ಬೆಂಗಳೂರು: ಈತ ಖತರ್ನಾಕ್ ಖಿಲಾಡಿ. ನಗರದ ವಿವಿಧ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸ್ವೈಪಿಂಗ್ ಮಶಿನ್ಗಳನ್ನು ಪಡೆದುಕೊಂಡು ವಂಚಿಸುತ್ತಿದ್ದ ವ್ಯಕ್ತಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರು ನಗರ ಬನಶಂಕರಿ ೨ನೇ ಹಂತದಲ್ಲಿ ಇರುವ ಕಿಡಂಬೀಸ್ ರೆಸ್ಟೊರೆಂಟ್ ಮಾಲೀಕರಾದ ವಿವೇಕ್ ಎಂಬುವವರು ದಿನಾಂಕ ಎಂದಿನಂತೆ ವ್ಯಾಪಾರ ಮಾಡುತ್ತಿರುವಾಗ ಜಯನಗರ ಜೆ.ಎಸ್.ಎಸ್ ಸರ್ಕಲ್ನಲ್ಲಿರುವ ಯೆಸ್ ಬ್ಯಾಂಕ್ನ ಸಿಬ್ಬಂದಿಯೊಬ್ಬರು ಎಂದು ಹೇಳಿಕೊಂಡು ಪಾಪರೆಡ್ಡಿ ಎಂಬುವವರು ಇವರ ರೆಸ್ಟೋರೆಂಟ್ಗೆ ಬಂದಿದ್ದಾರೆ. ಬಂದು ನಿಮ್ಮ ಕಿಡಂಬೀಸ್ ಕಿಚನ್ ರೆಸ್ಟೋರೆಂಟ್ ಹೆಸರಿನಲ್ಲಿ ಪಿ.ಓ.ಎಸ್ ಮಿಷನ್ ಪಡೆಯಲು ಅರ್ಜಿಯನ್ನು ಬಂದಿದ್ದು ಈ ಬಗ್ಗೆ ಬ್ಯಾಂಕ್ ಕಡೆಯಿಂದ ವೆರಿಫಿಕೇಷನ್ಗೆಂದು ಬಂದಿರುವುದಾಗಿ ತಿಳಿಸಿ ನಾನು ಮಾಲೀಕರ ಬಳಿ ಮಾತನಾಡಬೇಕೆಂದು ತಿಳಿಸಿದ್ದಾರೆ.
ಆಗ ಆಶ್ಚರ್ಯಚಕಿತರಾದ ಮಾಲಿಕ ವಿವೇಕ್, ಹೆಚ್ಚಿನ ಮಾಹಿತಿ ಕೇಳಿದ್ದಾರೆ.ಆಗ ಬ್ಯಾಂಕ್ ಸಿಬ್ಬಂದಿ, ಹಿಂದೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತೋರಿಸಿದ್ದಾರೆ. ತಾನು ಈ ಅರ್ಜಿ ಸಲ್ಲಿಸಿದ್ದು ಅಲ್ಲ ಎಂದು ಖಚಿತವಾಗಿ ತಿಳಿದಿದ್ದ ರೆಸ್ಟೊರೆಂಟ್ ಮಾಲಿಕ, ಯಾರು ಅರ್ಜಿ ಸಲ್ಲಿಸಿದ್ದು ಎಂದು ವಿಚಾರಿಸಿದ್ದಾರೆ. ಆಗ ನವನೀತ್ ಪಾಂಡೆ ಹೆಸರು ಮುನ್ನೆಲೆಗೆ ಬಂದಿದೆ.
ಈ ನವನೀತ್ ಪಾಂಡೆ, ಹೋಟೆಲ್- ರೆಸ್ಟೊರೆಂಟ್ಗಳ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಸ್ವೈಪಿಂಗ್ ಮಶಿನ್ಗಾಗಿ ಅರ್ಜಿ ಸಲ್ಲಿಸುತ್ತಿದ್ದ. ಈ ಮೂಲಕ ಆತ, ಹೋಟೆಲ್ ಮಾಲಿಕರಿಗೆ ಅವರದ್ದೇ ಅಂಗಡಿಯ ಹೆಸರಲ್ಲಿ ನಾಮ ಹಾಕುತ್ತಿದ್ದ. ಉತ್ತರ ಪ್ರದೇಶ ಮೂಲದ ಈತ ಬೆಂಗಳೂರಿನಲ್ಲಿ ಇದನ್ನೇ ತನ್ನ ದಂಧೆಯಾಗಿಸಿ ಬಿಟ್ಟಿದ್ದ.
ಬನಶಂಕರಿ ಪೊಲೀಸರು ಈತನ ಮನೆ ಮೇಲೆ ದಾಳಿ ಮಾಡಿ ಬಂಧಿಸಿದಗ ಸಿಕ್ಕ ವಸ್ತುಗಳು ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದವು. ಈತನ ಮನೆಯಿಂದ ಬರೋಬ್ಬರಿ 110 ಕ್ರೆಡಿಟ್ ಕಾರ್ಡ್ ಹಾಗೂ 110 ಡೆಬಿಟ್ ಕಾರ್ಡ್ಗಳನ್ನು ಜಪ್ತಿ ಮಾಡಲಾಗಿದೆ. ಇದರ ಜೊತೆಗೆ 3 ಲ್ಯಾಪ್ಟಾಪ್ಗಳು, 6 ಮೊಬೈಲ್ ಫೋನ್ಗಳು ಸೇರಿದಂತೆ ಅನೇಕ ದಾಖಲೆಗಳು ಲಭ್ಯ ಆಗಿವೆ. ಕಿಡಂಬೀಸ್ ರೆಸ್ಟೊರೆಂಟ್ ಸೇರಿದಂತೆ ಒಟ್ಟು 14 ವಿವಿಧ ನಕಲಿ ಸೀಲುಗಳು ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಬನಶಂಕರಿ ಪೊಲೀಸರ ವಶದಲ್ಲಿ ಆರೋಪಿ ಇದ್ದು ತನಿಖೆ ಮುಂದುವರೆಯುರತ್ತಿದೆ.