ಕೊಕ್ಕರ್ಣೆ: ಸೂರಾಲು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಏ.16ರಿಂದ 19ರ ವರೆಗೆ ಜರುಗಲಿದೆ. 16ರಂದು ಬೆಳಗ್ಗೆ ಪಂಚ ಬ್ರಹ್ಮಕಲಶ, ಸ್ನಪನಾಧಿವಾಸ ಹೋಮ, ರಥಾಧಿವಾಸಹೋಮ, ರಥ ಸಂಪ್ರೋಕ್ಷಣೆ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ 12.02ಕ್ಕೆ ಅಭಿಜಿನ್ ಲಗ್ನ ಸುಮೂಹೂರ್ತದಲ್ಲಿ ಶ್ರೀ ದೇವರ ಶ್ರೀಮನ್ಮಹಾರಥೋತ್ಸವ ನಡೆಯಲಿದೆ. ರಾತ್ರಿ ಭೂತಬಲಿ, ಶಯನೋತ್ಸವ ನೆರವೇರಲಿದೆ. ಪೆರ್ಡೂರು ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ದಕ್ಷಯಜ್ಞ-ಚಂದ್ರಹಾಸ-ಗದಾಯುದ್ಧ ಪ್ರದರ್ಶನಗೊಳ್ಳಲಿದೆ.
17ರಂದು ಬೆಳಗ್ಗೆ ಪ್ರಬೋಧೋತ್ಸವ, ಪಂಚಾಂಗ ಶ್ರವಣ, ಅಷ್ಟಾವಧಾನ ಸೇವೆ, ತುಲಾಭಾರ, ವಸಂತೋತ್ಸವ, ಮಹಾಮಂತ್ರಾಕ್ಷತೆ, ಅಂಕುರ ಪ್ರಸಾದ, ಪಂಚಬ್ರಹ್ಮಕಲಶ, ಸ್ನಪನಾಧಿವಾಸಹೋಮ, ಯಾತ್ರಾಹೋಮ, ಕಲಶಾಭಿಷೇಕ, ಮಹಾಪೂಜೆ, ಸಂಜೆ ವಾರುಣ ಹೋಮ, ಚೂರ್ಣೋತ್ಸವ, ಅವಭೃತ ಸ್ನಾನ, ದೀಪೋತ್ಸವ, ಜಾನಪದ ನಾಟಕ ಜೋಡು ಜೀಟಿಗೆ, ಪೂರ್ಣಾಹುತಿ, ಧ್ವಜಾರೋಹಣ ನಡೆಯಲಿದೆ.
18ರಂದು ಬೆಳಗ್ಗೆ ಮಹಾಪೂಜೆ, ಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ತುಲಾಭಾರ ಸೇವೆ, ಸಂದರ್ಶನ, ಹೂವಿನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಹೂವಿನ ಪೂಜೆ ಹಾಗೂ ರಾತ್ರಿ ಸೂರಾಲು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯಿಂದ ಮಾಯಾಕೃಷ್ಣ-ಶ್ರೀಕೃಷ್ಣ, ಉತ್ಸವ ಬಲಿ, ಮೃಗಯಾ ವಿಹಾರ ಯಕ್ಷಗಾನ ಬಯಲಾಟ ಪ್ರದರ್ಶನವಿದೆ.
19ರಂದು ಬೆಳಗ್ಗೆ ಮಹಾಸಂಪ್ರೊಕ್ಷಣೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ತೀರ್ಥ ವಿತರಣೆ, ರಾತ್ರಿ ರಂಗಪೂಜೆ ಜರುಗಲಿದೆ ಎಂದು ಸೂರಾಲು ಅರಮನೆ ಕುಟುಂಬಸ್ಥರು, ಆಡಳಿತ ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೌರಾಣಿಕ ಕ್ಷೇತ್ರ
ಸೂರಾಲು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೌರಾಣಿಕ ಕ್ಷೇತ್ರವಾಗಿದೆ. ಸೂರಾಲು ಅರಮನೆಯ ಅರಸರು ವಿಜೃಂಭಣೆಯಿಂದ ಸೂರಾಲು ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ. ಧ್ವಜಾರೋಹಣದ ನಂತರ ಗೆಂಡೋತ್ಸವ, ರಥೋತ್ಸವ, ದೀಪೋತ್ಸವಗಳಂದು ಮೂರು ರಥಗಳನ್ನು ಎಳೆಯುತ್ತಾರೆ. ಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವವನ್ನೂ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಕಾರ್ತಿಕ ಮಾಸದಲ್ಲಿ ಅಡಕೆ ಮಹಾರಂಗ ಪೂಜೆ, ದೀಪೋತ್ಸವ, ಶಿವರಾತ್ರಿಯ ಭಜನಾ ಮಂಗಲೋತ್ಸವ ಕ್ಷೇತ್ರದ ವಿಶೇಷವಾಗಿದೆ.