ಬೆಂಗಳೂರು: ಪಿಎಫ್ಐ ಸಂಘಟನೆ ಮೇಲಿದ್ದ 176 ಕೇಸ್ಗಳನ್ನು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಹಿಂಪಡೆದುಕೊಂಡಿತ್ತು. ಇದೀಗ ಬಜರಂಗದಳವನ್ನು ಬ್ಯಾನ್ ಮಾಡುಲು ಮುಂದಾಗಿದೆ. ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಇಂತಹ ಕೆಲಸ ಮಾಡುತ್ತಿದೆ. ಇದೆಲ್ಲ ನೋಡಿದರೆ ಕಾಂಗ್ರೆಸ್ ಪಕ್ಷವನ್ನೇ ನಿಷೇಧ ಮಾಡಬೇಕು ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಹನುಮಾನ್ ಚಾಲೀಸಾ ಪಠಣೆ
ಬಜರಂಗದಳವನ್ನು ಬ್ಯಾನ್ ಮಾಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿರುವುದನ್ನು ವಿರೋಧಿಸಿ ವಿವಿಧ ಹಿಂದು ಸಂಘಟನೆಗಳ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಹನುಮಾನ್ ಚಾಲೀಸಾ ಪಠಣ ಮಾಡಿದ್ದಾರೆ. ಬೆಂಗಳೂರಿನ ಬಾಪೂಜಿ ನಗರದ ಗಾಳಿ ಆಂಜನೇಯ ದೇವಸ್ಥಾನದಲ್ಲಿ ನಡೆದ ಹನುಮಾನ್ ಚಾಲೀಸಾ ಪಠಣದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಂಡಿದ್ದಾರೆ.
ವಿದ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ
ಚಕ್ರವರ್ತಿ ಸೂಲಿಬೆಲೆ ಮಾತನಾಡುತ್ತಾ, ಬಜರಂಗದಳ ಯಾವುದೇ ವಿದ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಹೀಗಿರುವಾಗ ಪಿಎಫ್ಐ ಸಂಘಟನೆಯೊಂದಿಗೆ ಯಾಕಾಗಿ ಹೋಲಿಕೆ ಮಾಡುತ್ತಾರೋ ಗೊತ್ತಿಲ್ಲ. ಪಿಎಫ್ಐನೊಂದಿಗೆ ಭಜರಂಗದಳವನ್ನು ತುಲನೆ ಮಾಡಿರುವುದು ಸರಿಯಲ್ಲ. ಮೊದಲಿನಿಂದಲೂ ಹಿಂದುತ್ವವನ್ನು ವಿರೋಧ ಮಾಡಿಕೊಂಡೇ ಕಾಂಗ್ರೇಸ್ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.