IPL 2025 : ಚಂಡೀಗಢದ ಮುಲ್ಲನ್ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಲ್ಲಿ ನಿನ್ನೆ (ಏಪ್ರಿಲ್ 15) ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ (KKR) ವಿರುದ್ಧ ನಡೆದ ಐಪಿಎಲ್ ಪಂದ್ಯ ಬಹಳ ರೋಮಾಂಚಕವಾಗಿತ್ತು. ಈ ಪಂದ್ಯದಲ್ಲಿ ಪಂಜಾಬ್, ಕೋಲ್ಕತ ವಿರುದ್ಧ 16 ರನ್ಗಳಿಂದ ದಾಖಲೆಯ ಗೆಲುವು ಸಾಧಿಸಿತು. ಅದರಲ್ಲೂ 111 ರನ್ಗಳ ಸಾಧಾರಣ ಗುರಿಯನ್ನು ರಕ್ಷಿಸಿಕೊಳ್ಳುವ ಮೂಲಕ ಪಂಜಾಬ್ ಹೊಸ ಇತಿಹಾಸವನ್ನು ಸೃಷ್ಟಿಸಿತು. ಶ್ರೇಯಸ್ ಅಯ್ಯರ್ ಪಡೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಗುರಿಯನ್ನು ರಕ್ಷಣೆ ಮಾಡಿದ ತಂಡವಾಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 15.3 ಓವರ್ಗಳಲ್ಲಿ 111 ರನ್ಗಳಿಗೆ ಸರ್ವಪತನಗೊಂಡಿತು. ಪ್ರಿಯಾಂಶ್ ಆರ್ಯ (12 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ಗಳೊಂದಿಗೆ 22 ರನ್) ಮತ್ತು ಪ್ರಭ್ಸಿಮ್ರಾನ್ ಸಿಂಗ್ (15 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 30) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕ ಶ್ರೇಯಸ್ ಅಯ್ಯರ್ ಮತ್ತು ಇತರ ಎಲ್ಲ ಬ್ಯಾಟ್ಸ್ಮನ್ಗಳು ಸಂಪೂರ್ಣ ವಿಫಲರಾದರು. ಕೆಕೆಆರ್ ಬೌಲರ್ಗಳಲ್ಲಿ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ತಲಾ ಎರಡು ವಿಕೆಟ್ ಪಡೆದರು. ಅವರೊಂದಿಗೆ ನೋರ್ತೇಜ್ ಮತ್ತು ವೈಭವ್ ಅರೋರಾ ತಲಾ ಒಂದು ವಿಕೆಟ್ ಪಡೆದರು.
112 ರನ್ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ಗೆ ಪಂಜಾಬ್ ವೇಗಿ ಮಾರ್ಕೊ ಜಾನ್ಸೆನ್ ಮೊದಲ ಓವರ್ನಲ್ಲಿ ಭಾರಿ ಆಘಾತ ನೀಡಿದರು. ಫಾರ್ಮ್ನಲ್ಲಿದ್ದ ಬ್ಯಾಟ್ಸ್ಮನ್ ಸುನೀಲ್ ನಾರಾಯಣ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರದ ಓವರ್ನಲ್ಲಿ ಮತ್ತೊಬ್ಬ ವೇಗಿ ಕ್ಸೇವಿಯರ್ ಬಾರ್ಟ್ಲೆಟ್, ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿದರು. ಅದಾದ ನಂತರ, ರಘುವಂಶಿ ಮತ್ತು ನಾಯಕ ಅಜಿಂಕ್ಯಾ ರಹಾನೆ ಇನ್ನಿಂಗ್ಸ್ ಸುಧಾರಿಸಲು ಪ್ರಯತ್ನಿಸಿದರು. ಆ ಸಮಯದಲ್ಲಿ, ದಾಳಿಗೆ ಇಳಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪಂದ್ಯದ ಮುಖವನ್ನೇ ಬದಲಾಯಿಸಿದರು. ರಹಾನೆ, ರಿಂಕು ಸಿಂಗ್, ರಮಣದೀಪ್ ಹಾಗೂ ರಘುವಂಶಿ ವಿಕೆಟ್ ಕಬಳಿಸಿದರು. ಕೊನೆಯಲ್ಲಿ ಮಾರ್ಕೊ ಜಾನ್ಸೆನ್ ಅವರು ವಿನಾಶಕಾರಿ ಬ್ಯಾಟ್ಸ್ಮನ್ ರಸೆಲ್ ಅವರನ್ನು ಔಟ್ ಮಾಡಿ ತಮ್ಮ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು. 3.1 ಓವರ್ಗಳನ್ನು ಬೌಲಿಂಗ್ ಮಾಡಿದ ಮಾರ್ಕೊ ಜಾನ್ಸೆನ್ ಕೇವಲ 17 ರನ್ಗಳಿಗೆ 3 ವಿಕೆಟ್ಗಳನ್ನು ಪಡೆದರು.
ಇದನ್ನೂ ಓದಿ: ನಿಮ್ಮ ಕರುಳಿನ ಆರೋಗ್ಯ ಸುಧಾರಿಸಬೇಕೇ? ನೀವು ತಪ್ಪದೇ ಈ ಆಹಾರಗಳನ್ನು ಸೇವಿಸಲೇಬೇಕು! Intestinal Health
ಈ ಪಂದ್ಯದಲ್ಲಿ ಕೆಕೆಆರ್ ತಂಡದ ಸೋಲಿಗೆ ನಾಯಕ ಅಜಿಂಕ್ಯಾ ರಹಾನೆ ಪರೋಕ್ಷವಾಗಿ ಕಾರಣರಾದರು. ಕೆಕೆಆರ್ ತಂಡ ಆರಂಭಿಕರ ವಿಕೆಟ್ಗಳನ್ನು ಬೇಗನೆ ಕಳೆದುಕೊಂಡರೂ, ರಘುವಂಶಿ ಮತ್ತು ರಹಾನೆ ಅದ್ಭುತ ಆಟವಾಡಿ ಸ್ಕೋರ್ಬೋರ್ಡ್ ಅನ್ನು ಮುಂದಕ್ಕೆ ಕೊಂಡೊಯ್ದರು. 7 ಓವರ್ಗಳ ಅಂತ್ಯದಲ್ಲಿ, ಕೆಕೆಆರ್ ಎರಡು ವಿಕೆಟ್ಗಳನ್ನು ಕಳೆದುಕೊಂಡು ಬಲಿಷ್ಠ ಸ್ಥಿತಿಯಲ್ಲಿತ್ತು. ಅದಕ್ಕಾಗಿಯೇ ಕೆಕೆಆರ್ನ ಗೆಲುವು ಖಚಿತವೆಂದು ಪರಿಗಣಿಸಲಾಯಿತು. ಆದರೆ, ಇಲ್ಲಿಯೇ ರಹಾನೆ ಮಾಡಿದ ತಪ್ಪು ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಕೆಕೆಆರ್ ಇನ್ನಿಂಗ್ಸ್ನ 8ನೇ ಓವರ್ನಲ್ಲಿ, ಚಾಹಲ್ ಎಸೆದ ನಾಲ್ಕನೇ ಚೆಂಡನ್ನು ರಹಾನೆ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್ಗೆ ತಗುಲಿ ಅವರ ಪ್ಯಾಡ್ಗೆ ಬಡಿಯಿತು. ತಕ್ಷಣ, ಪಂಜಾಬ್ ಆಟಗಾರರು ಎಲ್ಬಿಗೆ ಮನವಿ ಮಾಡಿದರು ಮತ್ತು ಅಂಪೈರ್ ಔಟ್ ಎಂದು ನಿರ್ಣಯಿಸಿದರು.
ಕೆಕೆಆರ್ ತಂಡಕ್ಕೆ ಈಗಾಗಲೇ ಎರಡು ರಿವ್ಯೂಗಳು ಬಾಕಿ ಇದ್ದರೂ, ರಹಾನೆ ರಿವ್ಯೂ ತೆಗೆದುಕೊಳ್ಳದೆ ಮೈದಾನ ಬಿಟ್ಟು ಹೋದರು. ನಂತರ ರಿಪ್ಲೇಯಲ್ಲಿ ನಾಟೌಟ್ ಎಂದು ಸ್ಪಷ್ಟವಾಗಿ ತೋರಿಸಿತು. ರಹಾನೆ ವಿಕೆಟ್ ಪಡೆದ ನಂತರ ಕೆಕೆಆರ್ ಪತನ ಆರಂಭವಾಯಿತು. ರಹಾನೆ ಅಲ್ಲಿ ರಿವ್ಯೂ ತೆಗೆದುಕೊಂಡಿದ್ದರೆ, ಕೆಕೆಆರ್ ಸುಲಭವಾಗಿ ಗೆಲ್ಲುತ್ತಿತ್ತು. (ಏಜೆನ್ಸೀಸ್)
ನನ್ನ ಹೆಂಡ್ತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ… ಸಾಲ ಮಾಡಿ ಗಳಗಳನೇ ಕಣ್ಣೀರಿಟ್ಟ ವ್ಯಕ್ತಿ! Betting Addiction