ಕೋಟ: ಸಂಸ್ಕೃತಿ ಸಂಭ್ರಮ ಟ್ರಸ್ಟ್ ಕೋಟ, ಕೋಟ ವಿಧಾತ್ರಿ ರೈತ ಉತ್ಪಾದಕರ ಸಂಸ್ಥೆ, ಕೋಟ ಸಹಕಾರಿ ವ್ಯವಸಾಯಿಕ ಸಂಘದ ಆಶ್ರಯದಲ್ಲಿ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ, ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಶ್ರಯದಲ್ಲಿ ಕೋಟದಲ್ಲಿ ಪ್ರಥಮ ಬಾರಿಗೆ ಹಲಸು, ಮಾವು, ಕೃಷಿಮೇಳ ಮೇ 2ರಿಂದ 4ರವರೆಗೆ ಜರುಗಲಿದೆ. ಸುಮಾರು 1.5ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಸ್ಕೃತಿ ಸಂಭ್ರಮ ಟ್ರಸ್ಟ್ನ ಪ್ರಮುಖ ಸತೀಶ್ ಕುಮಾರ್ ಕುಂದಾಪುರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಮೇಳದಲ್ಲಿ ವಿವಿಧ ತಳಿಯ ಹಲಸು, ಮಾವಿನಹಣ್ಣಿನ ಪ್ರದರ್ಶನ ಮತ್ತು ಮಾರಾಟ, ಹಲಸು ಮತ್ತು ಮಾವಿನ ಉಪ ಉತ್ಪನ್ನಗಳ ಮಳಿಗೆ, ವಿವಿಧ ತಳಿಯ ಹಲಸು ಮತ್ತು ಮಾವಿನ ಗಿಡ ಮತ್ತು ಇತರ ಹಣ್ಣಿನ, ಹೂವಿನ, ತರಕಾರಿ ಬೀಜದ ಮಳಿಗೆ ತೆರೆಯಲಾಗುವುದು ಎಂದರು.
ಟ್ರಸ್ಟ್ನ ರಮೇಶ್ ಮೆಂಡನ್ ಮಾತನಾಡಿ, ಬೃಹತ್ ಮೇಳದಲ್ಲಿ ಕೃಷಿ ಯಂತ್ರೋಪಕರಣ, ಗೊಬ್ಬರ ಮಾರಾಟ ನಡೆಯಲಿದ್ದು, ಕೃಷಿ ಮಾಹಿತಿ ಕಾರ್ಯಾಗಾರ, ಕರಕುಶಲ ಮತ್ತು ನೇಯಿಗೆಯ ಬಟ್ಟೆ ಮಳಿಗೆ, ಇತರ ಗೃಹೋಪಯೋಗಿ ವಸ್ತುಗಳ ಮಳಿಗೆಯನ್ನು ಸಹ ತೆರೆಯಲಾಗುವುದು ಎಂದರು.
ಕೋಟ ವ್ಯವಸಾಯಕ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ, ವಿಧಾತ್ರಿ ರೈತ ಉತ್ಪಾದಕರ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಮಧ್ಯಸ್ಥ, ಸಿಇಓ ಶ್ರಾವಿತ್ ಎನ್.ಶೆಟ್ಟಿ, ನವನೀತ್ ಶೆಟ್ಟಿ, ಸಂಸ್ಕೃತಿ ಸಂಭ್ರಮ ಟ್ರಸ್ಟ್ನ ಮಹಮ್ಮದ್ ಇಬ್ರಾಹಿಂ, ಶ್ರೀಧರ ಮರವಂತೆ ಉಪಸ್ಥಿತರಿದ್ದರು.