ಶ್ರೀನಗರ: ಹಣದುಬ್ಬರದ, ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ಕಡಿತ ಸೇರಿದಂತೆ ಹತ್ತಾರು ಸಮಸ್ಯೆಗಳ ವಿರುದ್ಧ ತಿರುಗಿಬಿದ್ದಿರುವ ಸ್ಥಳೀಯರು, ಪಾಕಿಸ್ತಾನ ಸೇನೆ ಹಾಗೂ ಪೊಲೀಸರ ವಿರುದ್ಧ ಬೃಹತ್ ಹೋರಾಟ ನಡೆಸಿದ್ದಾರೆ.
ಇದನ್ನೂ ಓದಿ: ತುಮಕೂರಿನಲ್ಲಿ ಪೈಶಾಚಿಕ ಕೃತ್ಯ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ!
ಶನಿವಾರ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದ ಪರಿಣಾಮ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದರೆ, 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪ್ರತಿಭಟನಾಕಾರರು ‘ಆಜಾದಿ’ (ಸ್ವಾತಂತ್ರ್ಯ) ಘೋಷಣೆಗಳನ್ನು ಕೂಗುತ್ತಿದ್ದಾರೆ. ಮುಜಫರಾಬಾದ್ ಮತ್ತು ಇತರ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು, ಪೊಲೀಸರು ಮತ್ತು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿ ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು ಜಮ್ಮು ಮತ್ತು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ ಹೊತ್ತುಕೊಂಡಿದೆ. ಶುಕ್ರವಾರ ಮುಷ್ಕರಕ್ಕೆ ಕರೆ ನೀಡಿದ ನಂತರ ಹತ್ತಾರು ನಾಯಕರು ಮತ್ತು ಕ್ರಿಯಾ ಸಮಿತಿಯ ಸದಸ್ಯರನ್ನು ಬಂಧಿಸಲಾಗಿದೆ. 2023ರ ಆಗಸ್ಟ್ನಲ್ಲೂ ಈ ಸಮಿತಿ ಇದೇ ರೀತಿ ಪ್ರತಿಭಟನೆ ನಡೆಸಿತ್ತು.
“ದಡ್ಯಾಲ್ನಲ್ಲಿ ನಮ್ಮ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ದೌರ್ಜನ್ಯದ ವಿರುದ್ಧ ಪಿಒಕೆ ಮತ್ತು ನಿರ್ದಿಷ್ಟವಾಗಿ ಮುಜಫರಾಬಾದ್ನಲ್ಲಿ ಸಂಪೂರ್ಣ ಶಟರ್-ಡೌನ್ ಮತ್ತು ವೀಲ್-ಜಾಮ್ ಮುಷ್ಕರವನ್ನು ಆಚರಿಸಲಾಗುವುದು” ಎಂದು ಮುಜಫರಾಬಾದ್ ವರ್ತಕರ ಸಂಘದ ಅಧ್ಯಕ್ಷ ಸೌಕತ್ ನವಾಜ್ ಮಿರ್ ಹೇಳಿದ್ದಾರೆ. ಈ ಕುರಿತು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ, IANS ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಹಣದುಬ್ಬರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ದರ ಗಗನಮುಖಿಯಾಗಿದೆ. ಗ್ಯಾಸ್ ಸಿಲಿಂಡರ್ ದರ 12,500 ರೂ. ತಲುಪಿದ್ದರೆ, 1 ಕೆಜಿ ಗೋಧಿ ಹಿಟ್ಟು 800 ರೂ. ದಾಟಿದೆ. ಲೀಟರ್ ಹಾಲಿನ ದರ ಕೂಡ 210 ರೂ. ತಲುಪಿದೆ. ಒಂದು ರೊಟ್ಟಿ ತಿನ್ನುವುದಕ್ಕೂ ಸಾಧ್ಯವಾಗದ ಸ್ಥಿತಿಗೆ ಜನಸಾಮಾನ್ಯರು ತಲುಪಿದ್ದಾರೆ. ಇನ್ನು ವಿದ್ಯುತ್ ಕಡಿತ ಕೂಡ ಜನ ಜೀವನವನ್ನು ದುಸ್ತರಗೊಳಿಸಿದೆ. ಈ ದುರವಸ್ಥೆಗೆ ಪಾಕಿಸ್ತಾನದ ಸೇನೆ, ಸರ್ಕಾರವೇ ಕಾರಣ ಎಂದು ದೂರುತ್ತಿರುವ ಜನರು ಭಾರತಕ್ಕೆ ಸೇರ್ಪಡೆ ಮಾಡುವಂತೆ ರಸ್ತೆ ರಸ್ತೆಗಳಲ್ಲಿ ಘೋಷಣೆ ಕೂಗುತ್ತಿದ್ದಾರೆ.