ಬೈಂದೂರು: ಬೈಂದೂರು ಬಂಕೇಶ್ವರದಲ್ಲಿ ತಾಲೂಕು ದೈವಜ್ಞ ಬ್ರಾಹ್ಮಣ ಸಂಘದ ದ್ವಿತೀಯ ವಾರ್ಷಿಕೋತ್ಸವವನ್ನು ವಕೀಲ ನಾಗೇಂದ್ರ ಕುಮಾರ್ ಉದ್ಘಾಟಿಸಿದರು.
ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಂಘ ಅಧ್ಯಕ್ಷ ಮೋಹನ್ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಸೂರಜ್ ಎಜುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ಮಂಜುನಾಥ್ ರೇವಣ್ಕರ್ ಶುಭಾಶಂಸನೆಗೈದರು.
ಸಾಧಕ ಆರು ಮಂದಿ ಸ್ವರ್ಣ ಕುಶಲಕರ್ಮಿಗಳನ್ನು ಸನ್ಮಾನಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಧನಸಹಾಯ ನೀಡಲಾಯಿತು. ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ಇಬ್ಬರು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಸಂಘದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಶೇಟ್ ಶಿರೂರು, ಉಪಾಧ್ಯಕ್ಷ ಅಶೋಕ್ ಶೇಟ್ ನಾಗೂರು, ಕಾರ್ಯದರ್ಶಿ ನಾಗರಾಜ್ ಶೇಟ್ ಉಪ್ಪುಂದ, ದೈವಜ್ಞ ಬ್ರಾಹ್ಮಣ ಮಹಿಳಾ ಸಂಘ ಅಧ್ಯಕ್ಷೆ ವಿದ್ಯಾ ಅಶೋಕ್ ಶೇಟ್, ಕಾರ್ಯದರ್ಶಿ ಕವಿತಾ ಎನ್.ಶೇಟ್ ಉಪಸ್ಥಿತರಿದ್ದರು.
ರೂಪಾ ರೇವಣಕರ್ ಪ್ರಾರ್ಥಿಸಿ, ಖಜಾಂಚಿ ಯು.ವೆಂಕಟೇಶ್ ಶೇಟ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಸ್ಥಾಪಕಾಧ್ಯಕ್ಷ ಕೆ. ರವೀಂದ್ರ ಶೆಟ್ ಪ್ರಸ್ತಾವಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ನಿರೂಪಿಸಿದರು.
ಪದಪ್ರದಾನ ಸಮಾರಂಭ
ಸಂಘದ ಈ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ಶೇಟ್ ಉಪ್ಪುಂದ ಅವರಿಗೆ ನಿರ್ಗಮಿತ ಅಧ್ಯಕ್ಷ ಮೋಹನ್ ರೇವಣ್ಕರ್ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿ ನರೇಂದ್ರ ಶೇಟ್ ಹಾಗೂ ಸಮಿತಿ ಎಲ್ಲ ಪದಾಧಿಕಾರಿಗಳಿಗೂ ಪದ ಪ್ರದಾನಿಸಲಾಯಿತು. ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು.