ಕೋಲಾರ: ಚುನಾವಣೆಗೂ ಮುನ್ನ ಕೊಟ್ಟ ಭರವಸೆಯಂತೆಯೇ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ನಗರದ ಶಾಸಕ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರ, ಜಿಲ್ಲೆ ಸೇರಿ ರಾಜ್ಯದ ಅಭಿವೃದ್ಧಿಗೆ ಸರ್ಕಾರ ಸದಾ ಸಹಕರಿಸುತ್ತಿದೆ. ಯಾರೋ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ನಾವು ಮತ್ತಷ್ಟು ಕೆಲಸ ಮಾಡಲು ಸೂರ್ತಿ ನೀಡುತ್ತಿದೆ ಎಂದರು.
ಈಗಾಗಲೇ ಹಲವು ರಸ್ತೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲು ಉದ್ದೇಶಿದ್ದು, ಸಂಪುಟದಲ್ಲಿ ತೀರ್ಮಾನಿಸಿ, ಸದ್ಯದಲ್ಲೇ ಟೆಂಡರ್ ಮಾಡಿ ಕಾಮಗಾರಿಗೆ ಮುಖಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಲಾಗುವುದು ಎಂದರು.
ಹೆದ್ದಾರಿ ನಿರ್ಮಾಣ: ದೇವನಹಳ್ಳಿಯಿಂದ ಹೊಸೂರು ಗಡಿವರೆಗೆ 110 ಕಿಮೀ ಹೆದ್ದಾರಿ ನಿರ್ಮಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಯೋಜನೆಗೆ 3,190 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ರಸ್ತೆ ಕಾಮಗಾರಿಗೆ 2,032 ಕೋಟಿ ರೂ. ಹಾಗೂ ಭೂಸ್ವಾಧೀನಕ್ಕೆ 1,158 ಕೋಟಿ ರೂ. ಸಿಗಲಿದೆ ಎಂದು ಶಾಸಕರು ತಿಳಿಸಿದರು.
ದೇವನಹಳ್ಳಿ, ವಿಜಯಪುರ, ಜಂಗಮನಕೋಟೆ ಕ್ರಾಸ್, ಎಚ್ ಕ್ರಾಸ್, ವೇಮಗಲ್, ನರಸಾಪುರ, ಕೈಗಾರಿಕಾ ಪ್ರದೇಶ, ಮಾಲೂರು, ಹೊಸೂರು ಗಡಿಯವರೆಗೆ ಹೆದ್ದಾರಿ ನಿರ್ಮಾಣವಾಗಲಿದೆ. ಆ ಕಡೆ ತಮಿಳುನಾಡಿವರು ಕೂಡ ಅವರ ವ್ಯಾಪ್ತಿಯಲ್ಲಿ ಹೆದ್ದಾರಿ ಪೂರ್ಣಗೊಳಿಸಿದ್ದಾರೆ. ಇದರಿಂದ ಸಂಚಾರ ದಟ್ಟಣೆಗೆ ಮುಕ್ತಿ ಸಿಕ್ಕಿ, ಸಂಚಾರ ಸುಗಮವಾಗಲಿದೆ ಎಂದರು.
ಯೋಜನೆ ಜಾರಿಗೆ ನಾನು, ಶಾಸಕರಾದ ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ಶರತ್ ಬಚ್ಚೇಗೌಡ, ಸಚಿವರಾದ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರಯತ್ನ ಮಾಡಿದ್ದೇವೆ. ಮುಖ್ಯಮಂತ್ರಿ ಭೇಟಿಯಾಗಿ ಸಚಿವ ಸಂಪುಟದಲ್ಲಿ ಈ ವಿಷಯ ತರುವಂತೆ ಮನವಿ ಮಾಡಿದ್ದೆವು. ಅದಕ್ಕೆ ಸ್ಪಂದನೆ ಸಿಕ್ಕಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರು ಹಾಗೂ ಎರಡೂ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ನಗರಸಭೆ ಸದಸ್ಯರಾದ ಅಂಬರೀಶ್, ಷಂಶೀರ್, ಮೈಲಾಂಡಹಳ್ಳಿ ಗ್ರಾ.ಪಂ ಸದಸ್ಯ ಮುರಳಿ ಮತ್ತೀತರರು ಇದ್ದರು.
* ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು
ಕೋಲಾರಕ್ಕೆ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಆದಷ್ಟು ಬೇಗ ಟೆಂಡರ್ ಮಾಡಿಸಿ ನಿರ್ಮಾಣ ಮಾಡಿಸಲಾಗುವುದು. ನಗರ ಹೊರವಲಯದಲ್ಲಿ ಎರಡು ಕಡೆ ಜಾಗ ಗುರುತಿಸಲಾಗಿದ್ದು, ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಕ್ಷೇತ್ರದಲ್ಲಿ ಈವರೆಗೆ 70 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿದೆ. ಆದರೆ, ಕೆಲಸ ಇನ್ನೂ ಆರಂಭವಾಗಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.
* ಗೆಲುವಿನ ವಿಶ್ವಾಸ
ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಹಾಗೆಯೇ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕೂಡ ಬಲಿಷ್ಠವಾಗಿದೆ. ಈ ಹಿಂದೆ ನಾನು ಹೇಳಿದಂತೆಯೇ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ವಿಧಾನಸಭೆ ಉಪ ಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಜಿ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.