ಉತ್ತರಪ್ರದೇಶದ ಪವಿತ್ರ ತೀರ್ಥಸ್ಥಳ ತ್ರಿವೇಣಿ ಸಂಗಮದ ಪ್ರಯಾಗರಾಜ್ನಲ್ಲಿ ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯುತ್ತಿರುವ ಮಹಾಕುಂಭವು ಹಲವು ಕೌತುಕ, ವಿಸ್ಮಯಗಳಿಗೆ ಸಾಕ್ಷಿಯಾಗುತ್ತ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಮತ್ತೊಮ್ಮೆ ದರ್ಶಿಸಿದೆ. ಕರ್ನಾಟಕದಿಂದ ವಿಶೇಷ ರೈಲು, ವಿಮಾನ ಮುಂತಾದ ಮಾರ್ಗಗಳ ಮೂಲಕ ಅಸಂಖ್ಯ ಭಾವಿಕರು ಪ್ರಯಾಗರಾಜ್ ತಲುಪಿ ಕುಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅಲ್ಲಿಂದ ಮರಳಿದ ಕನ್ನಡಿಗರ ಅನುಭವ ಹೇಗಿತ್ತು ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.

ದಿವ್ಯಭಾರತದ ಅಂತರ್ದರ್ಶನ
ಪು ರವಿವರ್ಮ ಉಪನ್ಯಾಸಕ
ನಮ್ಮ ಜೀವನದ ನ ಭೂತೋ ನ ಭವಿಷ್ಯತಿ ಎನ್ನಬಹುದಾದ ಆಧ್ಯಾತ್ಮಿಕ ವಿಸ್ಮಯಗಳಲ್ಲಿ ಒಂದು ಈ ಮಹಾ ಕುಂಭಮೇಳ. ಪಾರಂಪರಿಕ ಶ್ರದ್ಧೆಯನ್ನು ಚರ್ಮಚಕ್ಷು-ಅಂತರ್ಚಕ್ಷುಗಳೆರಡರಿಂದಲೂ ಕಾಣಬೇಕೆಂದರೆ ಪ್ರಯಾಗರಾಜ್ ಕ್ಷೇತ್ರಕ್ಕೆ ಬರಬೇಕು. ತಮ್ಮ ಅಧ್ಯಾತ್ಮದ ಹಸಿವನ್ನು ನೀಗಿಸಿಕೊಳ್ಳಲು ಭಾರತಕ್ಕೆ ಬಂದಿರುವ ಪಶ್ಚಿಮದ ಅನೇಕ ವಿದ್ವಾಂಸರು, ದಾರ್ಶನಿಕರು ಭಾರತದ ನಿಗೂಢತೆಯ ಕುರಿತು ರ್ಚಚಿಸಿಯೇ ಇದ್ದಾರೆ. ಆ ನಿಗೂಢತೆಯೇನು? ಎಂದರಿಯಲು ಮಹಾ ಕುಂಭಮೇಳ ದಾರಿ ತೋರುತ್ತದೆ. ಅಲ್ಲಿನ ಅನೇಕ ಅಖಾಡಗಳಲ್ಲಿ ಅನೂಹ್ಯವಾದ ಹಠ ಸಾಧನೆಯನ್ನು ಸುದೀರ್ಘಕಾಲದಿಂದ ಸಹಜವಾಗಿ ಆಚರಿಸುತ್ತಿರುವ ನಾಗಾಸಾಧುಗಳು ಮಹಾ ಕುಂಭಮೇಳದ ಮತ್ತೊಂದು ನಿಗೂಢತೆ. ನಾಗಾ ಸಾಧುವೊಬ್ಬರ ವಸತಿಯಲ್ಲಿ ನಡೆದ ಘಟನೆಯೊಂದು ನನ್ನಲ್ಲಿ ಜಿಜ್ಞಾಸೆ ಹುಟ್ಟುಹಾಕಿತು. ಎಲ್ಲರಂತೆ ನಾನು ನಾಗಾ ಸಾಧುಗಳ ಜಪ, ಪೂಜೆ ಸೇರಿದಂತೆ ಅವರ ಚಟುವಟಿಕೆಗಳನ್ನು ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸುತ್ತಿದ್ದೆ. ಇದನ್ನು ಗಮನಿಸಿದ ತಲೆಯ ಮೇಲೆ ಸುಮಾರು ಎರಡು ಅಡಿ ರುದ್ರಾಕ್ಷಿ ಮಾಲೆಯನ್ನು ಧರಿಸಿಕೊಂಡಿದ್ದ ನಾಗಾ ಸಾಧು ಅಲ್ಲಿದ್ದ ಹತ್ತಿಪ್ಪತ್ತು ಮಂದಿಯ ಪೈಕಿ ನನ್ನನ್ನೇ ದಿಟ್ಟಿಸಿ ಹತ್ತಿರಕ್ಕೆ ಕರೆಯುವ ಸಂಜ್ಞೆ ಮಾಡಿದರು. ಆಗ ನಾಗಾ ಸಾಧುವಿನ ಹತ್ತಿರವೇ ಹೋಗಿ ಕುಳಿತು ಅವರಿಗೆ ನಮಸ್ಕರಿಸಿದೆ. ಅವರು- ‘ನೀನು ಒಳ್ಳೆಯ ಕೈ ಗಡಿಯಾರವನ್ನು ಧರಿಸಿರುವೆ ಬಾಬಾಗೆ ಕೊಡುವೆಯಾ?’ ಎಂದು ಪ್ರಶ್ನಿಸಿದರು. ನಾನು ನಿರುತ್ತರನಾಗಿ ಕುಳಿತೆ. ನಾನು ಧರಿಸಿದ್ದ ತುಂಬು ತೋಳಿನ ಕುರ್ತಾ, ಸ್ವೇಟರ್, ಅದರ ಮೇಲಿನ ಶಾಲು ಇದೆಲ್ಲವನ್ನೂ ಮೀರಿ ನಾನು ಧರಿಸಿದ್ದ ಐ ವಾಚ್ ಅವರಿಗೆ ಕಾಣಿಸಿದ್ದು ಹೇಗೆ ಎಂದು ಯೋಚಿಸುತ್ತಿರುವಷ್ಟರಲ್ಲೇ ಅವರು ತಮ್ಮ ಬಲಗೈಯನ್ನು ಮುಂದಕ್ಕೆ ಚಾಚಿ ‘ಬಾಬಾ ಕೈಗೆ ತೊಡಿಸು’ ಎಂದರು. ನಾನು ಏನು ಹೇಳಬೇಕೆಂದು ತೋಚದವನಾಗಿ ಹಳೆಯದಾಗಿರುವ ಈ ಕೈ ಗಡಿಯಾರವನ್ನು ನೀಡಲು ನಯವಾಗಿ ನಿರಾಕರಿಸಿ, ಕ್ಷಮೆಯನ್ನು ಯಾಚಿಸಿ ಹೊಸದೊಂದನ್ನು ನಾಳೆ ಕೊಡುವುದಾಗಿ ತಿಳಿಸಿದೆ. ‘ನಾಳೆಯನ್ನು ನೋಡಿರುವವರು ಯಾರು?’ ತಕ್ಷಣವೇ ಸಾಧು ನುಡಿದು ಜೋರಾಗಿ ನಕ್ಕರು. ನನ್ನ ಹಣೆಗೆ ವಿಭೂತಿ ಬಳಿದು, ತಲೆಮುಟ್ಟಿ ಆಶೀರ್ವಾದ ಮಾಡಿ ರುದ್ರಾಕ್ಷಿ ಕೊಟ್ಟು ಕಳುಹಿಸಿದರು. ಆ ಮಾತುಕತೆಯನ್ನು ನಾನಿನ್ನು ನನ್ನೊಳಗೆ ವಿಶ್ಲೇಷಣೆ ನಡೆಸುತ್ತಿದ್ದೇನೆ. ಭಾರತದ ಈ ಆಧ್ಯಾತ್ಮಿಕ ಪ್ರಭಾವಳಿ ಇಡೀ ಜಗತ್ತನ್ನು ಆಕರ್ಷಿಸಿದೆ, ಪ್ರಭಾವಿಸಿದೆ, ಸತ್ಯದ ಹುಡುಕಾಟದಲ್ಲಿ ತೊಡಗಿಸಿದೆ. ಕೊಂಚ ಧ್ಯಾನಪೂರ್ವಕ ಮನಸ್ಸಿನಿಂದ ಇಲ್ಲಿಗೆ ಬಂದವರಿಗೆ ಮಾತ್ರವೇ ಇಲ್ಲಿರುವ ಶಕ್ತಿಯ ಸಂಪರ್ಕವಾಗುತ್ತದೆ.
ಮೌಲ್ಯಗಳ ಸಾಕಾರ
ಎಚ್ ಜಿ ಎಂ ಗುರುಬಸವರಾಜ್ ಕೂಡ್ಲಿಗಿ
ಮಹಾ ಕುಂಭಮೇಳವನ್ನು ಕಣ್ಣು ತುಂಬಿಕೊಳ್ಳುವ ಅದೃಷ್ಟ ನನ್ನದಾಗಿದ್ದು ಪೂರ್ವಜನ್ಮದ ಪುಣ್ಯವೇ ಸರಿ. ಪ್ರಯಾಗರಾಜ್ನಲ್ಲೀಗ ನಮ್ಮ ಆಧ್ಯಾತ್ಮಿಕತೆಯ ಉತ್ತುಂಗತೆ, ಪ್ರವಾಹವನ್ನೇ ಕಂಡೆ. ಧರ್ಮ, ಜಾತಿ, ಅಂತಸ್ತು… ಹೀಗೆ ಯಾವುದೇ ತರತಮಗಳಿಗೆ ಅಲ್ಲಿ ಕಿಂಚಿತ್ತೂ ಜಾಗವಿಲ್ಲ. ನಾನು, ನನ್ನದು ಎಂಬ ಸ್ವಾರ್ಥ, ಮೋಹ ಕಳಚಿ ಎಲ್ಲರಲ್ಲೂ, ಎಲ್ಲೆಡೆಯೂ ತುಂಬಿ ತುಳುಕುತ್ತಿದದ್ದು ಭಕ್ತಿ-ಭಾವ, ಪ್ರಸನ್ನತೆ, ಸಂತೃಪ್ತಿಯ ಪರಾಕಾಷ್ಠೆಯಷ್ಟೇ. ಈ ನೆಲದಲ್ಲಿ ನಡೆದಾಡಿದ ಪ್ರತಿಕ್ಷಣ ಕಾಣುವ ಅಸಂಖ್ಯಾತ ಸಾಧು-ಸಂತರು, ಅಘೊರಿಗಳು, ಆಶ್ರಮಗಳು, ಕಿವಿಗೆ ತುಂಬುವ ಪ್ರವಚನಗಳು… ಹೀಗೆ ಎಲ್ಲವೂ ಅನನ್ಯ, ಅನಿರ್ವಚನೀಯ ಅನುಭವ, ಅನುಭೂತಿ ನೀಡುತ್ತಿತ್ತು. ಬಾಬಾಗಳು, ಅವರ ಪೋಷಾಕುಗಳು, ಚಿತ್ರವಿಚಿತ್ರ ವರ್ತನೆಗಳು ಬೆರಗು ಮೂಡಿಸಿ, ಮೈಮನ ರೋಮಾಂಚನಗೊಳಿಸಿದವು. ಇಲ್ಲಿನ ವಿಶಾಲ ರಸ್ತೆಗಳು, ಶೌಚಗೃಹ, ಊಟ, ಕುಡಿಯುವ ನೀರು, ಟೆಂಟು, ರಕ್ಷಣಾ ವ್ಯವಸ್ಥೆ… ಎಲ್ಲವೂ ಅಚ್ಚುಕಟ್ಟು. ಬರುವ ಲಕ್ಷ ಲಕ್ಷ ಹಿಂದೂ ಯಾತ್ರಿಕರಿಗೆ ಎಳ್ಳಷ್ಟೂ ಕೊರತೆಯಾಗದಂತೆ ಸುವ್ಯವಸ್ಥೆ ಮಾಡಿರುವುದು ಸೋಜಿಗವೆನಿಸಿತು. ಗಂಗಾನದಿಯ ಹರಿವಿನಲ್ಲಿ ಮರುಕಳಿಸಿರುವ ಶುದ್ಧತೆ, ಪಾವಿತ್ರ್ಯ, ಪ್ರಯಾಗರಾಜ್ನಲ್ಲಿ ನಿರ್ವಹಿಸಲಾಗುತ್ತಿರುವ ಸ್ವಚ್ಛತೆ ಮತ್ತು ನೈರ್ಮಲ್ಯ ಬಲು ಅಚ್ಚರಿ ತಂದಿತು. ಸ್ಥಳೀಯ ಆಡಳಿತ ಹಾಗೂ ರಾಜ್ಯ ಸರ್ಕಾರ ಮಾಡಿರುವ ವ್ಯವಸ್ಥೆ ಕಾರಣದಿಂದಲೇ ಈ ಮಹಾ ಕುಂಭಮೇಳ ಇಷ್ಟೊಂದು ಯಶಸ್ವಿಯಾಗಿ ಜರುಗುತ್ತಿದೆ. ನಿತ್ಯ ಇಲ್ಲಿಗೆ ಭೇಟಿ ನೀಡುವ, ಹಗಲಿರುಳು ಓಡಾಡುವ ಲಕ್ಷ ಲಕ್ಷ ಜನರು, ಅವರಲ್ಲಿ ಕಾಣುವ ಭಾರತೀಯ ಸನಾತನ ಪರಂಪರೆ, ಸಂಸ್ಕೃತಿ ಕುರಿತಾದ ಕೌತುಕ, ಸಮರ್ಪಣಾಭಾವ ವಿಸ್ಮಯ ಮೂಡಿಸಿತು. ಸನಾತನ ಆಚರಣೆ, ಆಚಾರ-ವಿಚಾರಗಳಲ್ಲಿಯ ಅಡಕವಾಗಿರುವ ವೈಜ್ಞಾನಿಕ ಅಂಶಗಳನ್ನು ಅರ್ಥೈಸಿಕೊಂಡು, ಒಪ್ಪಿ ಅಪ್ಪಿಕೊಳ್ಳುವ ಪರಿಯ ಕಂಡು ಭಾವಪರವಶನಾದೆ. ಇದನ್ನೆಲ್ಲ ಕಾಣುತ್ತಿದ್ದರೆ ನಮ್ಮ ದೇಶದಲ್ಲಿ ಆಧ್ಯಾತ್ಮಿಕ ಬಡತನವಿದೆ ಎಂಬ ದೂರು ಒಂದು ಕ್ಷಣ ಮಿಥ್ಯ ಎನಿಸಿತು.
ಶ್ರೇಷ್ಠ ಅನುಭೂತಿ
ಪ್ರಶಾಂತ್ ರಾವ್ ದೋಣಿಪಾಡಿ ಸಾಮಾಜಿಕ ಕಾರ್ಯಕರ್ತರು ಪ್ರಜ್ಞಾ ಪ್ರವಾಹ
ಮಹಾಕುಂಭಮೇಳವು ಒಂದು ಅನುಭವವನ್ನು ಮೀರಿದ ಅನುಭೂತಿಯಾಗಿದ್ದು, ಅದರ ವ್ಯವಸ್ಥೆಗಳು ಮತ್ತು ಶ್ರದ್ಧೆ ನಮ್ಮ ಭಾರತದ ಪರಂಪರೆ ಮತ್ತು ಅಖಂಡತೆಯ ಪ್ರತೀಕವಾಗಿವೆ. ಪೌರಕಾರ್ವಿುಕರು ಮತ್ತು ಸಾಮಾನ್ಯ ಜನರು ತಮ್ಮ ಕುಟುಂಬದ ಕಾರ್ಯಕ್ರಮವೇನೋ ಎಂಬಂತೆ ಆಸ್ಥೆಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಕೋಟಿ ಕೋಟಿ ಜನರು ಈ ನೆಲದ ಮೇಲೆ ಓಡಾಡುತ್ತಿದ್ದರೂ, ಎಲ್ಲೂ ಗೊಂದಲವಿಲ್ಲ. ಮಹಾಕುಂಭಮೇಳದಲ್ಲಿ ನಿರ್ವಿುಸಿದ ಸೇತುವೆ ರಾಮಸೇತು ಅಲ್ಲ ಇದು ಯೋಗಿ ನಿರ್ವಿುಸಿದ ಸೇತು. ಯೋಗಿ ಆದಿತ್ಯನಾಥ ಸರ್ಕಾರ ನಿರ್ವಿುಸಿರುವ ಸೇತುವೆ ಈಗ ಕೋಟ್ಯಂತರ ಭಕ್ತರಿಗೆ ಅನುಕೂಲವಾಗಿ ಪರಿಣಮಿಸಿದ್ದು, ಸುಗಮ ಸಂಚಾರಕ್ಕೆ ಹಾಗೂ ಸ್ನಾನಘಟ್ಟಕ್ಕೆ ತೆರಳಲು ಪೂರಕವಾಗಿದೆ. ಆ ಗಂಗೆಯ ದಿವ್ಯ ಪ್ರವಾಹ, ಯಮುನೆಯ ಆರ್ಭಟ ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಕುಂಭಮೇಳಕ್ಕೆ ಪ್ರಯಾಣಿಸುವವರು ಸಂಗಮವನ್ನು ತಲುಪಲು ಸುಮಾರು 5-7 ಕಿ.ಮೀ ನಡೆಯಬೇಕು. ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿಯ ಸಂಗಮದಲ್ಲಿ ಸ್ನಾನ ಮಾಡಿದ ನಂತರ ವಿಜ್ಞಾನವು ಆಧ್ಯಾತ್ಮಿಕತೆಯನ್ನು ಭೇಟಿ ಮಾಡುವುದನ್ನು ನಿಜವಾಗಿಯೂ ಕಂಡೇವು. ಭಸ್ಮದ ಪರಿಮಳ, ನದಿಯ ಭೋರ್ಗರೆತ, ದೀಪದ ಪ್ರಜ್ವಲನೆ, ಸಂತರ ಅಖಾಡಗಳ ಸಮಾಗಮ, ಎಲ್ಲಿ ನೋಡಿದರೂ ‘ಹರ ನಮಃ ಪಾರ್ವತಿ ಪತಯೇ ಮಹಾದೇವ’ ಘೊಷಗಳು ಸಂಚಲನ ಮೂಡಿಸದೆ ಇರದು. ಒಬ್ಬ ವ್ಯಕ್ತಿ ಅನಾರೋಗ್ಯ ಪೀಡಿತನಾದಾಗ ಔಷಧ ಸೇವಿಸುವುದು ವಾಡಿಕೆ. ಆದರೆ, ಈಗ ಎಂಥ ಅದ್ಭುತ ಅದೃಷ್ಟವೆಂದರೆ ಇಡೀ ಮನುಕುಲಕ್ಕೆ ಅಮೃತವೆಂಬ ದಿವ್ಯ ಔಷಧ ಕುಂಭಮೇಳದ ಮೂಲಕ ಸಿಗುತ್ತಿದೆ. ಅಂದರೆ, ಮನುಷ್ಯರ ಮನಸ್ಸುಗಳಿಗೆ, ಆತ್ಮಗಳಿಗೆ ಚಿಕಿತ್ಸೆ ದೊರೆಯುತ್ತಿದೆ. ಸಶಕ್ತ ಅರ್ಥವ್ಯವಸ್ಥೆಯೂ ಇಲ್ಲಿ ಮೈದೆಳೆದಿದೆ.
ಬೈಕಲ್ಲೇ ತಲುಪಿದ ಯುವಕರು!
ವಿಜಯನಗರ ಜಿಲ್ಲೆಯ ಕೊಟ್ಟೂರಿನ ಕನಕ ಕೋಟಿ ಕೊಟ್ಟೂರು ಮತ್ತು ಎಸ್.ಎಸ್.ಪ್ರವೀಣ್ ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿಪೂರ್ಣ ವಿಡಿಯೋ, ರೀಲ್ಸ್ಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹತ್ತಾರು ಸಾವಿರ ಫಾಲೋವರ್ಸ್ಗಳನ್ನು ಹೊಂದಿರುವ ಸೃಜನಶೀಲ ಯುವಕರು. ಎಲ್ಲರೂ ಪ್ರಯಾಗರಾಜ್ ತಲುಪಲು ವಿವಿಧ ಮಾರ್ಗಗಳನ್ನು ಶೋಧಿಸುತ್ತಿದ್ದರೆ, ಈ ಇಬ್ಬರು ಯುವಕರು ಹೊಸಪೇಟೆಯಿಂದ ಬೈಕ್ ಏರಿಯೇ ಮಹಾರಾಷ್ಟ, ಮಧ್ಯಪ್ರದೇಶ ಮೂಲಕ ಸಾಗಿ ಉತ್ತರಪ್ರದೇಶವನ್ನು ತಲುಪಿ ಪ್ರಯಾಗರಾಜ್ನ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ‘ಕರಿಮಣಿ ಮಾಲೀಕ’ ರೀಲ್ಸ್ ಮೂಲಕ ಗಮನ ಸೆಳೆದ ಕನಕ ಕೊಟ್ಟೂರು ತಮ್ಮ ಹೊಸಬೈಕ್ನ ಮೊದಲಯಾತ್ರೆಯಾಗಿ ಕುಂಭಮೇಳಕ್ಕೆ ಹೋಗಿದ್ದಕ್ಕೆ ಸಾರ್ಥಕತೆ ಅನುಭವಿಸುತ್ತಿದ್ದಾರೆ. ಪ್ರಯಾಗರಾಜ್ನಿಂದ ವಾರಾಣಸಿ ತಲುಪಿದ ಕನಕ ಮತ್ತು ಪ್ರವೀಣ್ ತಮ್ಮ ಅನುಭವವನ್ನು ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ.
ತುಂಬ ಖುಷಿಯನ್ನು ಅನುಭವಿಸಿದೆವು. ಕುಂಭಮೇಳದ ಬಗ್ಗೆ ಕೇಳಿ ಮಾತ್ರ ಗೊತ್ತಿತ್ತು. ನಾಗಾ ಸಾಧುಗಳನ್ನಂತೂ ಸಿನಿಮಾದಲ್ಲಿ ಮಾತ್ರ ನೋಡಿದ್ದೆವು. ಇಲ್ಲಿ ಬಂದ ಮೇಲೆ ಹೊಸ ಪ್ರಪಂಚವನ್ನೇ ಪ್ರವೇಶಿಸಿದಂತಾಯಿತು. ಎಲ್ಲೆಲ್ಲೂ ಶಿವನ ಭಕ್ತರು, ಸಾಧುಸಂತರು ಇಲ್ಲಿನ ವಾತಾವರಣವನ್ನೇ ಆಹ್ಲಾದಗೊಳಿಸಿದ್ದಾರೆ. ಪ್ರಯಾಗರಾಜ್ಗೆ ಆಗಮಿಸಿದ ಕೂಡಲೇ ತನ್ನಿಂದ ತಾನೇ ಧನ್ಯತೆಯ, ಸಕಾರಾತ್ಮಕತೆಯ ಭಾವ ಆವರಿಸಿಕೊಂಡಿತು. ಅದನ್ನು ಅನುಭವಿಸುವ ಪರಿಯೇ ವಿಶಿಷ್ಟ. ಕೊರೆಯುವ ಚಳಿಯನ್ನು ಲೆಕ್ಕಿಸದೆ ಲಕ್ಷಾಂತರ ಜನರು ಪುಣ್ಯಸ್ನಾನ ಮಾಡುತ್ತಿದ್ದ ದೃಶ್ಯ ಸನಾತನ ಧರ್ಮದ ಬಗೆಗಿನ ಗೌರವವನ್ನು ಇಮ್ಮಡಿಗೊಳಿಸಿತು. ನಾವು ಒಂದಲ್ಲ ಎರಡು ಬಾರಿ ಸಂಗಮದಲ್ಲಿ ಸ್ನಾನ ಮಾಡಿ ಪುನೀತ ಭಾವ ಅನುಭವಿಸಿದೆವು. ಇಲ್ಲಿ ಎಲ್ಲ ವ್ಯವಸ್ಥೆಗಳಿವೆ. ಆದರೆ, ಜನರಿಗೆ ಸಂಗಮದ ಸ್ನಾನ ನೀಡುವ ಆನಂದವೇ ವಿಶಿಷ್ಟ. ಶಾಹಿ ಸ್ನಾನ ದಿನಾಂಕಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಸಂಗಮದ ಸಮೀಪದವರೆಗೆ ವಾಹನಗಳು ತೆರಳಲು ಅವಕಾಶವಿದೆ. ವಸತಿಗೆ ಟೆಂಟ್ ವ್ಯವಸ್ಥೆಯೇ ಸೂಕ್ತ. ಆದರೆ, ಇಲ್ಲಿ ಬರುವವರು ಟೆಂಟ್ಗಳನ್ನು ಮೊದಲೇ ಬುಕ್ ಮಾಡಿಕೊಳ್ಳಬೇಕು. ಹೋಟೆಲ್ ರೂಮುಗಳ ಬಾಡಿಗೆ ಸಿಕ್ಕಾಪಟ್ಟೆ ದುಬಾರಿ. ವಸತಿ ವ್ಯವಸ್ಥೆ ಮಾಡಿಕೊಳ್ಳದೆ ಬರಬೇಡಿ, ಅಲ್ಲಿ ಹೋದ ಮೇಲೆ ನೋಡಿದರಾಯಿತು ಎಂಬ ಉದಾಸೀನ ಬೇಡ. ಮಹಿಳೆಯರು ಗುಂಪಲ್ಲಿ ಬರುವುದಾದರೆ ಬೆಳಗ್ಗೆಯೇ ತಲುಪಿ ಸಂಜೆಯವರೆಗೂ ಇದ್ದು ತೆರಳುವುದು ಸೂಕ್ತ.
ಇಷ್ಟು ಸಂಖ್ಯೆಯ ನಾಗಾಸಾಧುಗಳು ಕುಂಭಮೇಳ ಮುಗಿದ ತಕ್ಷಣ ಎಲ್ಲಿಗೆ ಹೋಗುತ್ತಾರೆ ಎಂಬುದು ಪ್ರಶ್ನೆಯೇ. ಅದೇನಿದ್ದರೂ, 144 ವರ್ಷಗಳಿಗೊಮ್ಮೆ ಬರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡಿದ್ದು ನಮ್ಮ ಜೀವನದಲ್ಲೇ ಮರೆಯಲಾರದ ಒಳ್ಳೆಯ ಅನುಭವವನ್ನು ಕೊಟ್ಟಿದೆ. ಸನಾತನ ಧರ್ಮದ ಶಕ್ತಿಗೆ, ಇಲ್ಲಿನ ಅಧ್ಯಾತ್ಮಕ್ಕೆ ನಮೋನಮಃ.
ಮಹಾಕುಂಭ ಮೇಳದಿಂದ ಹೊರನಡೆದ ಐಐಟಿ ಬಾಬಾ! ಇದಕ್ಕೆ ಕಾರಣ ವದಂತಿಗಳು? ಕಡೆಗೂ ಸ್ಪಷ್ಟನೆ ಕೊಟ್ಟ ಅಭಯ್ ಸಿಂಗ್ | IIT Baba
ಮಹಾ ಕುಂಭಮೇಳದಲ್ಲಿ ಕಣ್ಮನ ಸೆಳೆದ ಬೆಕ್ಕಿನ ಕಣ್ಣಿನ ಹುಡುಗಿ…ಅದೇ ಕಣ್ಣು Mahakumbh Mela