Meerpet case : ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಮೀರ್ಪೇಟೆ ವೆಂಕಟ ಮಾಧವಿ ಕೊಲೆ ಪ್ರಕರಣದಲ್ಲಿ ಕೊನೆಗೂ ಪೊಲೀಸರು ಆಕೆಯ ಪತಿ ಗುರುಮೂರ್ತಿಯನ್ನು ಬಂಧಿಸಿದ್ದಾರೆ. ಇಂದು (ಜ.28) ಬೆಳಗ್ಗೆ ಆರೋಪಿ ಮನೆಯಲ್ಲಿ ಅಪರಾಧ ದೃಶ್ಯ ಮರುನಿರ್ಮಾಣ ಪೂರ್ಣಗೊಳಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿರುವುದಾಗಿ ಮಧ್ಯಾಹ್ನ ದೃಢಪಡಿಸಿದರು.
ಈ ಪ್ರಕರಣದ ಬಗ್ಗೆ ರಾಚಕೊಂಡ ಪೊಲೀಸ್ ಆಯುಕ್ತ ಸುಧೀರ್ ಬಾಬು ಮಾತನಾಡಿದ್ದು, ಸ್ಫೋಟಕ ಸಂಗತಿಗಳನ್ನು ತಿಳಿಸಿದ್ದಾರೆ.
ಜ. 16 ರಂದು ಬೆಳಿಗ್ಗೆ 8 ಗಂಟೆಗೆ ಮಾಧವಿ ಎಚ್ಚರವಾದ ತಕ್ಷಣ ಮಾಧವಿ ಮತ್ತು ಗುರುಮೂರ್ತಿ ನಡುವೆ ಜಗಳ ನಡೆದಿದೆ. ಜಗಳದ ನಂತರ ಗುರುಮೂರ್ತಿ ಮಾಧವಿಯನ್ನು ಕೊಲ್ಲಲು ಮುಂದಾದನು. ಅದಕ್ಕಾಗಿಯೇ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಕೆನ್ನೆಗೆ ಬಾರಿಸಿ, ತಲೆಯನ್ನು ಗೋಡೆಗೆ ಗುದ್ದಿದ್ದಾನೆ. ಇದರಿಂದ ಮಾಧವಿ ತಕ್ಷಣ ಪ್ರಜ್ಞೆ ಕಳೆದುಕೊಂಡಳು. ಬಳಿಕ ಕೊಲ್ಲುವ ಉದ್ದೇಶದಿಂದಲೇ ಗುರುಮೂರ್ತಿ ಆಕೆಯ ಕತ್ತು ಹಿಸುಕಿದ್ದಾನೆ. ಆಕೆ ಸತ್ತಿದ್ದಾಳೆ ಎಂದು ಗೊತ್ತಾದ ಕೂಡಲೇ ಮಾಧವಿಯ ದೇಹದಿಂದ ಬಟ್ಟೆಗಳನ್ನು ತೆಗೆದಿದ್ದಾನೆ. ಬಳಿಕ ಶವವನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗಿ, ಅಡುಗೆ ಮನೆಯಿಂದ ಹರಿತವಾದ ಆಯುಧ ತಂದನು ಎಂದು ಸಿಪಿ ಸುಧೀರ್ ಬಾಬು ಬಹಿರಂಗಪಡಿಸಿದರು.
ಗುರುಮೂರ್ತಿ ಮೊದಲು ಮಾಧವಿಯ ಭುಜಗಳನ್ನು ಕತ್ತರಿಸಿದನು. ಮೃತ ದೇಹದಿಂದ ಕೈಗಳನ್ನು ಬೇರ್ಪಡಿಸಿದನು. ನಂತರ ಕಾಲುಗಳನ್ನು ಮೃತ ದೇಹದಿಂದ ಬೇರ್ಪಡಿಸಿದನು. ಆನಂತರ ಕೈ-ಕಾಲುಗಳನ್ನು ತುಂಡು ತುಂಡಾಗಿ ಕತ್ತರಿಸಿದನು. ಬಳಿಕ ತುಂಡುಗಳನ್ನು ನೀರು ತುಂಬಿದ ಬಕೆಟ್ನಲ್ಲಿ ಹಾಕಿ ವಾಟರ್ ಹೀಟರ್ ಆನ್ ಮಾಡಿ, ದೇಹದ ಭಾಗಗಳನ್ನು ಬೇಯಿಸಿದನು. ನಂತರ ಆ ಭಾಗಗಳನ್ನು ಬಕೆಟ್ನಿಂದ ಹೊರತೆಗೆದು ಒಲೆಯ ಮೇಲೆ ಹಾಕಿದನು. ಮಾಂಸವು ಸುಟ್ಟ ಬಳಿಕ ಮೂಳೆಗಳನ್ನು ಬೇರ್ಪಡಿಸಿ, ಅದನ್ನು ಪುಡಿ ಮಾಡಿದನು. ಇತರ ಕೆಲವು ಸಣ್ಣ ಮೂಳೆಗಳನ್ನು ಡಸ್ಟ್ಬಿನ್ಗೆ ಹಾಕಿದನು. ಮನೆಯ ಬಾಗಿಲು, ಅಡಿಗೆ ಕೋಣೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಟ್ಟೆ ಇದೆಲ್ಲವನ್ನೂ ಮಾಡಿದ್ದಾಗಿ ಆರೋಪಿ ಗುರುಮೂರ್ತಿ ಹೇಳಿದ್ದಾನೆ.
ಇದನ್ನೂ ಓದಿ: ಮೀನು ತೊಳೆದ ನೀರನ್ನು ಎಸೆಯಬೇಡಿ… ಈ ರೀತಿ ಬಳಸಿದರೆ ದುಪ್ಪಟ್ಟು ಲಾಭಗಳನ್ನು ಪಡೆಯಬಹುದು! Fish
ಇಡೀ ದೇಹವನ್ನು ತುಂಡುಗಳಾಗಿ ಮಾಡಲು ಸುಮಾರು 8 ಗಂಟೆಗಳ ಕಾಲ ಕಳೆದಿದ್ದಾನೆ. ಸಾಕ್ಷ್ಯವನ್ನು ನಾಶಪಡಿಸಲು ಡಿಟರ್ಜೆಂಟ್ ಮತ್ತು ಫೀನಾಲ್ ಅನ್ನು ಬಳಸಿದ್ದಾನೆ. ಈ ಘಟನೆಗೆ ಸಂಬಂಧಿಸಿದ ಒಟ್ಟು 16 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂಥಾ ಕೃತ್ಯ ಎಸಗಿದ್ದರೂ ಗುರುಮೂರ್ತಿಗೆ ಮಾತ್ರ ಯಾವುದೇ ಪಶ್ಚಾತ್ತಾಪ ಕಾಡಿಲ್ಲ. ಅವನು ಮಾನವ ರೂಪದಲ್ಲಿದ್ದ ರಾಕ್ಷಸನಂತೆ ವರ್ತಿಸಿದ್ದಾನೆ ಎಂದು ರಾಚಕೊಂಡ ಕಮಿಷನರ್ ಸುದೀರ್ ಬಾಬು ತಿಳಿಸಿದ್ದಾರೆ.
ಪ್ರಕಾಶಂ ಜಿಲ್ಲೆಯ ಗುರುಮೂರ್ತಿ ಮತ್ತು ವೆಂಕಟ ಮಾಧವಿ ಜಿಲ್ಲೆಲಗುಡದಲ್ಲಿ ವಾಸಿಸುತ್ತಿದ್ದರು. ತನ್ನ ಇಬ್ಬರು ಮಕ್ಕಳನ್ನು ತನ್ನ ಸಂಬಂಧಿಕರ ಮನೆಯಲ್ಲಿ ಬಿಟ್ಟುಬಂದು, ಹೆಂಡತಿಯನ್ನು ಕೊಲ್ಲುವ ಉದ್ದೇಶದಿಂದಲೇ ಜಗಳವಾಡಿದ್ದ. ಮಾಧವಿಯನ್ನು ಕೊಂದು, ಅವಳನ್ನು ಸುಟ್ಟು ಬೂದಿ ಮಾಡಿ ಕೊಳಕ್ಕೆ ಎಸೆದ ನಂತರ ಆತ ತನ್ನ ಇಬ್ಬರು ಮಕ್ಕಳನ್ನು ಮನೆಗೆ ಕರೆತಂದನು. ಬಳಿಕ ಮಕ್ಕಳಿಗೆ ತಾಯಿಯ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಿದನು. ನಿಮ್ಮ ಅಮ್ಮ ನನ್ನೊಂದಿಗೆ ಜಗಳವಾಡಿದಳು, ನಮ್ಮನ್ನು ಬಿಟ್ಟು ಮನೆಯಿಂದ ಹೊರಟುಹೋದಳು ಎಂದು ನಂಬಿಸಿದನು.
ಗುರುಮೂರ್ತಿಯನ್ನು ವಶಕ್ಕೆ ಪಡೆದ ನಂತರವೂ ತನಿಖೆಯನ್ನು ಹಾದಿ ತಪ್ಪಿಸಲು ಗುರುಮೂರ್ತಿ ಯತ್ನಿಸಿದ್ದ. ಗುರುಮೂರ್ತಿ ಪಕ್ಕಾ ಪ್ಲಾನ್ ಮಾಡಿಯೇ ಮಾಧವಿಯನ್ನು ಕೊಂದಿದ್ದಾನೆ. ಇದು ಆಕಸ್ಮಿಕ ಕೊಲೆಯಲ್ಲ ಎಂದು ಸುದೀರ್ ಬಾಬು ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
ನಿಮ್ಮ ಹೆಸರು ಬಿ ಅಕ್ಷರದಿಂದ ಶುರುವಾಗುತ್ತಾ? ಹಾಗಾದರೆ ನಿಮ್ಮಲ್ಲಿ ಖಂಡಿತ ಈ ಗುಣಗಳಿವೆ! Name