ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ (Saregama Viji) (76) ಅವರು ಇಂದು ನಮ್ಮನ್ನು ಅಗಲಿದ್ದು, ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. 300ಕ್ಕೂ ಅಧಿಕ ಚಲನಚಿತ್ರ, 2,500ಕ್ಕೂ ಅಧಿಕ ಸೀರಿಯಲ್ ಹಾಗೂ ನಾಟಕಗಳಲ್ಲಿ ಅಭಿನಯಿಸಿ, ನಿರ್ದೇಶಕರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ ವಿಜಿ ಅವರ ನಿಧನಕ್ಕೆ ಸಿನಿಮಾ, ರಾಜಕೀಯದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಹಿರಿಯ ನಟರಾದ ಟೈಗರ್ ಪ್ರಭಾಕರ್, ಸುಧೀರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ವಿಜಯ್ ಕುಮಾರ್ ಅವರು ಕಾಲಕ್ರಮೇಣ ಸರಿಗಮ ವಿಜಿ (Saregama Viji) ಎಂದೇ ಖ್ಯಾತಿ ಪಡೆದರು. ಅವರ ಹೆಸರಿನ ಮುಂದೆ ಸರಿಗಮ ಸೇರಿದ್ದರ ಹಿಂದೆ ಒಂದು ರೋಷಕ ಕಥೆಯಿದ್ದು, ಅದರ ಬಗೆಗಿನ ಕುತೂಹಲಕರ ಮಾಹಿತಿ ಇಲ್ಲಿದೆ.
1975ರಲ್ಲಿ ಬೆಳುವಲದ ಮಡಿಲಲ್ಲಿ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ವಿಜಿ ಅವರು ಅನೇಕ ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಂಸಾರದಲ್ಲಿ ಸರಿಗಮ ಎಂಬ ನಾಟಕದಿಂದ ಹೆಚ್ಚು ಖ್ಯಾತಿ ಪಡೆದ ವಿಜಿ ಅವರು ಆ ಬಳಿಕ ಸರಿಗಮ ವಿಜಿ (Saregama Viji) ಎಂದೇ ಖ್ಯಾತಿ ಪಡೆದರು. ಸಂಸಾರದಲ್ಲಿ ಸರಿಗಮ ನಾಟಕವು ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಲ್ಲೂ 1,500ಕ್ಕೂ ಅಧಿಕ ಬಾರಿ ನಾಟಕ ತಂಡ ಯಶಸ್ವಿ ಪ್ರದರ್ಶನ ನೀಡಿತ್ತು. ಇದಾದ ಬಳಿಕ ಅವರು ಸರಿಗಮ ವಿಜಿ ಎಂದೇ ಖ್ಯಾತಿ ಪಡೆದರು.
ಅನಾರೋಗ್ಯದ ನಿಮಿತ್ತ ಮಣಿಪಾಲ್ ಆಸ್ಪತ್ರೆಗೆ ನಟ ಸರಿಗಮ ವಿಜಿ (Saregama Viji) ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮಹಾಲಕ್ಷ್ಮೀ ಲೇಔಟ್ನಲ್ಲಿರುವ ನಟನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಜನವರಿ 16ರಂದು ಚಾಮರಾಜಪೇಟೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
Reels ಮಾಡುವಾಗ ಅಡ್ಡಿಪಡಿಸಿದ ಮಗುವನ್ನು ಕಾಲಿನಿಂದ ಒದ್ದು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ; ಶಾಕಿಂಗ್ ವಿಡಿಯೋ ವೈರಲ್