ದೇಶದ ಪ್ರತಿಷ್ಠೆಗೆ ಸೋಲಾದರೆ ಸಂಭ್ರಮಿಸುವ ಕೈಪಡೆ

blank

ದೇಶದ ಪ್ರತಿಷ್ಠೆಗೆ ಸೋಲಾದರೆ ಸಂಭ್ರಮಿಸುವ ಕೈಪಡೆ

(ಲೇಖಕರು ರಾಜ್ಯ ಬಿಜೆಪಿ ಹಿರಿಯ ವಕ್ತಾರರು)

ಗಾಂಧಿ ಕುಟುಂಬದ ಜತೆ ಜಾರ್ಜ್ ಸೋರೊಸ್ ಹೊಂದಿರುವ ಸಂಪರ್ಕದ ಬಗ್ಗೆ ಬಿಜೆಪಿ ಸಂಸದರು ಹೊರಿಸಿದ ಗಂಭೀರ ಆರೋಪಕ್ಕೆ ಉತ್ತರಿಸಲು ಕಾಂಗ್ರೆಸ್ ಬಳಿ ಎರಡು ಮಾರ್ಗಗಳಿದ್ದವು. ಸಂಸತ್ತಿನಲ್ಲೇ ತಕ್ಕ ಉತ್ತರ ನೀಡುವುದು ಅಥವಾ ಈ ಹೇಳಿಕೆಗಳು ಸುಳ್ಳಾಗಿದ್ದರೆ ಅದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದು. ಕಾಂಗ್ರೆಸ್ ನಾಯಕತ್ವ ಆ ಎರಡೂ ಕೆಲಸಗಳನ್ನು ಮಾಡಲಿಲ್ಲ. ಹಾಗಾದರೆ ಸರಕಾರದ ಬಳಿ ಇರುವ ಸಾಕ್ಷ್ಯಾಧಾರಗಳಿಂದ ಇವರು ಆತಂಕಕ್ಕೊಳಗಾಗಿದ್ದಾರೆಯೇ?

blank

ಯಾರ್ಯಾರಿಗೆ ಯಾವ್ಯಾವ ಕಾರಣಕ್ಕೆ ಖುಷಿ ಮತ್ತು ಸಂಭ್ರಮ ಉಂಟಾಗುತ್ತೋ ಆ ದೇವರೂ ಅರಿಯಲಾರ. ಇಲ್ಲಿ ಕೇಳಿ, ಇದೇ ಜನವರಿ 20ಕ್ಕೆ ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಭ್ರಮಿಸುತ್ತಿದೆ. ಅರೆ ಇಸ್ಕಿ… ಜಾರ್ಜ್ ಸೋರೊಸ್ ಬೆಂಬಲಿತ ಎಡಪಂಥದ ಕಮಲಾ ಹ್ಯಾರಿಸ್ ಅವರನ್ನು ಚುನಾವಣೆಯಲ್ಲಿ ಬೆಂಬಲಿಸಿ, ಇದೀಗ ಚುನಾವಣೆ ಮುಗಿದ ಬಳಿಕ ಕಮಲಾ ಹ್ಯಾರಿಸ್​ರನ್ನು ಸೋಲಿಸಿ ಗೆದ್ದ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಕಾಂಗ್ರೆಸ್ ವಾಲಿಬಿಟ್ಟಿತೇ ಎಂದು ನೀವು ಭಾವಿಸಿದರೆ ಅದು ಶುದ್ಧ ತಪ್ಪು. ಕಾಂಗ್ರೆಸ್ ಸಂಭ್ರಮದ ಕಾರಣವೇ ಬೇರೆ ಇದೆ.

ಟ್ರಂಪ್ ಪ್ರಮಾಣವಚನದ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್​ನ ಅಧಿಕೃತ ಫೇಸ್​ಬುಕ್ ಪೋಸ್ಟ್ ನೋಡಿದರೆ ಒಂದು ಕ್ಷಣ ಆಘಾತಕ್ಕೊಳಗಾಗುವುದು ಗ್ಯಾರಂಟಿ. ಒಂದು ರಾಷ್ಟ್ರೀಯ ಪಕ್ಷ ಈ ಮಟ್ಟಿಗೆ ಬೌದ್ಧಿಕವಾಗಿ ದಿವಾಳಿ ಆಗಬಹುದೇ ಎಂಬ ಅಚ್ಚರಿ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಆ ಪೋಸ್ಟ್ ಹೀಗಿದೆ ನೋಡಿ. ‘ಚೀನಾದ ಅಧ್ಯಕ್ಷರಿಗೆ ಟ್ರಂಪ್ ಪ್ರಮಾಣವಚನಕ್ಕೆ ಆಹ್ವಾನ. ಆದರೆ ಟ್ರಂಪ್ ಅವರ ಪರಮಾಪ್ತ ಎಂದುಕೊಳ್ಳುವ ಪ್ರಧಾನಿ ಮೋದಿಗೆ ಆಹ್ವಾನವೇ ಇಲ್ಲ! ಹೆಹೆಹೆ…’ ಕಾಂಗ್ರೆಸ್ ವರಸೆ ಅಷ್ಟಕ್ಕೇ ನಿಲ್ಲುವುದಿಲ್ಲ. ‘ಟ್ರಂಪ್ ಚುನಾವಣೆಗೆ ಸಹಾಯ ಮಾಡಿದ್ದ, ಮಾಧ್ಯಮಗಳಲ್ಲಿ ಆಪ್ತಮಿತ್ರ ಎಂದು ಬಿಂಬಿಸಿಕೊಂಡಿದ್ದ ಮೋದಿ ಜನಪ್ರಿಯತೆ ಕುಸಿಯುತ್ತಿದ್ದಂತೆ ಮೋದಿಯನ್ನು ದೂರವಿಟ್ಟರಾ ಟ್ರಂಪ್?’ ಈ ಪ್ರಶ್ನೆ ಬೇರೆ.

ಎಲೆ ಹುಚ್ಚಪ್ಪಗಳಿರಾ… ನೀವು ಪ್ರಧಾನಿ ಮೋದಿ ಅವರನ್ನು ವಿರೋಧಿಸಿ, ಬೇಸರವಿಲ್ಲ. ಮೋದಿ ಹೆಸರಲ್ಲಿ ಭಾರತದ ಪ್ರತಿಷ್ಠೆಗೆ ಏಕೆ ಅಪಚಾರ ಎಸಗುತ್ತೀರಿ?! ಒಂದು ದಿನ ಅಮೆರಿಕದ ಸರಿಸಮನಾಗಿ ಎದೆ ಸೆಟೆಸಿ ನಿಲ್ಲಬೇಕೆಂಬುದು ಕೋಟಿ ಕೋಟಿ ಅಸಾಮಾನ್ಯ ಭಾರತೀಯರ ಶತಮಾನದ ಕನಸು. ಯೋಚನೆ ಮಾಡಿ ನೋಡಿ, ಹಿಡಿ ಗೋಧಿಗಾಗಿ, ಸೈನ್ಯಕ್ಕಾಗಿ, ಕಾಶ್ಮೀರದಲ್ಲಿ ಉಗ್ರರ ಉಪಟಳ ತೀರದಾದಾಗ ಅಮೆರಿಕದ ಬಾಯುಪಚಾರದ ಒಂದು ಹೇಳಿಕೆಗಾಗಿ, ನಮ್ಮ ಸರಕಾರ, ರಕ್ಷಣಾ ಸಚಿವರು, ಪ್ರಧಾನಿ ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಿದ್ದುದನ್ನು ಮರೆತೇಬಿಟ್ಟಿರಾ? ಅಮೆರಿಕದ ವೀಸಾಕ್ಕಾಗಿ ನಮ್ಮ ಸಹಸ್ರಾರು ಯುವಕರು ದೈನೇಸಿತನದಿಂದ ಕಾಯುತ್ತಿದ್ದ ದಿನಗಳು ಮರೆತೇಹೋದವೇ?

ಅಮೆರಿಕ ಅಷ್ಟೇ ಏಕೆ ಜಗತ್ತಿನ ಬಹುತೇಕ ದೇಶಗಳು ಈಗ ಬಲಾಢ್ಯ ಭಾರತಕ್ಕೆ ಗೌರವದ ಸಲಾಂ ಹೇಳುತ್ತಿರುವುದು ಸುಳ್ಳಾ? ಚೀನಾ, ಪಾಕಿಸ್ತಾನದಂತಹ ಪರಮಶತ್ರುಗಳು ವಿಧಿಯಿಲ್ಲದೆ ಬಾಲ ಮುದುರಿಕೊಂಡಿರುವುದು ಅತಿಶಯೋಕ್ತಿಯ ಮಾತೆ? ಇದನ್ನು ನೋಡಿ ಸಹಿಸದ ಕುತ್ಸಿತ ಮಾನಸಿಕತೆ ‘ಹಿರಿಯ ಪಕ್ಷ’ ಎಂದು ಬೀಗುವ ಕಾಂಗ್ರೆಸ್ಸಿಗೆ ಖಂಡಿತ ಶೋಭೆ ತರಲಾರದು. ರಾಜಕೀಯ ಅಧಿಕಾರದ ಇಳಿಜಾರಿನಲ್ಲಿರುವ ಆ ಪಕ್ಷದ ಈ ಧೋರಣೆ ಸುತರಾಂ ಕಾಂಗ್ರೆಸ್ಸನ್ನು ಕಾಪಾಡಲಾರದು. ಜಾರ್ಜ್ ಸೋರೊಸ್​ನ ಡೀಪ್ ಸ್ಟೇಟ್ ಕುತಂತ್ರ ಮತ್ತು ಕಾಂಗ್ರೆಸ್ ಪಕ್ಷದ ಹತಾಶೆಯ ಹಳಹಳಿಕೆ ಈಗ ಎಂಥವನಿಗೂ ಅರ್ಥ ಆಗುತ್ತದೆ.

ಏನಿದು ಡೀಪ್ ಸ್ಟೇಟ್?

ಅಮೆರಿಕದ ವಿದೇಶಾಂಗ ಇಲಾಖೆಯದ್ದೇ ಒಂದು ಬಲಾಢ್ಯ ಸಾಮ್ರಾಜ್ಯ. ಜಗತ್ತಿನ ದೊಡ್ಡಣ್ಣ ಎನಿಸಿರುವ ಅಮೆರಿಕದ ಸಾಮ್ರಾಜ್ಯದೊಳಗೆ ಅಲ್ಲಿನ ವಿದೇಶಾಂಗ ಇಲಾಖೆಯದ್ದೇ ಒಂದು ಪ್ರತ್ಯೇಕ ಜಗತ್ತು. ಅದಕ್ಕಾಗಿಯೇ ಅದನ್ನು ಡೀಪ್ ಸ್ಟೇಟ್ ಎಂದು ಕರೆಯುತ್ತಾರೆ. ಇಂತಿಪ್ಪ ಅಮೆರಿಕ ವಿದೇಶಾಂಗ ಇಲಾಖೆ ಜಾರ್ಜ್ ಸೋರೊಸ್ ಮತ್ತು ಆತನ ಸಹಚರ ಸಂಸ್ಥೆಗಳನ್ನು ಪಾಲನೆ ಪೋಷಣೆ ಮಾಡುತ್ತದೆ. ನಾವೆಲ್ಲ ರೆಜಿಮ್ ಚೇಂಜ್ ಅಥವಾ ಅಧಿಕಾರ ಬದಲಾವಣೆ ಎಂಬ ಪದಪುಂಜದ ಬಳಕೆಯನ್ನು ಕೇಳಿರುತ್ತೇವೆ.

ಅಮೆರಿಕ ಜಗತ್ತಿನ ಇತರ ದುರ್ಬಲ ದೇಶಗಳನ್ನು ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಆ ದೇಶದೊಳಗಿನ ದ್ರೋಹಿಗಳಿಗೆ ಎಲ್ಲ ತೆರನಾದ ಬೆಂಬಲ ನೀಡಿ, ಅಲ್ಲಿನ ರಾಷ್ಟ್ರೀಯ ಮತ್ತು ಪ್ರಜಾತಂತ್ರದ ಆಧಾರದಲ್ಲಿ ಚುನಾಯಿತ ಸರಕಾರವನ್ನು ಉರುಳಿಸಿ ತನ್ನ ಆಣತಿಯಂತೆ ಕುಣಿಯುವ ತನ್ನ ಚೇಲಾಗಳ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸಲು ಪ್ರಯತ್ನ ಮಾಡುತ್ತದೆ. ಉದಾಹರಣೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾಕ್ ಇತ್ಯಾದಿ ದೇಶಗಳ ಸರಕಾರಗಳು. ಬಾಂಗ್ಲಾದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು ತೀರಾ ಇತ್ತೀಚಿನ ಉದಾಹರಣೆ. ಬಾಂಗ್ಲಾ ದೇಶದ ಹಂಗಾಮಿ ಪ್ರಧಾನಿ ಮೊಹಮದ್ ಯೂನಸ್​ಗೆ ಇಷ್ಟು ದಿನ ಆಶ್ರಯ ಕೊಟ್ಟಿದ್ದು ಅಮೆರಿಕ, ಆತ ಅಮೆರಿಕದಲ್ಲಿ ಭದ್ರವಾಗಿ ಕುಳಿತು ಬಾಂಗ್ಲಾ ಆಂತರಿಕ ದಂಗೆಯನ್ನು ಸಂಪೂರ್ಣವಾಗಿ ನಿರ್ವಹಿಸಿದ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿದು ಹೊಸ ಅಧ್ಯಕ್ಷರ ಆಯ್ಕೆ ಆಗುವುದರೊಳಗೆ ಬಾಂಗ್ಲಾ ದಂಗೆಯನ್ನು ಯೂನಸ್ ರ್ತಾಕ ಅಂತ್ಯಕ್ಕೆ ತೆಗೆದುಕೊಂಡು ಹೋದ. ಅದಕ್ಕೆ ಕಾರಣ ತಾನು ಅಧ್ಯಕ್ಷನಾದರೆ ಡೀಪ್ ಸ್ಟೇಟ್ ಚಟುವಟಿಕೆಯನ್ನು ಹೊಸಕಿ ಹಾಕುತ್ತೇನೆ ಎಂದು ಟ್ರಂಪ್ ಹೇಳಿದ್ದು.

ಅಮೆರಿಕದ ಅದೇ ಡೀಪ್ ಸ್ಟೇಟ್ ಕಾರ್ಯತಂತ್ರ ಮೋದಿ ಭಾರತದ ವಿರುದ್ಧ ಕಳೆದ ಹತ್ತು ವರ್ಷಗಳಿಂದ ಪ್ರಬಲವಾಗಿ ಸಕ್ರಿಯವಾಗಿದೆ. ಕಾಂಗ್ರೆಸ್ ಮತ್ತು ಅದರ ಬಾಲಂಗೋಚಿ ಪಕ್ಷಗಳು, ವಿವಿಧ ಸಂಘಟನೆಗಳು, ಕೆಲ ಬುದ್ಧಿಜೀವಿಗಳ ಗುಂಪುಗಳು ಡೀಪ್ ಸ್ಟೇಟ್​ನ ಸೂತ್ರಧಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಕಾರಣ ಇಷ್ಟೇ, ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಹತ್ತು ವರ್ಷಗಳಲ್ಲಿ ಹತ್ತು ಹಲವು ಕ್ಷೇತ್ರಗಳಲ್ಲಿ ಅಗಾಧ ಪ್ರಗತಿ ಸಾಧಿಸಿದೆ. ಆರ್ಥಿಕ ಕ್ಷೇತ್ರ, ವಿದೇಶಾಂಗ ವ್ಯವಹಾರ, ರಕ್ಷಣಾ ಉತ್ಪಾದನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಡಿಜಿಟಲ್ ಕ್ಷೇತ್ರಗಳಲ್ಲಿ ಭಾರತ ಅಗಾಧ ಯಶಸ್ಸನ್ನು ದಾಖಲಿಸಿದೆ. ಅದನ್ನು ಅಮೆರಿಕದ ಡೀಪ್ ಸ್ಟೇಟ್ ವ್ಯವಸ್ಥೆ ಸಹಿಸುವುದಿಲ್ಲ. ಅದರ ಫಲವಾಗಿ ಇಲ್ಲಿನವರನ್ನೇ ಎತ್ತಿಕಟ್ಟಿ ದೇಶವನ್ನು ಅಸ್ಥಿರಗೊಳಿಸುವ ಯತ್ನ ಸತತವಾಗಿ ನಡೆಯುತ್ತದೆ. ಉದಾಹರಣೆಗೆ, ಆಗಾಗ ಹೆಡೆಯೆತ್ತುವ ಜನಪರ ಹೆಸರಿನ ಚಳವಳಿಗಳು, ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ, ಶಾಹಿನ್​ಬಾಗ್ ಪ್ರತಿಭಟನೆ, ಅಲ್ಲಲ್ಲಿ ಕಾಣಿಸಿಕೊಳ್ಳುವ ಕೋಮು ಸಂಘರ್ಷ. ಕೊನೆಯೇ ಇಲ್ಲವೇನೋ ಎಂಬ ಆತಂಕ ಸೃಷ್ಟಿಸಿರುವ ಮಣಿಪುರ ರಾಜ್ಯದ ಹಿಂಸಾಚಾರ, ಹಿಂಡನ್​ಬರ್ಗ್ ವರದಿ, ಅದಾನಿ-ಅಂಬಾನಿ ಕಂಪೆನಿಗಳ ವಿರೋಧದ ಹೆಸರಲ್ಲಿ ಆಗಾಗ ಗದ್ದಲ ಎಬ್ಬಿಸುವುದು… ಇವೆಲ್ಲ ಜಾರ್ಜ್ ಸೋರೊಸ್ ಮತ್ತು ಆತನ ಅಧೀನ ಸಂಸ್ಥೆಗಳ ಕಾರ್ಯ ಯೋಜನೆಯ ಭಾಗ. ಈಗಲೂ ಅರ್ಥ ಆಗದೇ ಹೋದರೆ ಏನಾಗುತ್ತೆ? ಮುಂದೆ ಓದಿ.

ಸೋರೊಸ್ ಭಾರತ ಸಂಬಂಧದ ಕೊಂಡಿ: ಅಮೆರಿಕದ ಡೀಪ್ ಸ್ಟೇಟ್ ಮತ್ತು ಜಾರ್ಜ್ ಸೋರೊಸ್ ಹಾಗೂ ಭಾರತದೊಂದಿಗೆ ತತ್ಸಂಬಂಧಿ ಚಟುವಟಿಕೆಯ ನಂಟಿನ ಇತಿಹಾಸ ಮತ್ತು ರಾಜಕೀಯ ಚರ್ಚೆಯ ಕುರಿತು ಗಮನ ಹರಿಸೋಣ. ‘1991ರ ಮೇ ತಿಂಗಳಲ್ಲಿ ರಾಜೀವ್ ಗಾಂಧಿ ಹತ್ಯೆ ನಡೆಯಿತು. ಅದಾದ ಒಂದು ತಿಂಗಳ ನಂತರ ರಾಜೀವ್ ಗಾಂಧಿ ಫೌಂಡೇಶನ್​ನ ಕೆಲಸದ ನಿಮಿತ್ತ ಸೋನಿಯಾ ಗಾಂಧಿ ಅಮೆರಿಕ ಪ್ರವಾಸ ಕೈಗೊಂಡರು. ಅದಕ್ಕೆ ಪೂರಕವಾಗಿ ಅದೇ ವರ್ಷ ಜಾರ್ಜ್ ಸೋರೊಸ್ ನ್ಯೂಯಾರ್ಕ್​ನಲ್ಲಿ ಓಪನ್ ಸೊಸೈಟಿ ಅಮೆರಿಕ ಫೌಂಡೇಶನ್ ಪ್ರಾರಂಭಿಸಿದ. 1994ರ ಡಿಸೆಂಬರ್​ನಲ್ಲಿ ಫೋರಂ ಆಫ್ ಡೆಮಾಕ್ರ್ರಕ್ ಲೀಡರ್ಸ್ ಇನ್ ಏಷಿಯಾ ಪೆಸಿಫಿಕ್ (ಪಿಡಿಎಲ್-ಎಪಿ) ಎಂಬ ಎನ್​ಜಿಒ ಕಾರ್ಯಾರಂಭ ಮಾಡಿತು. ಈ ಸಂಘಟನೆಯ ಒಂದು ಪ್ರಮುಖ ಅಜೆಂಡಾ- ಸ್ವತಂತ್ರ ಕಾಶ್ಮೀರ ಸ್ಥಾಪನೆ. ವಿಶೇಷ ಏನು ಎಂದರೆ ಈ ಪಿಡಿಎಲ್-ಎಪಿ ಸಂಸ್ಥೆಗೆ ಸೋನಿಯಾ ಉಪಾಧ್ಯಕ್ಷೆ ಆಗುತ್ತಾರೆ. ಇದೇ ಸಂಸ್ಥೆಗೆ ಜಾರ್ಜ್ ಸೋರೊಸ್ ಹಣಕಾಸು ನೆರವು ನೀಡುತ್ತಾರೆ.

2004ರಲ್ಲಿ ಯುಪಿಎ ಸರಕಾರ ಭಾರತದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಸುರಕ್ಷಾ ಕೌನ್ಸಿಲ್ ಸ್ಥಾಪಿಸಿ ಅಮೆರಿಕದ ಡೀಪ್ ಸ್ಟೇಟ್ ಮತ್ತು ಜಾರ್ಜ್ ಸೋರೊಸ್​ನೊಂದಿಗೆ ನಿಕಟ ಸಂಬಂಧ ಹೊಂದಿದ್ದ ಅರುಂಧತಿ ರಾಯ್ ಮತ್ತು ಹರ್ಷ ಮಂಧರ್ ಮುಂತಾದವರನ್ನು ಆ ಸಂಘಟನೆಯ ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ಈ ನಡುವೆ ಸೋನಿಯಾ ಹಲವು ಬಾರಿ ಅಮೆರಿಕಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ಅದಕ್ಕೆ ಆರೋಗ್ಯ ತಪಾಸಣೆಯ ಕಾರಣವನ್ನು ನೀಡಲಾಗುತ್ತದೆ. ಅವರ ನಂತರ ರಾಹುಲ್ ಅಮೆರಿಕ, ಬ್ರಿಟನ್, ಯುರೋಪ್ ಪ್ರವಾಸ ಕೈಗೊಳ್ಳುತ್ತಾರೆ. ಆ ವೇಳೆ ಭಾರತ ಮತ್ತು ಮೋದಿ ನೇತೃತ್ವದ ಕುರಿತು ವಿದೇಶಿ ನೆಲದಲ್ಲಿ ನಿಂದನಾತ್ಮಕ ಹೇಳಿಕೆ ನೀಡುತ್ತಾರೆ. ಇದೆಲ್ಲ ಜಾರ್ಜ್ ಸೋರೊಸ್ ಮತ್ತು ಡೀಪ್ ಸ್ಟೇಟ್ ಕಾರ್ಯತಂತ್ರದ ಭಾಗ’ ಎಂದು ಇತ್ತೀಚೆಗೆ ಮುಕ್ತಾಯವಾದ ಸಂಸತ್ ಅಧಿವೇಶನದಲ್ಲಿ ಸಂಸದರಾದ ಸಂಬಿತ್ ಪಾತ್ರ ಮತ್ತು ನಿಶಿಕಾಂತ್ ದುಬೆ ಎಳೆಎಳೆಯಾಗಿ ವಿವರಿಸಿದ್ದರು.

ಇದು ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಆತಂಕ ಎಂದು ರಾಹುಲ್ ಮತ್ತು ಸೋನಿಯಾ ವಿರುದ್ಧ ಗಂಭೀರ ಆರೋಪವನ್ನೂ ಅವರು ಮಾಡಿದರು. ಅಚ್ಚರಿ ಎನಿಸುವುದು ಸಂಸದರಿಬ್ಬರು ಮಾಡಿದ ಆ ಗುರುತರ ಆರೋಪದ ಕುರಿತು ರಾಹುಲ್ ಮತ್ತು ಸೋನಿಯಾ ಮೌನ ವಹಿಸಿರುವುದು. ಅದಕ್ಕಿಂತಲೂ ಆಶ್ಚರ್ಯ ಉಂಟುಮಾಡುವುದು ಸಂಸತ್ ಕಲಾಪದ ಬಳಿಕ ರಾಹುಲ್ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ತಮ್ಮ ಮೇಲೆ ಮಾಡಿರುವ ನಿಂದನಾತ್ಮಕ ಆರೋಪಗಳನ್ನು ಕಡತದಿಂದ ಕೈಬಿಡಲು ಕೋರಿಕೊಂಡಿರುವುದು. ಮತ್ತು ಮುಂದಿನ ಕಲಾಪದಲ್ಲಿ ತಮ್ಮ ಪಕ್ಷ ಸಕ್ರಿಯವಾಗಿ ಭಾಗವಹಿಸುತ್ತದೆ ಎಂಬ ವಚನ ನೀಡಿರುವುದು. ಹಾಗೆ ಮಾಡುವ ಬದಲು ವಾಸ್ತವದಲ್ಲಿ ಕಾಂಗ್ರೆಸ್ ನಾಯಕರಿಗೆ ಎರಡು ಆಯ್ಕೆಗಳಿದ್ದವು. ಆಡಳಿತ ಪಕ್ಷ ಹೊರಿಸಿರುವ ಆರೋಪಕ್ಕೆ ಸಂಸತ್ತಿನಲ್ಲೇ ತಕ್ಕ ಉತ್ತರ ನೀಡುವುದು ಅಥವಾ ಈ ಹೇಳಿಕೆಗಳು ಸುಳ್ಳಾಗಿದ್ದರೆ ಅದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದು. ಕಾಂಗ್ರೆಸ್ ನಾಯಕತ್ವ ಆ ಎರಡೂ ಕೆಲಸವನ್ನು ಮಾಡಲಿಲ್ಲ. ಹಾಗಾದರೆ ಸರಕಾರದ ಬಳಿ ಇರುವ ಸಾಕ್ಷ್ಯಾಧಾರಗಳಿಂದ ಇವರು ಆತಂಕಕ್ಕೊಳಗಾಗಿದ್ದಾರೆಯೇ? ಈ ಪ್ರಶ್ನೆ ಸಹಜವಾಗಿ ಎಲ್ಲರ ಮನಸ್ಸಿನಲ್ಲಿ ಉದ್ಭವವಾಗುತ್ತದೆ.

ಭಾರತದಲ್ಲಿ ಜಾತಿ-ವರ್ಗ ತಾರತಮ್ಯ ಇದೆ, ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಸುರಕ್ಷತೆ ಇಲ್ಲ, ಕಾಶ್ಮೀರ- ಮಣಿಪುರಗಳ ವಿದ್ಯಮಾನ ತೋರಿಸಿ ಈ ದೇಶದಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತುಹೋಗಿದೆ, ರೈತರ ಬವಣೆ ಕೇಳುವವರೇ ಇಲ್ಲ, ರಾಮಮಂದಿರ ಸೋರುತ್ತಿದೆ, ವಕ್ಪ್ ಜಾಗದಲ್ಲಿ ಕುಂಭಮೇಳ ನಡೆಯುತ್ತಿದೆ ಎಂದು ಇಲ್ಲಿ ಮತ್ತು ವಿದೇಶಿ ನೆಲದಲ್ಲಿ ನಮ್ಮವರೇ ಕೆಲವರು ಯಾಕೆ ಬೊಬ್ಬೆ ಹೊಡೆಯುತ್ತಾರೆ? ಏನಿದರ ಮರ್ಮ ಎಂಬುದು ಯೋಚನೆ ಮಾಡುವವರಿಗೆ ಹೊಳೆಯದೇ ಇರದು.

ಚಿರಂಜೀವಿ, ಮಹೇಶ್​ ಬಾಬು… ಯಾರೊಬ್ಬರು ಸ್ಪಂದಿಸುತ್ತಿಲ್ಲ, ಸಾಯುವುದೇ ಉಳಿದಿರುವ ದಾರಿ! ಹಿರಿಯ ನಟಿ ಕಣ್ಣೀರು | Pavala Syamala

Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…