Krunal Pandya : ಆರ್ಸಿಬಿ ಆಟಗಾರ ಕೃನಾಲ್ ಪಾಂಡ್ಯ ಆಲ್ರೌಂಡರ್ ಎಂಬುದು ಕ್ರೀಡಾಭಿಮಾನಿಗಳಿಗೆ ತಿಳಿದಿದೆ. ಆದರೆ, ಈವರೆಗೆ ಐಪಿಎಲ್ನಲ್ಲಿ ಬ್ಯಾಟಿಂಗ್ಗಿಂತ ಬೌಲಿಂಗ್ನಲ್ಲಿ ಕೃನಾಲ್ ಹೆಚ್ಚು ಸದ್ದು ಮಾಡುತ್ತಿದ್ದರು. ಆದರೆ, ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬಹಳ ದಿನಗಳ ನಂತರ ಬ್ಯಾಟಿಂಗ್ನಲ್ಲಿ ಕೃನಾಲ್ ಅಮೋಘ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ, ಕೇವಲ 47 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಾಯದಿಂದ ಅಜೇಯ 73 ರನ್ ಗಳಿಸಿ, ಆರ್ಸಿಬಿಯನ್ನು ಗೆಲುವಿನತ್ತ ಕೊಂಡೊಯ್ದರು.
ನಿನ್ನೆ ಆರ್ಸಿಬಿ ಗೆಲುವಿನಲ್ಲಿ ಕೃನಾಲ್ ಪ್ರಮುಖ ಪಾತ್ರ ವಹಿಸಿದರು. ಮೊದಲು ಬೌಲಿಂಗ್ ಮಾಡಿದ ಕೃನಾಲ್, 4 ಓವರ್ಗಳಲ್ಲಿ 28 ರನ್ ಕೊಟ್ಟು 1 ವಿಕೆಟ್ ಪಡೆದುಕೊಂಡು ಉಪಯುಕ್ತ ಪ್ರದರ್ಶನ ನೀಡಿದರು. ಇದಾದ ಬಳಿಕ ಬ್ಯಾಟಿಂಗ್ನಲ್ಲಿಯೂ ಮಿಂಚಿದರು. 3267 ದಿನಗಳ ನಂತರ ಐಪಿಎಲ್ನಲ್ಲಿ ಕೃನಾಲ್ ಬ್ಯಾಟಿನಿಂದ ಬಂದ ಮೊದಲ ಅರ್ಧಶತಕ ಇದಾಗಿದೆ. 137 ಪಂದ್ಯಗಳ ಐಪಿಎಲ್ ವೃತ್ತಿಜೀವನದಲ್ಲಿ ಇದು ಕೃನಾಲ್ ಅವರ ಎರಡನೇ ಅರ್ಧಶತಕವಾಗಿದೆ. ಅಚ್ಚರಿಯ ಸಂಗತಿ ಏನೆಂದರೆ, ಅವರ ಮೊದಲ ಅರ್ಧಶತಕ ಕೂಡ ದೆಹಲಿ ವಿರುದ್ಧವೇ ದಾಖಲಾಗಿತ್ತು. ಇದು ನಡೆದಿದ್ದು, 2016ರ ಐಪಿಎಲ್ ಸೀಸನ್ನಲ್ಲಿ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕೃನಾಲ್, ದೊಡ್ಡ ಸ್ಕೋರ್ಗಳನ್ನು ಗಳಿಸದಿದ್ದರೂ, ಪಂದ್ಯದ ಮೇಲೆ ಪರಿಣಾಮ ಬೀರುವ ಸಣ್ಣ ಇನ್ನಿಂಗ್ಸ್ ಆಡುತ್ತಾರೆ.
ನಿನ್ನೆಯ ಪಂದ್ಯದಲ್ಲಿ 4 ಓವರ್ಗಳಲ್ಲಿ ಕೇವಲ 26 ರನ್ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಆರ್ಸಿಬಿ ಸಂಕಷ್ಟದಲ್ಲಿದ್ದಾಗ ಕೃನಾಲ್ ಪಾಂಡ್ಯ ಅದ್ಭುತ ಅರ್ಧಶತಕದೊಂದಿಗೆ ತಮ್ಮ ಪ್ರಭಾವ ಬೀರಿದರು. ಬೌಲಿಂಗ್ ಮಾತ್ರವಲ್ಲ, ಬ್ಯಾಟಿಂಗ್ನಲ್ಲೂ ನಾನು ತಂಡಕ್ಕೆ ಆಸರೆಯಾಗುತ್ತೇನೆ ಅನ್ನೋದನ್ನು ಸಾಬೀತು ಮಾಡಿದರು. ಈ ಇನ್ನಿಂಗ್ಸ್ನಲ್ಲಿ ಅಗತ್ಯಕ್ಕೆ ತಕ್ಕಂತೆ ಮೊದಲಿಗೆ ನಿಧಾನವಾಗಿ ಆಡಿದ ಕೃನಾಲ್, ಸ್ವಲ್ಪ ಸಮಯದ ಬಳಿಕ ತಮ್ಮ ಗೇರ್ ಬದಲಾಯಿಸಿ, ವಿನಾಶಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೃನಾಲ್ ಮೊದಲ 28 ಎಸೆತಗಳಲ್ಲಿ ಕೇವಲ 25 ರನ್ ಗಳಿಸಿದರು. ಮುಂದಿನ 19 ಎಸೆತಗಳಲ್ಲಿ 48 ರನ್ಗಳನ್ನು ಚಚ್ಚಿದರು. ಇನ್ನಿಂಗ್ಸ್ನ 13 ನೇ ಓವರ್ನಲ್ಲಿ ಮುಖೇಶ್ ಕುಮಾರ್ ಅವರ ಬೌಲಿಂಗ್ನಲ್ಲಿ ಸತತ ಎರಡು ಬೃಹತ್ ಸಿಕ್ಸರ್ಗಳನ್ನು ಬಾರಿಸಿದರು. ನಂತರ, ಕುಲದೀಪ್ ಯಾದವ್ ಅವರ ಬೌಲಿಂಗ್ನಲ್ಲಿ ಒಂದು ಸಿಕ್ಸರ್ ಮತ್ತು ಅಕ್ಷರ್ ಪಟೇಲ್ ಅವರ ಬೌಲಿಂಗ್ನಲ್ಲಿ ಒಂದು ಬೌಂಡರಿ ಬಾರಿಸಿ ಅರ್ಧಶತಕ ಪೂರೈಸಿದರು. ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಕೃನಾಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ವಿರಾಟ್ ಸಲ್ಲುತ್ತದೆ
ಪಂದ್ಯದ ನಂತರ ಮಾತನಾಡಿದ ಕೃನಾಲ್, ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂದು ನನಗೆ ಸಂತೋಷವಾಗಿದೆ. ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭ. ಅವರು ಪ್ರತಿ ಎಸೆತದಲ್ಲೂ ನನ್ನನ್ನು ಪ್ರೋತ್ಸಾಹಿಸುತ್ತಾರೆ. ಈ ಪಂದ್ಯದಲ್ಲೂ ಅದೇ ಆಯಿತು. ವಿರಾಟ್ ಮಾರ್ಗದರ್ಶನದಲ್ಲಿ ನಾನು ಉತ್ತಮ ಇನ್ನಿಂಗ್ಸ್ ಆಡಿದೆ. ಮೊದಲ 20 ಎಸೆತಗಳಲ್ಲಿ ನಾನು ರನ್ ಗಳಿಸಲು ಕಷ್ಟಪಟ್ಟೆ. ಆದರೆ, ವಿರಾಟ್ ನನಗೆ ನೀಡಿದ ಸ್ಫೂರ್ತಿಯಿಂದ, ನಾನು ಲಯಕ್ಕೆ ಬರಲು ಮತ್ತು ದೊಡ್ಡ ಹೊಡೆತಗಳನ್ನು ಆಡಲು ಸಾಧ್ಯವಾಯಿತು. ಈ ಕೀರ್ತಿ ವಿರಾಟ್ಗೆ ಸಲ್ಲುತ್ತದೆ ಎಂದು ಹೇಳಿದರು.
ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರ್ಸಿಬಿ ಬೌಲರ್ಗಳು 162 ರನ್ಗಳಿಗೆ ಸೀಮಿತಗೊಳಿಸಿದರು. ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್ವುಡ್ 2 ವಿಕೆಟ್ ಕಬಳಿಸಿದರು. ಉಳಿದಂತೆ ಯಶ್ ದಯಾಳ್ ಮತ್ತು ಕೃನಾಲ್ ತಲಾ ಒಂದು ವಿಕೆಟ್ ಪಡೆದು ದೆಹಲಿಯನ್ನು ಕಡಿಮೆ ಸ್ಕೋರ್ಗೆ ಸೀಮಿತಗೊಳಿಸಿದರು. ದೆಹಲಿ ಬ್ಯಾಟ್ಸ್ಮನ್ಗಳಲ್ಲಿ ಕೆ.ಎಲ್. ರಾಹುಲ್ (41) ಮತ್ತು ಟ್ರಿಸ್ಟಾನ್ ಸ್ಟಬ್ಸ್ (34) ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಸ್ಕೋರ್ ಗಳಿಸಿ, ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ನೆರವಾದರು.
ನಂತರ ಗುರಿ ಬೆನ್ನಟ್ಟಿದ ಆರ್ಸಿಬಿ ಪವರ್ ಪ್ಲೇನಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡಿತು ಆದರೆ, ನಂತರದಲ್ಲಿ ಚೇತರಿಸಿಕೊಂಡಿತು. ವಿರಾಟ್ ( 51 ರನ್, 47 ಎಸೆತ, 4 ಬೌಂಡರಿ) ಮತ್ತು ಕೃನಾಲ್ ಪಾಂಡ್ಯ ( ಔಟಾಗದೆ 73 ರನ್, 47 ಎಸೆತ, 5 ಬೌಂಡರಿ, 4 ಸಿಕ್ಸರ್) 100ಕ್ಕೂ ಅಧಿಕ ರನ್ಗಳ ಜತೆಯಾಟದಿಂದ ಉತ್ತಮ ಇನ್ನಿಂಗ್ಸ್ ಅನ್ನು ನಿರ್ಮಿಸಿ, ಆರ್ಸಿಬಿಯನ್ನು ಗೆಲುವಿನ ಅಂಚಿಗೆ ಕೊಂಡೊಯ್ದರು. ಕೊನೆಯಲ್ಲಿ ಅಬ್ಬರಿಸಿದ ಟಿಮ್ ಡೇವಿಡ್ (ಅಜೇಯ 19 ರನ್, 5 ಎಸೆತ, 3 ಬೌಂಡರಿ, 1 ಸಿಕ್ಸರ್) ಪಂದ್ಯವನ್ನು ಗೆಲುವಿನೊಂದಿಗೆ ಕೊನೆಗೊಳಿಸಿದರು. (ಏಜೆನ್ಸೀಸ್)