ವಿಜಯವಾಣಿ ಸುದ್ದಿಜಾಲ ಸುಳ್ಯ
ರಾಘವೇಂದ್ರ ಮಠದ ಮೂಲಕ ನಿರಂತರ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವುದರಿಂದ ನಮ್ಮ ಸಂಸ್ಕೃತಿ, ಸಂಸ್ಕಾರ ಬೆಳೆಯುತ್ತಿದೆ ನಮ್ಮ ಧರ್ಮ, ಧಾರ್ಮಿಕತೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ರಾಯರ 353ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತಮಾಡಿದರು.
ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾಂಸ ವಿಶ್ವಮೂರ್ತಿ ಮಾತನಾಡಿ, ಶಿಷ್ಯರ ಮನಸ್ಸನ್ನು ಅರಿತು ಶಿಷ್ಯರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾ ಗುರುಗಳು ಹಾಗೂ ತತ್ವಜ್ಞಾನಿಗಳು ರಾಘವೇಂದ್ರ ಸ್ವಾಮಿಗಳು ಎಂದರು.
ಉದ್ಯಮಿ ಬಲರಾಮ ಆಚಾರ್ಯ ಮಾತನಾಡಿ, ಧಾರ್ಮಿಕ ಆಚರಣೆಗಳಿಗೆ ಸಾಮಾಜಿಕ ಅಯಾಮಗಳು ಬರುತ್ತಿರುವುದು ನಮ್ಮಲ್ಲಿ ಒಗ್ಗಟ್ಟನ್ನು ಉಂಟು ಮಾಡಲು ಸಹಾಯಕವಾಗಿದೆ ಎಂದು ಹೇಳಿದರು.
ಆರಾಧನಾ ಮಹೋತ್ಸವದ ಅಂಗವಾಗಿ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಬೆಳಗ್ಗಿನಿಂದ ಗಣಪತಿ ಹವನ, ಪವಮಾನ ಹೋಮ, ಪವಮಾನ ಅಭಿಷೇಕ, ಭಜನಾ ಕಾರ್ಯಕ್ರಮ, ಬ್ರಾಹ್ಮಣಾರಾಧನೆ, ಮಹಾಪೂಜೆ ನಡೆದು ಮಂತ್ರಾಕ್ಷತೆಯೊಂದಿಗೆ ಪ್ರಸಾದ ವಿತರಣೆಯಾಯಿತು.
ಬೃಂದಾವನ ಸೇವಾ ಟ್ರಸ್ಟ್ನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್, ಕೃಷಿಕ ಪ್ರಭಾಕರ ಕಲ್ಲೂರಾಯ ಬೊಳ್ಳೂರು, ಸಾಹಿತಿ ಸುಮಾ ಸುಬ್ಬರಾವ್ ಅತಿಥಿಗಳಾಗಿದ್ದರು. ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಪ್ರವೀಣ್ ರಾವ್ ವಂದಿಸಿದರು.