ಕೋಟ: ಅಂಬೇಡ್ಕರ್ ಜೀವನ ಚರಿತ್ರೆ ವಿಶಿಷ್ಟವಾಗಿದ್ದು, ಅವರ ಚಿಂತನೆಗಳು ದೇಶದ ಹಿತಕ್ಕೆ ಪೂರಕವಾಗಿದ್ದವು ಎಂದು ಕೋಟ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಸಂಜೀವ ಗುಂಡ್ಮಿ ಅಭಿಪ್ರಾಯಪಟ್ಟರು.
ಕೋಟ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಮಹಿಳಾ ಮಂಡಲದ ನೇತೃತ್ವದಲ್ಲಿ ಪಡುಕರೆ ಇಂಡಿಕಾ ಕಲಾ ಬಳಗ ಸಹಯೋಗದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಜಿಲ್ಲಾ ದಲಿತ ಸಮಿತಿ ಮುಖಂಡ, ವಕೀಲ ಟಿ.ಮಂಜುನಾಥ ಗಿಳಿಯಾರು ಮಾತನಾಡಿ, ಅಂಬೇಡ್ಕರ್ ತಾವು ಅನುಭವಿಸಿದ ನೋವುಗಳನ್ನು ಮುಂದಿನ ತಲೆಮಾರು ಅನುಭವಿಸದಂತೆ ಸಂವಿಧಾನದ ಮೂಲಕ ನ್ಯಾಯ ಕಲ್ಪಿಸಿದ್ದಾರೆ ಎಂದರು. ಪಂಚವರ್ಣ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಇಂಡಿಕಾ ಕಲಾ ಬಳಗದ ಅಧ್ಯಕ್ಷ ಜಯರಾಮ ಶೆಟ್ಟಿ ಮಣೂರು ಉಪಸ್ಥಿತರಿದ್ದರು.
ಇಂಡಿಕಾ ಕಲಾ ಬಳಗದ ಪ್ರಭಾಕರ್ ಮಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚವರ್ಣ ಸದಸ್ಯ ಮಹೇಶ್ ಬೆಳಗಾವಿ ಸ್ವಾಗತಿಸಿದರು, ಇಂಡಿಕಾ ಕಲಾ ಬಳಗದ ಸಂಚಾಲಕ ಸಂತೋಷ್ ಕುಮಾರ್ ಕೋಟ ನಿರೂಪಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.