕೆಟ್ ಅಂತನ್ನಿಸಿಕೊಳ್ಳುವುದಿಲ್ಲ. ಸಾಕಷ್ಟು ಬದಲಾವಣೆ ಆಗಬೇಕಿದೆ. ಆದರೆ, ಆರ್ಸಿಬಿ ನಮ್ಮ ಮಗು. ಸ್ವಲ್ಪ ರಚ್ಚೆ, ಕೊನೆಯ ಬೆಂಚ್, ಆಗಾಗ ಫೇಲ್… ಏನೇ ಆದರೂ ಅದು ನಮ್ಮ ಮಗು. ಯಾವುದೋ ಮಗು ರ್ಯಾಂಕ್ ಬರುತ್ತೆ ಅಂತ ಬೇರೆಯವರ ಮಗುವನ್ನು ನಮ್ಮ ಮಗು ಅಂತ ಹೇಳಲು ಸಾಧ್ಯವಿಲ್ಲ. ಇವತ್ತಲ್ಲ ನಾಳೆ, ಕಪ್ ನಮ್ಮದೇ…
-ಧನ್ಯಾ ರಾಮ್ಕುಮಾರ್, ನಟಿ: ಆರ್ಸಿಬಿ ಫಾರ್ಎವರ್
ಭಾನುವಾರ ಪಂದ್ಯ ನೋಡಲು ಹೋಗಿದ್ದೆ. ಬೇಸರವಾಯಿತು. ಪ್ರತಿ ಬಾರಿ ಹೀಗೇ ಆಗುತ್ತಿದೆ. ಆದರೆ, ನಮ್ಮ ನಿಷ್ಠೆ ಎಂದಿದ್ದರೂ ಆರ್ಸಿಬಿಗೇ. ನನ್ನ ಬಾಲ್ಯದ ಒಂದು ಭಾಗವಾಗಿದ್ದ ಆರ್ಸಿಬಿ ಈಗ ನಮ್ಮ ಕುಟುಂಬವಾಗಿದೆ. ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟರ್ಗಳಲ್ಲಿ ಒಬ್ಬರು. ಡೇಲ್ ಸ್ಟೇಯ್ನ ಆರ್ಸಿಬಿ ಪರ ಆಡುತ್ತಿದ್ದಾಗ, ಅವರು ನನ್ನ ನೆಚ್ಚಿನ ಬೌಲರ್ ಆಗಿದ್ದರು. ನಾನು ಎಂಟನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ಆರ್ಸಿಬಿ ಪಂದ್ಯಕ್ಕೆ ಹೋಗಿದ್ದೆ. ಆ ಪಂದ್ಯ ಆರ್ಸಿಬಿ ಗೆದ್ದಿತ್ತು. ಅಂದಿನಿಂದ ಇವತ್ತಿನವರೆಗೂ ನಾನು ಆರ್ಸಿಬಿ ಫ್ಯಾನ್. ಗೆದ್ದರೂ ಒಂದೇ, ಸೋತರೂ ಒಂದೇ ನಾವು ಯಾವಾಗಲೂ ಆರ್ಸಿಬಿಯನ್ನೇ ಬೆಂಬಲಿಸುವುದು. ಆರ್ಸಿಬಿ ಪಾರೆವರ್.
-ರಘು ಗೌಡ (ನಟ): ಏನೇ ಆದರೂ ಬಿಟ್ಟುಕೊಡಲ್ಲ
ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ನಮ್ಮ ತಂಡ ಸೋತಿದ್ದನ್ನು ನೋಡಿ ಬೇಸರವಾಯಿತು. ಆದರೆ, ಸಾವಿರಾರು ಮಂದಿ ಆರ್ಸಿಬಿ ಅಭಿಮಾನಿಗಳ ಜತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ ಅನುಭವ ಅದ್ಭುತವಾಗಿತ್ತು. ಗೆಲ್ಲಲೇಬೇಕಾದ ಪಂದ್ಯದಲ್ಲಿ ಕೊಹ್ಲಿಯನ್ನು ಬಿಟ್ಟು ಬೇರೆ ಯಾರೂ ಸರಿಯಾಗಿ ಆಡಲಿಲ್ಲ. ಬೆಂಗಳೂರಿನ ಬ್ಯಾಟಿಂಗ್ ಪಿಚ್ನಲ್ಲಿ 197 ಒಳ್ಳೆ ಸ್ಕೋರ್ ಎನ್ನಬಹುದು. ಆದರೂ, ಗುಜರಾತ್ ತಂಡದವರು ಅದು ಸವಾಲೇ ಅಲ್ಲ ಅನ್ನದ ರೀತಿ ಹೊಡೆದುಬಿಟ್ಟರು. ಆರ್ಸಿಬಿ ಇನ್ನೂ ೈಟ್ ಕೊಡಬಹುದಿತ್ತೇನೋ… ಶೇಕಡಾ 100ರಷ್ಟು ೈಟ್ ಕೊಟ್ಟು ಸೋತರೆ ಏನೂ ಅನ್ನಿಸುತ್ತಿರಲಿಲ್ಲ. ಫೈಟ್ ಕೊಡಲಿಲ್ಲವಲ್ಲ ಎಂಬ ಬೇಸರವಿದೆ. ಅದೇನೇ ಆದರೂ ನಮ್ಮ ತಂಡವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಪ್ರತಿ ಬಾರಿಯೂ ಆರ್ಸಿಬಿಗೇ ನಮ್ಮ ಬೆಂಬಲ.
ದೀಪ್ತಿ ಮೋಹನ್ (ನಟಿ): ಹೃದಯ ಗೆದ್ದಿರುವ ತಂಡ
ವಿರಾಟ್ ಕೊಹ್ಲಿ ನನ್ನ ಫೇವರೇಟ್ ಆಟಗಾರ. ನಿನ್ನೆ ಅವರು ಉತ್ತಮ ಪ್ರದರ್ಶನ ನೀಡಿದರೂ, ಆರ್ಸಿಬಿ ಮಹತ್ವದ ಪಂದ್ಯ ಸೋತಿದ್ದು ಬೇಜಾರಾಯಿತು. ಹಾಗಂತ ನಮ್ಮ ತಂಡವನ್ನು ಬೆಂಬಲಿಸದಿದ್ದರೆ ಹೇಗೆ? ಆರ್ಸಿಬಿ ಗೆಲ್ಲುವ ತನಕವೂ ಆರ್ಸಿಬಿ ಅಭಿಮಾನಿಯೇ. ಬೆಂಗಳೂರಿನ ಹುಡುಗಿಯಾಗಿ ನಾನು ನಮ್ಮೂರಿನ ತಂಡವನ್ನೇ ಸಪೋರ್ಟ್ ಮಾಡುತ್ತೇನೆ. ಸೋಲು, ಗೆಲುವು ಇದ್ದಿದ್ದೇ. ಆದರೆ, ಆರ್ಸಿಬಿ ಜನರ ಹೃದಯ ಗೆದ್ದಿರುವ ತಂಡ. ಅವರು ಎಷ್ಟು ಬಾರಿ ಸೋತರೂ, ಅವರಿಗೇ ನಮ್ಮ ಬೆಂಬಲ. ಮುಂದಿನ ಬಾರಿ ಕಪ್ ನಮ್ಮದೇ…
ಹಿತ ಚಂದ್ರಶೇಖರ್, ನಟಿ
ಆರ್ಸಿಬಿ ಮತ್ತು ಜಿಟಿ ನಡುವಿನ ಪಂದ್ಯ ಚೆನ್ನಾಗಿತ್ತು. ಆದರೆ, ಆರ್ಸಿಬಿ ಅಭಿಮಾನಿಯಾಗಿ ಪ್ರತಿ ಬಾರಿ ಬೇಸರದೊಂದಿಗೆ ಐಪಿಎಲ್ ಪಂದ್ಯಾವಳಿ ಮುಗಿಯುತ್ತಿದೆ. ಹಾಗಂತ ಆರ್ಸಿಬಿ ಬದಲು ಬೇರೆ ತಂಡವನ್ನು ಫೇವರಿಟ್ ಎಂದು ಹೇಳಲು ಸಾಧ್ಯವಿಲ್ಲ. ಆರ್ಸಿಬಿ ಮತ್ತು ಫ್ಯಾನ್ಸ್ ನಡುವೆ ಒಂದು ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ನಮ್ಮ ನಿಷ್ಠೆ ಎಂದಿದ್ದರೂ ಆರ್ಸಿಬಿಗೆ ಇರಲಿದೆ. ಮುಂದಿನ ವರ್ಷದ ಪಂದ್ಯಾವಳಿ ಆರಂಭವಾಗುವವರೆಗೂ ಹೇಗೋ ಇದೇ ಬೇಸರದಲ್ಲಿದ್ದು, ಬಳಿಕ ಮತ್ತೆ ಈ ವರ್ಷ ಕಪ್ ನಮ್ಮದೇ ಅಂತ ಬೆಂಬಲಿಸುತ್ತೇನೆ.