ಹನ್ನೆರಡನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು. ಅವರ ಜೀವನ-ಬೋಧನೆಗಳು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂಬುದನ್ನು ನಾಡಿನ ಅನೇಕ ಮಠಾಧೀಶರು, ಗಣ್ಯರು ‘ಬಸವ ಜಯಂತಿ’ಯ ಈ ಶುಭ ಸಂದರ್ಭದಲ್ಲಿ ವಿವರಿಸಿದ್ದಾರೆ.
ಊರ ಮುಂದೆ
ಹಾಲ ಹಳ್ಳ ಹರಿವುತ್ತಿರಲು,
ಒರೆಯಾವಿನ ಬೆನ್ನ
ಹರಿಯಲದೇಕಯ್ಯಾ?
ಲಜ್ಜೆಗೆಡಲೇಕೆ
ನಾಣುಗೆಡಲೇಕೆ
ಕೂಡಲಸಂಗಮದೇವನುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ?
| ಬಸವಣ್ಣ
ಬಸವಣ್ಣನವರ ಘನ ವ್ಯಕ್ತಿತ್ವ
ಭಕ್ತಿ ಭಂಡಾರಿ ಬಸವಣ್ಣನವರು ಒಬ್ಬ ಶ್ರೇಷ್ಠ ಸಮಾಜ ಸುಧಾರಕರು. ಶೈವ ಬ್ರಾಹ್ಮಣ ಕುಲದಲ್ಲಿ ಜನಿಸಿದ ಬಸವಣ್ಣನವರು ವೀರಶೈವ ಧರ್ಮದ ಉದಾತ್ತ ತತ್ವಗಳಿಗೆ ಮಾರು ಹೋಗಿ ವೀರಶೈವ ಧರ್ಮವನ್ನು ಸ್ವೀಕರಿಸಿದರು. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ವೀರಶೈವ ಧರ್ಮ ಸಿದ್ಧಾಂತವನ್ನು ಅರ್ಥೈಸಿಕೊಂಡು ಆಚರಣೆ ಮಾಡಿಕೊಂಡು ಬಂದ ಮಹಾನುಭಾವ. ತಾವು ಕಂಡ ಸತ್ಯ ಸಂಗತಿಗಳನ್ನು ವಚನಗಳ ಮೂಲಕ ಜನ ಮನದ ಉಜ್ವಲ ಭವಿಷ್ಯಕ್ಕಾಗಿ ಮನವರಿಕೆ ಮಾಡಿಕೊಟ್ಟರು. ಅವರು ಹೇಳಿದ ಸಪ್ತ ಸೂತ್ರಗಳಲ್ಲಿ ಒಂದಾದ ಹುಸಿಯ ನುಡಿಯಲು ಬೇಡ ಈ ಒಂದು ಮಾತು ಅನುಸರಿಸಿ ನಡೆದರೆ ನಾಡು ಧರ್ಮ ಉದ್ಧಾರ. ಏಣಿಯ ಮೆಟ್ಟಿಲುಗಳಿಗೆ ಬೆಂಕಿಯಿಟ್ಟು ಚಳಿ ಕಾಯಿಸಬಾರದು. ತಾತ್ಕಾಲಿಕ ಸುಖಕ್ಕಾಗಿ ಆದರ್ಶಗಳನ್ನು ಬಲಿ ಕೊಡಬಾರದೆಂಬ ಬಸವಣ್ಣನವರ ದೂರ ದೃಷ್ಟಿ ಅದ್ಭುತವಾದುದು. ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಶ್ರೇಷ್ಠವೆಂದು ಸಾರಿದ ಬಸವಣ್ಣನವರು ಜಾತಿ ಮತ ಪಂಥಗಳೆನ್ನದೇ ಎಲ್ಲರ ಉನ್ನತಿಗಾಗಿ ಸದಾ ಶ್ರಮಿಸಿದ ಚಿಂತಕ. ಬಸವಣ್ಣನವರ ಹೆಸರಿನಲ್ಲಿ ಇಂದು ಸಮಾಜ ಧರ್ಮ ಛಿದ್ರಗೊಳಿಸುವ ಜನರಿದ್ದಾರೆ. ಅಂಥವರ ಬಗೆಗೆ ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಲಿ. ಬಸವಣ್ಣನವರ ಜಯಂತಿ ದಿನವೇ ಕೇದಾರ ಪೀಠದ ಶ್ರೀ ಜಗದ್ಗುರು ಏಕೋರಾಮಾರಾಧ್ಯರ ಜಯಂತಿ ಇದೆ ಎಂಬುದನ್ನು ಧರ್ಮ ಬಾಂಧವರು ಮರೆಯಬಾರದಷ್ಟೆ.
| ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಬಾಳೆಹೊನ್ನೂರು
ಬಸವ ಬೋಧನೆಗಳಿಗೆ ವಿನಾಶವೆಂಬುದಿಲ್ಲ: ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು